ಮಂಜುನಾಥ ಶೆಟ್ಟಿ…
ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಶಿವಮೊಗ್ಗ ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಸಕಾಲದಲ್ಲಿ ಮಳೆ ಬಾರದೇ ಇರುವುದರಿಂದ ರೈತರು ಎದುರಿಸುತ್ತಿರುವ ಸಮಸ್ಯೆಗೆ ಕೃಷಿ ಇಲಾಖೆ ಸೂಕ್ತ ಪರ್ಯಾಯ ಮಾರ್ಗೋಪಾಯಗಳನ್ನು ಪ್ರಕಟಿಸಿದೆ. ರೈತರು ತಮ್ಮ ಹಿತದೃಷ್ಟಿಯಿಂದ ಕೆಳಕಂಡ ಕೃಷಿ ಪದ್ಧತಿಗಳು ಹಾಗೂ ಪರ್ಯಾಯ ಬೆಳೆಗಳನ್ನು ಅನುಸರಿಸುವಂತೆ ಶಿವಮೊಗ್ಗ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಬೀಜೋಪಚಾರ ಮತ್ತು ಅಂತರ ಬೆಳೆ: ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುವ ರೈತರು, ಪ್ರತಿ 8 ಸಾಲು ಮೆಕ್ಕೆಜೋಳದ ಜೊತೆಗೆ 2 ಸಾಲು ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಹೆಸರು ಅಥವಾ ಉದ್ದು ಬೆಳೆಗಳನ್ನು ಅಂತರ ಬೆಳೆಯಾಗಿ ಬಿತ್ತನೆ ಮಾಡಬೇಕು. ಬಿತ್ತನೆಗೆ ಮುನ್ನ ಪ್ರತಿ ಕೆ.ಜಿ. ಬೀಜಕ್ಕೆ 4 ಗ್ರಾಂ ಮೆಟಾಲಾಕ್ಸಿಲ್ ಎಂ.ಝಡ್. ಮತ್ತು 5 ಎಂ.ಎಲ್. ಕ್ಲೋರೋಪೈರಿಫಾಸ್ ಬೆರೆಸಿ ಬೀಜೋಪಚಾರ ಮಾಡುವುದು ಕಡ್ಡಾಯವಾಗಿದೆ.
ರಸಗೊಬ್ಬರ ನಿರ್ವಹಣೆ…
ಈಗಾಗಲೇ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದ್ದು, ಮಣ್ಣಿನಲ್ಲಿ ತೇವಾಂಶ ಕಡಿಮೆ ಇದ್ದಲ್ಲಿ ಹರಳು ರೂಪದ ಗೊಬ್ಬರವನ್ನು ಬಳಸಬಾರದು. ಬದಲಾಗಿ, ನೀರಿನಲ್ಲಿ ಕರಗುವ 19:19:19 ಗೊಬ್ಬರವನ್ನು (ಪ್ರತಿ ಲೀಟರ್ ನೀರಿಗೆ 5 ಗ್ರಾಂ) ಬೆರೆಸಿ, ಬಿತ್ತನೆಯಾದ 25ನೇ ದಿನ ಹಾಗೂ 45ನೇ ದಿನದಂದು ಸಿಂಪಡಿಸಬೇಕು.
ತೇವಾಂಶ ಸಂರಕ್ಷಣೆ: ಹೊಲದಲ್ಲಿ ಎರಡು ಸಾಲುಗಳ ಮಧ್ಯೆ ಎಡೆಕುಂಟೆ ಹಾಯಿಸುವುದರಿಂದ ಕಳೆಗಳನ್ನು ನಿಯಂತ್ರಿಸುವುದರ ಜೊತೆಗೆ, ಮಣ್ಣಿನಿಂದ ನೀರು ಆವಿಯಾಗುವುದನ್ನು ತಡೆದು ತೇವಾಂಶವನ್ನು ಕಾಯ್ದುಕೊಳ್ಳಬಹುದು.
ಭತ್ತದ ಬೇಸಾಯ…
ತಗ್ಗು ಪ್ರದೇಶ ಹಾಗೂ ನೀರಿನ ಲಭ್ಯತೆ ಇರುವ ಕಡೆಗಳಲ್ಲಿ ಮಧ್ಯಮಾವಧಿ ಭತ್ತದ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಂಪ್ರದಾಯಿಕ ನಾಟಿ ಪದ್ಧತಿಯ ಬದಲಾಗಿ ‘ಡ್ರಂಸೀಡರ್’ ಬಳಸಿ ಬಿತ್ತನೆ ಮಾಡುವುದು ಸೂಕ್ತ.
ಜುಲೈ ಕೊನೆಯ ವಾರದ ಪರ್ಯಾಯ: ಒಂದು ವೇಳೆ ಮುಂಗಾರು ಮಳೆ ಜುಲೈ ನಾಲ್ಕನೇ ವಾರದವರೆಗೂ ತಡವಾದರೆ, ರೈತರು ರಾಗಿ ಹಾಗೂ ದ್ವಿದಳ ಧಾನ್ಯದ ಬೆಳೆಗಳನ್ನು ಬಿತ್ತನೆ ಮಾಡಲು ಆದ್ಯತೆ ನೀಡಬೇಕು.
ಗಮನಿಸಿ…
ಬಿತ್ತನೆ ಅಥವಾ ನಾಟಿ ಮಾಡುವ ಮುನ್ನ ಭೂಮಿಯ ತೇವಾಂಶ ಹಾಗೂ ನೀರಿನ ಲಭ್ಯತೆಯನ್ನು ಖಾತರಿ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ. ಹೆಚ್ಚಿನ ಮಾಹಿತಿ ಮತ್ತು ತಾಂತ್ರಿಕ ಮಾರ್ಗದರ್ಶನಕ್ಕಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.