ಮಂಜುನಾಥ್ ಶೆಟ್ಟಿ…

ಶಿವಾಜಿ ಮಹಾರಾಜರು ಧೈರ್ಯ, ಶೌರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದಾರೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ ಎಸ್ ಚಂದ್ರಭೂಪಾಲ ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮAದಿರದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರು ಹಿಂದೂಸ್ತಾನಕ್ಕೆ ನೀಡಿರುವ ಕೊಡುಗೆ ಅಪಾರ. ಎಲ್ಲ ಕ್ಷೇತ್ರದಲ್ಲಿ ಮರಾಠ ಸಮಾಜದ ಅಸ್ತಿತ್ವವನ್ನು ನಾವು ಕಾಣಬಹುದಾಗಿದೆ. ನಮ್ಮ ಮಕ್ಕಳಿಗೆ ಶಿವಾಜಿ ಮಹಾರಾಜರ ಬಗ್ಗೆ ತಿಳಿಸಬೇಕಿದ್ದು ಧೈರ್ಯ, ಶೌರ್ಯ, ಮಹಿಳೆಯರಿಗೆ ಗೌರವ, ಹೋರಾಟದ ಶ್ರದ್ದೆ ಮತ್ತು ಸ್ವಾಭಿಮಾನದಂತಹ ಗುಣಗಳನ್ನು ಶಿವಾಜಿಯವರನ್ನು ನೋಡಿ ಕಲಿಯಬೇಕಿದೆ ಎಂದರು.


ತೀರ್ಥಹಳ್ಳಿ ಚಿಟ್ಟೆಬೈಲು ಪ್ರಜ್ಞಾಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಲೋಹಿತಾಶ್ವ ಕೇದಿಗ್ಗೆರೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಹೆಸರೇ ನಮ್ಮ ಮಕ್ಕಳನ್ನು ಬೆಳೆಸಲು ಪ್ರೇರಣಾ ಶಕ್ತಿಯಾಗಿದೆ. ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿ ಗರ್ಭದಿಂದಲೇ ಮಗನಿಗೆ ಶಿಕ್ಷಣ ನೀಡಿದ್ದಾರೆ. ಶಿವಾಜಿ ಚಿಕ್ಕವನಿರುವಾಗಲೇ ಧೈರ್ಯದ, ಶೌರ್ಯದ, ಸ್ವಾಭಿಮಾನದ ಶಿಕ್ಷಣವನ್ನು ತಾಯಿ ಜೀಜಾಬಾಯಿ ನೀಡಿದ್ದಾರೆ. ಶಿವಾಜಿಯವರ ಚಿಂತನೆಗಳು, ತತ್ವಗಳು ನಮ್ಮ ಮಕ್ಕಳಲ್ಲಿ ಬರಬೇಬೆಕೆಂದರೆ ಎಲ್ಲ ತಾಯಂದಿರು ಜೀಜಾಬಾಯಿ ಆಗಬೇಕು ಎಂದ ಅವರು ಶಿವಾಜಿಯವರು ತಮ್ಮ 12 ನೇ ವಯಸ್ಸಿನಲ್ಲಿಯೇ ಸ್ವಯಂಭು ಲಿಂಗದ ಮುಂದೆ ಹಿಂದುವೀ ಸಾಮ್ರಾಜ್ಯ ನಿರ್ಮಾಣ ಮಾಡುವುದಾಗಿ ಸಂಕಲ್ಪ ಮಾಡಿದ್ದರೆಂದು ತಿಳಿಸಿದರು.


ಜೀಜಾ ಬಾಯಿಯವರಿಗೆ ತಮ್ಮ ಮಗು ಗರ್ಭದಲ್ಲಿರುವಾಗ ಸಾಮಾನ್ಯ ಹೆಣ್ಣು ಮಕ್ಕಳ ರೀತಿಯ ಬಯಕೆಗಳು ಇರಲಿಲ್ಲ. ಅಸಾಮಾನ್ಯವಾದ ಬಯಕೆಗಳನ್ನು ಆಕೆ ಹೊಂದಿದ್ದರು. ಉತ್ತಮ ಇತಿಹಾಸ ಮರುಸ್ಥಾಪನೆ ಮಾಡುವಂತಹ ಮಗ ಹುಟ್ಟಲಿ ಎಂಬ ಕನಸು ಕಂಡಿದ್ದರು. ಪ್ರತಿ ತಾಯಿಯೂ ಜೀಜಾಬಾಯಿ ಆಗಬೇಕು ಹಾಗೂ ಪ್ರತಿ ಗುರು ದಾದಾಜಿ ಕೊಂಡದೇವರಾಗಬೇಕು ಆಗ ಶಿವಾಜಿಯಂತಹ ಮಕ್ಕಳು ಬೆಳೆಯಲು ಸಾಧ್ಯವಾಗುತ್ತದೆ.


ಗೋವುಗಳು ನಡೆಯುವ ದಾರಿಯಲ್ಲಿ ದಾರಿಗಳ ನಿರ್ಮಾಣವಾಗುತ್ತದೆ. ಗೋವು ಸಂತತಿಗಳೇ ನಮಗೆ ದಾರಿಗಳನ್ನು ನೀಡಿದ್ದು, ನಮ್ಮ ಬದುಕಿಗೆ ಪೂರಕವಾಗಿ ಅವು ಬದುಕುತ್ತಿವೆ. ಇಂತಹ ಗೋವನ್ನು ಮಾತೆಯೆಂದು ಗೌರವಿಸಬೇಕು. ಮಹಿಳೆಯರನ್ನು ಗೌರವಿಸಬೇಕು ಎಂದು ಶಿವಾಜಿ ಸಾರಿದ್ದು ಪ್ರತಿ ಮಕ್ಕಳು ಶಿವಾಜಿ ರೂಪ ತಾಳಬೇಕು. ಶಿವಾಜಿಯವರು ಯಾವುದೇ ರಾಜ್ಯ, ಜಾತಿಗೆ ಸೀಮಿತರಲ್ಲ ಅವರು ಅಸೀಮರಾಗಿದ್ದು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಶಿವಾಜಿ ಮಹಾರಾಜರ ಅಧ್ಯಯನ ಪೀಠವಾಗಬೇಕು ಎಂದರು.


ಶಿವಾಜಿಯವರು ಸಂಸ್ಕೃತದಲ್ಲಿ ಮುದ್ರೆ ಬಿಡುಗಡೆ ಮಾಡಿದರು. ಜಗತ್ತಿನ ಮಂಗಳಕ್ಕಾಗಿ ಶಿವಾಜಿಯ ಮುದ್ರೆ ಇದೆ ಎಂದು ಸಾರಿದರು. ಪರಮಾತ್ಮನ, ಧರ್ಮದ ಕೆಲಸಕ್ಕಾಗಿ ಹಾಗೂ ಶಿಷ್ಟ ರಕ್ಷಣೆಗಾಗಿ, ಕೆಟ್ಟದನ್ನು ನಾಶ ಮಾಡುವುದಕ್ಕಾಗಿಯೇ ಶಿವಾಜಿ ಜನ್ಮವಾಗಿದೆ ಎಂದು ತಾಯಿ ಜೀಜಾಬಾಯಿ ಅವರನ್ನು ಬೆಳೆಸಿದ್ದು, 16 ನೇ ವಯಸ್ಸಿನಲ್ಲಿಯೇ ಸೈನ್ಯ ಕಟ್ಟಿ ನಾವೆಲ್ಲ ಒಂದೇ ಎಂಬ ಸಂದೇಶ ನೀಡಿ, ತೋರಣಗಡ ಕೋಟೆಯನ್ನೇ ಗೆದ್ದಿದ್ದರು ಶಿವಾಜಿ. ಸ್ವಂತ ಶಕ್ತಿ ಮತ್ತು ಪ್ರತಿಭೆಯಿಂದ ರಾಜನಾಗಿ ಹೊರಮ್ಮಿದ ಶಿವಾಜಿ ಮಹಾರಾಜರು ತಮ್ಮ ಆಡಳಿತ ವೈಖರಿಗೆ ಹೆಸರಾಗಿದ್ದು ಸುರಾಜ್ಯ, ಸ್ವರಾಜ್ಯದ ಬಗ್ಗೆ ತಿಳಿಸಿದ್ದಾರೆ. ಪ್ರತಾಪಗಡ ಯುದ್ದದಲ್ಲಿ ನಾವು ಶಿವಾಜಿಯವರ ವೀರತ್ವ ಮತ್ತು ಶೂರತ್ವ ಕಾಣಬಹುದು ಎಂದರು.


ಶಿವಾಜಿ ಮಹಾರಾಜರ ತತ್ವ, ಚಿಂತನೆಗಳು ಹಾಗೂ ಅವರ ಪ್ರತಿ ಹೆಜ್ಜೆಯನ್ನು ಮುಂದಿನ ಪೀಳಿಗೆಗೆ ನಾವು ತಿಳಿಸಬೇಕಿದೆ. ಶಿವಾಜಿಯವರ ಕುರಿತಾದ ಪುಸ್ತಕಗಳನ್ನು ಮಕ್ಕಳಿಗೆ ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ ಮಾತನಾಡಿ, ಭಾರತ ದೇಶದ ಅತ್ಯಂತ ಪ್ರಮುಖ ರಾಜರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದು ಧೈರ್ಯ, ಶೌರ್ಯಕ್ಕೆ ಅವರು ಮಾದರಿಯಾಗಿದ್ದಾರೆ. ಸಂಘಟಿತ ನೌಕಾಪಡೆಯನ್ನು ನಿರ್ಮಿಸಿದ ಮಹಾನ್ ಯೋಧರಾಗಿದ್ದು ಆದರ್ಶಪುರುಷರಾಗಿದ್ದಾರೆ.

ಇಂತಹ ಮಹಾನ್ ವ್ಯಕ್ತಿಯ ಸಂದೇಶಗಳನ್ನು, ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕಾರಿಯಪ್ಪ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ಜಿಲ್ಲಾಧ್ಯಕ್ಷ ಆರ್.ಚಂದ್ರರಾವ್ ಗಾರ್ಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ರಮೇಶ್ ಬಾಬು ಜಾದವ್ ಚುಡಾಮಣಿ ಪವರ್ ಮುಂತಾದ ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *