ಶಿವಮೊಗ್ಗ: ಸಾಮಾಜಿಕ ಸಾಮರಸ್ಯ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾಶರಣರು ಹೇಳಿದರು.ಅವರು ಇಂದು ಸೀಗೆಹಟ್ಟಿಯ ಹರ್ಷ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾಮಾಜಿಕ ಸಾಮರಸ್ಯ ಇಂದು ಅತಿ ಅಗತ್ಯವಾಗಿದೆ. ಶಾಂತಿ, ಸಹನೆ ಮುಖ್ಯವಾಗಿದೆ. ಎಲ್ಲಾ ಧರ್ಮಗಳಲ್ಲೂ ಶಾಂತಿ, ಸಾಮರಸ್ಯದ ಮಂತ್ರಗಳೇ ಇವೆ. ಆದರೆ, ಪ್ರತಿಯೊಬ್ಬರೂ ಸಾಮರಸ್ಯವನ್ನು ಅಂತರಂಗ ಮತ್ತು ಬಹಿರಂಗದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಭಾರತ ಭಾವೈಕ್ಯತೆಯ ನಾಡು, ಇಲ್ಲಿ ರಾಷ್ಟ್ರೀಯತೆಯೇ ಮುಖ್ಯ. ರಾಷ್ಟ್ರ ಉಳಿದರೆ ನಾವೆಲ್ಲಾ ಉಳಿದಂತೆ. ರಾಷ್ಟ್ರೀಯತೆ ಸಾರುವ ಯುವ ಜನತೆಯಲ್ಲಿ ಹರ್ಷ ಕೂಡ ಒಬ್ಬ. ಇತ್ತೀಚಿಗೆ ಸಂಘರ್ಷಕ್ಕೆ ಬಲಿಯಾಗಿದ್ದಾನೆ. ಸಂಘರ್ಷ ಎನ್ನುವುದು ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ, ಹಿಂಸಾತ್ಮಕ ಸಂಘರ್ಷವನ್ನು ಯಾರೂ ಒಪ್ಪುವುದಿಲ್ಲ.

ಸಮಾಜ ಸಾಮರಸ್ಯದ ಕಡೆಗೆ ನಡೆದರೆ ಮಾತ್ರ ದೇಶ ಪ್ರೇಮ ತಾನಾಗಿಯೇ ಬರುತ್ತದೆ ಎಂದು ಹೇಳಿದರು.ಹತ್ಯೆಯಾದ ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳುವುದು ನಮ್ಮ ಕರ್ತವ್ಯವಾಗಿದೆ. ಅವರ ತಂದೆ, ತಾಯಿ ಸಹೋದರಿಯರಿಗೆ ನಾವು ಸಾಂತ್ವನ ಹೇಳಿ, ಧೈರ್ಯ ತುಂಬಿದ್ದೇವೆ. ಆಶೀರ್ವಾದ ಮಾಡಿದ್ದೇವೆ. ಸಂತರ ನಡೆ ಯಾವಾಗಲೂ ಸಾಮರಸ್ಯದ ಕಡೆಯೇ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಭಗೀರಥ ಪೀಠದ ಡಾ.ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಭೋವಿ ಗುರು ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂಚಿಟಿಗ ಗುರು ಪೀಠದ ಡಾ. ಶಾಂತವೀರ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಮಡಿವಾಳ ಗುರುಪೀಠದ ಡಾ. ಬಸವ ಮಾಚಿದೇವ ಸ್ವಾಮೀಜಿ, ಅಂಬಿಗರ ಗುರುಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ, ಹಡಪದ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಬಸವಕೇಂದ್ರದ ಡಾ. ಬಸವಮರುಳಸಿದ್ಧ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಕೊರಟಗೆರೆಯ ಮಹಾಲಿಂಗ ಸ್ವಾಮೀಜಿ, ಕೆ.ಇ. ಕಾಂತೇಶ್, ಎಸ್.ಎನ್. ಚನ್ನಬಸಪ್ಪ, ಬಳ್ಳೆಕೆರೆ ಸಂತೋಷ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…