ಶಿವಮೊಗ್ಗದ ಇರ್ಶಾದ್ ಬಿನ್ ಅನ್ವರ್ ಎಂಬುವವರು ದಿ ಮ್ಯಾನೇಜರ್, ಯುನಿಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಶಿವಮೊಗ್ಗ ಇವರ ವಿರುದ್ದ ನಾಲ್ಕು ಚಕ್ರದ ವಾಹನದ ಇನ್ಸೂರೆನ್ಸ್ ಸಂಬಂಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವೂ ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.


ಇರ್ಶಾದ್ ನಾಲ್ಕು ಚಕ್ರದ ವಾಹನವನ್ನು ಖರೀಸಿದ್ದು, ಎದುರುದಾರರ ಬಳಿ ಇನ್ಸೂರೆನ್ಸ್ ಅನ್ನು ಮಾಡಿಸಿದ್ದು, ಪಾಲಿಸಿಯು ದಿ:23/8/2023 ರಿಂದ 12/6/2024 ರವರೆಗೆ ಚಾಲ್ತಿಯಲ್ಲಿರುತ್ತದೆ. ದಿ:25/9/2023 ರಂದು ವಾಹನ ಚಲಿಸುವಾಗ ಬಾನೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಾಹನವೂ ಸಂಪೂರ್ಣ ಹಾಳಾಗಿದೆ. ಈ ಸಂಬಂಧ ಕ್ರಿಮಿನಲ್ ಕೇಸ್ ದಾಖಲಾಗಿರುತ್ತದೆ. ವಾಹನದ ಬೆಲೆ ರೂ.9,74,378/- ಗಳಾಗಿದೆ ಎಂದು ದೂರುದಾರರು ಎದುರುದಾರರ ಬಳಿ ಎಲ್ಲಾ ದಾಖಾತಿಗಳನ್ನು ಸಲ್ಲಿಸಿ ಇನ್ಸೂರೆನ್ಸ್ ಕ್ಲೈಮ್ ಮಾಡಿಕೊಡಲು ಸೆಪ್ಟೆಂಬರ್-2023 ರಲ್ಲಿ ಕೋರಿರುತ್ತಾರೆ.

ಆದರೆ, ದೂರುದಾರರು ಎದುರುದಾರರ ಬಳಿ ಹಲವಾರು ಬಾರಿ ಕೇಳಿಕೊಂಡರು ಕ್ಲೈಮ್ ಮೊತ್ತವನ್ನು ನೀಡದೆ ಇರುವುದರಿಂದ ವಕೀಲರ ಮೂಲಕ ನೋಟೀಸ್ ನೀಡಿದ್ದು, ಎದುರುದಾರರಿಗೆ ನೋಟೀಸ್ ತಲುಪಿದ್ದರು ಯಾವುದೇ ಪ್ರತ್ಯುತ್ತರವಾಗಲೀ ಕ್ಲೈಮಿನ ಮೊತ್ತವನ್ನಾಗಲಿ ನೀಡಿರುವುದಿಲ್ಲವೆಂದು ಮತ್ತು ಇದು ಸೇವಾ ನ್ಯೂನತೆಯಾಗಿರುತ್ತದೆಂದು ಎದುರುದಾರರ ವಿರುದ್ದ ಅಪಾದಿಸಿ ದೂರನ್ನು ಸಲ್ಲಿಸಿರುತ್ತಾರೆ.
ಆಯೋಗವು ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ವಕೀಲರ ಮೂಲಕ ಹಾಜರಾಗಿ ತಕರಾರನ್ನು ಸಲ್ಲಿಸಿ ದೂರುದಾರರ ವಾಹನದ ಐಡಿವಿ ಮೊತ್ತ ರೂ.5 ಲಕ್ಷಗಳೆಂದು ಮತ್ತು ದೂರುದಾರರು ಮತ್ತು ವಾಹನದ ಚಾಲಕರು ಸರ್ವೇಯರ್ ನಡೆಸಿದ ತನಿಖೆಗೆ ಸಹಕರಿಸಿರುವುದಿಲ್ಲವಾದ್ದರಿಂದ ದೂರುದಾರರು ಸ್ವತಃ ಎದುರುದಾರರು ಕ್ಲೈಮ್ ಸೆಟ್ಲಮೆಂಟ್ ಮಾಡದಿರಲು ಹೊಣೆಯಾಗಿರುವ ಕಾರಣ ದೂರನ್ನು ವಜಾ ಮಾಡಲು ಕೋರಿರುತ್ತಾರೆ.


ದೂರುದಾರರ ಮತ್ತು ಎದುರುದಾರರ ಸಾಕ್ಷ ಪ್ರಮಾಣ ಪತ್ರ, ದಾಖಲೆಗಳನ್ನು ಪರಿಶೀಲಿಸಿ ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ, ದೂರುದಾರರು ಈ ಆಯೋಗದಲ್ಲಿ ದೂರನ್ನು ಸಲ್ಲಿಸಿದ 3 ತಿಂಗಳ ನಂತರ ದೂರುದಾರರ ಕ್ಲೈಮ್‌ನ್ನು ವಜಾ ಮಾಡಿರುವುದು ಎದುರುದಾರರ ನಡತೆಯನ್ನು ತೋರಿಸುತ್ತದೆ ಮತ್ತು ದೂರುದಾರರು ಸಲ್ಲಿಸಿರುವ ದಾಖಲೆಗಳ ಆಧಾರ ಮೇಲೆ ಎದುರುದಾರರ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರನ್ನು ಭಾಗಶಃ ಪುರಸ್ಕರಿಸಿದೆ ಹಾಗೂ ಈ ಆದೇಶವಾದ ದಿನಾಂಕದಿಂದ 45 ದಿನಗಳೊಳಗಾಗಿ ಎದುರುದಾರರು ದೂರುದಾರರಿಗೆ ವಾಹನದ ಐಡಿವಿ ಮೊತ್ತ ರೂ.5 ಲಕ್ಷಗಳನ್ನು ಶೇ.9ರ ಬಡ್ಡಿಯೊಂದಿಗೆ ದಿ;27/7/2024 ರಿಂದ ಪಾವತಿಸಬೇಕೆಂದು, ತಪ್ಪಿದಲ್ಲಿ ಆ ಮೊತ್ತಕ್ಕೆ ಶೇ.12 ರಂತೆ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಪೂರಾ ಹಣ ಪಾವತಿಸುವವರೆಗೂ ನೀಡಬೇಕೆಂದು ಹಾಗೂ ರೂ.25,000/-ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ವನ್ನು ವ್ಯಾಜ್ಯದ ಖರ್ಚಾಗಿ ಎದುರುದಾರರು ದೂರುದಾರರಿಗೆ ನೀಡಬೇಕು. ತಪ್ಪಿದಲ್ಲಿ ಈ ಮೊತ್ತಗಳಿಗೆ ಶೇ.12 ರಂತೆ ಬಡ್ಡಿಯನ್ನು ಸೇರಿಸಿ ಈ ಆದೇಶವಾದ ದಿನಾಂಕದಿಂದ ಪೂರಾ ಹಣ ಪಾವತಿಸುವವರೆಗೂ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಡಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮೇ,23 ರಂದು ಆದೇಶಿಸಿದೆ.

Leave a Reply

Your email address will not be published. Required fields are marked *