ಶಿವಮೊಗ್ಗ: ರಂಗಾಯಣ ಶಿವಮೊಗ್ಗವು ಕರ್ನಾಟಕ ಸರ್ಕಾರದ `ಸರ್ವರಿಗೂ ಸಂವಿಧಾನ’ ಯೋಜನೆಯಡಿ ಭಾರತೀಯ ಸಂವಿಧಾನವನ್ನು ಸಮಾಜದ ವಿವಿಧ ವರ್ಗಗಳಿಗೆ ಸುಲಭವಾಗಿ ಅರ್ಥೈಸಲು ಸಹಾಯವಾಗುವಂತೆ ಸಂವಿಧಾನದ ಕುರಿತು `ವಿ ದ ಪೀಪಲ್ ಆಫ್ ಇಂಡಿಯಾ’ ನಾಟಕ ಸಿದ್ದಪಡಿಸಿದ್ದು, ಇದರ ಪ್ರಥಮ ಪ್ರದರ್ಶನ ಜ.26 ರ ನಾಳೆ ಸಂಜೆ 6.30 ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದೆ.

ರಾಜ್ಯದ ಖ್ಯಾತ ನಾಟಕಕಾರ ಡಾ.ರಾಜಪ್ಪ ದಳವಾಯಿ ಇವರು ಈ ನಾಟಕವನ್ನು ರಚಿಸಿದ್ದು, ಉದಯೋನ್ಮುಖ ರಂಗ ನಿರ್ದೇಶಕ ಕೆ.ಪಿ.ಲಕ್ಷ್ಮಣ್ ನಿರ್ದೇಶಿಸಿದ್ದಾರೆ. 1ಗಂಟೆ 25 ನಿಮಿಷದ ನಾಟಕದಲ್ಲಿ 20 ಕಲಾವಿದರು ಅಭಿನಯಿಸಲಿದ್ದಾರೆ ಎಂದು ರಂಗಾಯಣ ಶಿವಮೊಗ್ಗದ ನಿರ್ದೇಶಕ ಸಂದೇಶ್ ಜವಳಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಳೆದ ಆರು ತಿಂಗಳುಗಳಿಂದ ಈ ನಾಟಕ ರಚನೆಯ ಬಗ್ಗೆ ಅನೇಕ ನಾಟಕ ರಚನಾ ಕಮ್ಮಟಗಳು, ವಿಶೇಷ ಉಪನ್ಯಾಸ-ವಿಚಾರ ಸಂಕಿರಣಗಳನ್ನು ಆಯೋಜಿಸಿ ವಿಶಿಷ್ಟವಾಗಿ ಈ ನಾಟಕವನ್ನು ಕಟ್ಟಲಾಗಿದೆ. ಸಂವಿಧಾನದ ಆಶಯಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಮಹಿಳಾ ಹಕ್ಕುಗಳು, ಸಂವಿಧಾನ ಕರಡು ರಚನಾ ಸಮಿತಿಯಲ್ಲಿನ ಚರ್ಚೆಗಳು, ಸಂವಿಧಾನದಲ್ಲಿ ಮಹಿಳೆಯರ ಆಶಯಗಳು, ಇತ್ಯಾದಿ ವಿಷಯಗಳನ್ನು ಬಳಸಿ ಈ ನಾಟಕವನ್ನು ಸಿದ್ಧಪಡಿಸಲಾಗಿದೆ ಎಂದರು.ಕರ್ನಾಟಕದ ಬೇರೆ ಬೇರೆ ಭಾಗಗಳ ಕಲಾವಿದರನ್ನು ಸಂದರ್ಶನದ ಮೂಲಕ ತಾತ್ಕಾಲಿಕವಾಗಿ ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಶಿವಮೊಗ್ಗ ರಂಗಾಯಣ ವ್ಯಾಪ್ತಿಯ ಒಂಭತ್ತು ಜಿಲ್ಲೆಗಳಲ್ಲಿ ಮತ್ತು ರಾಜ್ಯದ ವಿವಿಧ ಕಡೆಗಳಲ್ಲಿ ಈ ನಾಟಕದ ಪ್ರದರ್ಶನಗಳನ್ನು ರಂಗಪಯಣದ ಮೂಲಕ ಆಯೋಜಿಸುವ ಯೋಜನೆ ಇದೆ ಎಂದರು.ಈ ನಾಟಕದ ಪ್ರಥಮ ಪ್ರದರ್ಶನವು ಸಂವಿಧಾನದ ದಿನವಾದ ಗಣರಾಜ್ಯೋತ್ಸವದ ನಾಳೆ ಆಯೋಜಿಸಿದ್ದು ಈ ನಾಟಕ ಪ್ರದರ್ಶನವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ. ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಮೇಯರ್ ಸುನಿತಾ ಅಣ್ಣಪ್ಪ, ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪೆÇ್ರ.ಜಗದೀಶ್, ವಕೀಲೆ ಇ.ಪ್ರೇಮಾ, ಬೆಂಗಳೂರು ರಂಗಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ ಆಗಮಿಸಲಿದ್ದಾರೆ ಎಂದರು.

ಸಭಾ ಕಾರ್ಯಕ್ರಮದ ನಂತರ ನಾಟಕ ಪ್ರದರ್ಶನ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ. ಕೋವಿಡ್-19 ರ ಹಿನ್ನೆಲೆಯಲ್ಲಿ ಕೇವಲ 250 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ. ಕೋವಿಡ್-19 ರ ಸರ್ಕಾರದ ನಿಯಾಮವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ ಎಂದ ಅವರು, ಈ ನಾಟಕದ ಪ್ರದರ್ಶನ ಜ.27, 28ರಂದು ಸಹ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ 6.30 ಕ್ಕೆ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಡಾ.ಎ.ಸಿ.ಶೈಲಜಾ, ನಾಟಕದ ನಿರ್ದೇಶಕ ಕೆ.ಪಿ.ಲಕ್ಷ್ಮಣ್, ಆರ್.ಎಸ್.

ವರದಿ ಮಂಜುನಾಥ್ ಶೆಟ್ಟಿ…