ಶಿವಮೊಗ್ಗ: ಆದಿಚುಂಚನಗಿರಿ ಶಾಖಾ ಮಠದಲ್ಲಿಂದು ಶ್ರೀಕಾಲಬೈರವೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ನಿಮಿತ್ತ 24 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮತ್ತು ಆದರ್ಶ ಹಿರಿಯ ದಂಪತಿಗಳಿಗೆ ಸನ್ಮಾನ ಸಮಾರಂಭ ಪೂಜ್ಯರ ಸಮ್ಮುಖದಲ್ಲಿ ನಡೆಯಿತು.

ವಿವಾಹವಾಗಿ 50 ವರ್ಷ ತುಂಬಿದ ಆದರ್ಶ ಹಿರಿಯ ದಂಪತಿಗಳನ್ನು ಸನ್ಮಾನಿಸಿ ಅವರ ಮೂಲಕ ನವ ಬದುಕಿಗೆ ಕಾಲಿಟ್ಟ ವಧು ವರರನ್ನು ಆಶೀರ್ವದಿಸುವ ಈ ಅಪರೂಪದ ಕಾರ್ಯಕ್ರಮದ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿ ಅವರು ವಹಿಸಿದ್ದರು.ಮಹಾಸಂಸ್ಥಾನದ ಪ್ರಧಾನಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆದ  ಸಮಾರಂಭದಲ್ಲಿ ಆಕರ್ಷಣೆ ಎಂಬಂತೆ ನವ ಬದುಕಿಗೆ ಕಾಲಿಟ್ಟ ದಂಪತಿಗಳಿಗೆ ಹಾಗೂ ಹಿರಿಯ ದಂಪತಿಗಳ ಹಬ್ಬವೆಬ್ಬಂತಹ ವಾತಾವರಣ ನಿರ್ಮಾಣವಾಗಿತ್ತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಇಂತಹ ಸುಮಧುರ ಹಾಗೂ ದೈವ ಪ್ರೇರಣೆಯ ಕ್ಷಣಗಳನ್ನು ಕಂಡದ್ದು ಅಪರೂಪ ಜೀವನದ ಅತ್ಯಂತ ಪವಿತ್ರ ಗಳಿಗೆ ಎಂದುಕೊಳ್ಳುತ್ತೇನೆ. ಶ್ರೀಗಳ ಆಶೀರ್ವಾದಗಳೊಂದಿಗೆ ಹೊಸ ಬದುಕಿಗೆ ಕಾಲಿಟ್ಟ ನವ ದಂಪತಿಗಳು ಎಚ್ಚರಿಕೆಯ ಹೆಜ್ಜೆ ಇಡುವ ಮೂಲಕ ಬೆರಳು ತೋರಿಸುವಂತಹ ಕಾರ್ಯಗಳನ್ನು ಕಾಣದಂತೆ ಮಾಡಿ ಪೂಜ್ಯರ ಸಮ್ಮುಖದಲ್ಲಿ ತಂದೆ ತಾಯಿಯರಿಗೆ ಸಮಾನರಾದ ಹಿರಿಯ ದಂಪತಿಗಳನ್ನು ಸತ್ಕರಿಸುವ ಕಾರ್ಯಸಿಕ್ಕದ್ದು ನನ್ನ ಪುಣ್ಯವೆಂದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಾ.ಅಂಜನಪ್ಪ ಅವರು ಮಾತನಾಡಿ, ಕಾಯಿಲೆ ಬಂದ ಮೇಲೆ ತಿದ್ದಿಕೊಳ್ಳುವ ಬದಲು ಕಾಯಿಲೆ ಬರದಂತೆ ನೋಡಿಕೊಳ್ಳುವುದು ಮುಖ್ಯ. ದುಶ್ಚಟಗಳಿಂದ ದೂರವಾಗಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ಮೂರು ತ ಗಳನ್ನು ಸರಿಯಾಗಿ ಬಳಸಿಕೊಳ್ಳಿ, ಅಂದರೆ ನಿತ್ಯ ತಟ್ಟೆತುಂಬಾ ತರಕಾರಿ ತಿನ್ನಿ ಎನ್ನುವ ಮೂಲಕ ಬಹುತೇಕ ನೂರಕ್ಕೆ ನೂರರಷ್ಟು ವೈದ್ಯರು ಯಾವುದೇ ಸಂದರ್ಭದಲ್ಲಿ ರೋಗಿಯ ಚಿಕಿತ್ಸೆಯಲ್ಲಿ ಲೋಪವೆಸಗುವುದಿಲ್ಲ. ಅನಗತ್ಯವಾಗಿ ಅವರನ್ನು ನಿಂದಿಸದಿರಿ ಎಂದ ಅವರು, ಧರ್ಮದ ಕಾರ್ಯಗಳಲ್ಲಿ ಈಗ ಜೊತೆಯಾಗಿ ಹೊಸತನ ಕಲಿತ್ತಿದ್ದೇನೆ. ಇನ್ನೂ ಮುಂದೆ ಚಿಕಿತ್ಸೆಗೆ ಬರುವವರನ್ನು ರೋಗಿ ಎನ್ನುವುದಿಲ್ಲ. ಮನುಷ್ಯ ಎಂದು ಗುರುತಿಸುತ್ತೇನೆ ಎಂದರು.ಆದಿಚುಂಚನಗಿರಿ ಮಹಾಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು, ಧರ್ಮದ ಕಾರ್ಯದಲ್ಲಿ ಒಂದುಗೂಡಿ ಕೆಲಸ ಮಾಡಿ, ಧರ್ಮಪತ್ನಿ ಹಾಗೂ ದಾಂಪತ್ಯ ಜೀವನ ಎಂದುಕೊಳ್ಳಿ. ನವದಂಪತಿಗಳು ಈ ಕೆಳಗಿನ ಅಂಶವನ್ನು ಗಮನದಲ್ಲಿಟ್ಟುಕೊಳ್ಳಿ. ಪತಿ ತನ್ನ ವೇತನವನ್ನು ಪತ್ನಿಗೆ ತಿಳಿಸಬೇಕು. ಹಣಕಾಸು ವ್ಯವಹಾರವು ಪರಸ್ಪರ ಇಬ್ಬರಿಗೂ ಗೊತ್ತಿರಬೇಕು. ನಿಜವಾದ ನಂಬಿಕೆ, ಪ್ರೀತಿ ವಿಶ್ವಾಸ ನಿಮ್ಮ ನಡುವೆ ಇರಲಿ, ಹಿರಿಯ ದಂಪತಿಗಳಿಂದ ನಿಮಗೆ ಆಶೀರ್ವಾದ ಸಿಕ್ಕಿದೆ ಸುಖವಾಗಿ ಬಾಳಿ ಎಂದು ಶುಭ ಹರಿಸಿದರು.

ವರದಿ ಮಂಜುನಾಥ್ ಶೆಟ್ಟಿ…