ಶಿವಮೊಗ್ಗ ವಿನೋಬನಗರ ನಿವಾಸಿ ಶ್ರೀಮತಿ ವೆಂಕಟಲಕ್ಷ್ಮೀ ಎಂಬುವವರು ಬೆಂಗಳೂರಿನ ಶ್ರೀ ಧತ್ರಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಪಾಲುದಾರರಾದ ಸೌಮಿ ಮಂಜುನಾಥ ಹಾಗೂ ಮಂಜುನಾಥ ಬಿ. ಎಂಬುವವರ ಮೇಲೆ ನಿವೇಶನ ಖರೀದಿಸಲು ಹಣ ಪಾವತಿಸಿದ್ದು, ಕ್ರಯಪತ್ರ ಮಾಡಿಕೊಡದೇ ಸೇವಾನ್ಯೂನತೆ ಎಸಗಿದ್ದಾರೆಂದು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಪರಿಶೀಲಿಸಿ, ಹಣವನ್ನು ಮರುಪಾವತಿ ಮಾಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ನೀಡಿದೆ.
ದೂರುದಾರರು ಶ್ರೀ ಧತ್ರಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಯಲಚಗೆರೆಯಲ್ಲಿ ರೂ. 5.00 ಲಕ್ಷಗಳಿಗೆ 40/20 ಅಳತೆಯ ನಿವೇಶನವನ್ನು ಖರೀದಿಸಿ ಕಂತಿನಲ್ಲಿ ಒಟ್ಟು ರೂ. 4.99 ಲಕ್ಷಗಳನ್ನು ಅ. 2024ರವರೆಗೆ ಪಾವತಿಸಿರುತ್ತಾರೆ. 6 ತಿಂಗಳೊಳಗೆ ಕ್ರಯಪತ್ರ ಮಾಡಿಕೊಡುತ್ತೇವೆಂದು ಹೇಳಿದ ಎದುರುದಾರರು ಹಲವಾರು ಬಾರಿ ಕೇಳಿದ್ದು, 2025ರಲ್ಲಿ ಲೀಗಲ್ ನೋಟಿಸ್ ನೀಡಿದರೂ ಯಾವುದೇ ಪ್ರತ್ಯುತ್ತರ ನೀಡದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಆಯೋಗಕ್ಕೆ ದೂರು ಸಲ್ಲಿಸಿರುತ್ತಾರೆ.
ದೂರನ್ನು ದಾಖಲಿಸಿಕೊಂಡು ಆಯೋಗವು ಎದುರುದಾರರಿಗೆ ನೋಟಿಸ್ ನೀಡಿದ್ದು, ಎದುರುದಾರರ ಹಾಜರಾಗದೇ ಇರುವುದರಿಂದ ಏಕಪಕ್ಷೀಯವಾಗಿ ದೂರುದಾರರ ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ವಾದವನ್ನು ಆಲಿಸಿ, ಎದುರುದಾರರು ದೂರುದಾರರಿಂದ ಹಣ ಪಡೆದು ಕ್ರಯಪತ್ರ ಮಾಡಿಕೊಡದೆ ಸೇವಾನ್ಯೂನತೆ ಎಸಗಿದ್ದಾರೆಂದು ತೀರ್ಮಾನಿಸಿ ದೂರನ್ನು ಭಾಗಶಃ ಪರಿಸ್ಕರಿಸಿದೆ. ಎದುರುದಾರರು ದೂರುದಾರರಿಂದ ಪಡೆದು ಮೊತ್ತ ರೂ. 4.99 ಲಕ್ಷವನ್ನು ವಾರ್ಷಿಕ ಶೇ. 9 ರಂತೆ ದಿ: 02/04/2025 ರಿಂದ ಬಡ್ಡಿಯನ್ನು ಸೇರಿಸಿ ಈ ಆದೇಶವಾದ 45 ದಿನಗಳೊಳಗಾಗಿ ಪೂರ್ತಿ ಹಣ ಪಾವತಿಸುವುದು. ತಪ್ಪಿದ್ದಲ್ಲಿ, ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವುದು. ಹಾಗೂ ರೂ. 50000/- ಗಳನ್ನು ಮಾನಸಿಕ ಹಿಂಸೆ ಮತ್ತು ಅನಾನುಕೂಲತೆಗೆ ಪರಿಹಾರವಾಗಿ ಮತ್ತು ರೂ. 10000/- ಗಳನ್ನು ದೂರಿನ ಖರ್ಚುವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸುವುದು. ತಪ್ಪಿದ್ದಲ್ಲಿ ವಾರ್ಷಿಕ ಶೇ. 10 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡಬೇಕೆಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠವು ಮೇ 30 ರಂದು ಆದೇಶಿಸಿದೆ.