ಶಿವಮೊಗ್ಗ: ವಿವಿಧ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಇಂದು ಪಾಲಿಕೆ ನಡೆದ ಸಾಮಾನ್ಯ ಸಭೆಯಲ್ಲಿ ಭಾರೀ ಗದ್ದಲ ಉಂಟಾಗಿ ಅಧಿಕಾರಿಗಳ ಮೇಲೆ ಸದಸ್ಯರು ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿ ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿ ಜೊತೆಗೆ ಶಾಸಕರು ಕೇವಲ ಬಿಜೆಪಿ ಸದಸ್ಯರೊಂದಿಗೆ ಮಾತ್ರ ಸಭೆ ನಡೆಸಿದ್ದಾರೆ. ಬೇರೆ ಪಕ್ಷದ ಸದಸ್ಯರ ವಾರ್ಡ್ ಗಳಲ್ಲಿ ಇರುವವರು ಮನುಷ್ಯರಲ್ಲವೇ? ಅಲ್ಲಿನ ಸಮಸ್ಯೆಗಳ ಬಗ್ಗೆ ಯಾರು ಚರ್ಚಿಸಬೇಕು? ಶಾಸಕರು ಮತ್ತು ಬಿಜೆಪಿ ಪಾಲಿಕೆ ಸದಸ್ಯರ ಈ ನಡೆ ಅಕ್ಷಮ್ಯ ಅಪರಾಧ. ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸದಸ್ಯ ಹೆಚ್.ಸಿ. ಯೋಗೀಶ್ ಮತ್ತು ನಾಗರಾಜ್ ಕಂಕಾರಿ ಆಕ್ರೋಶ ವ್ಯಕ್ತಪಡಿಸಿದರು.ಕಲುಷಿತ ನೀರಿನ ಬಾಟಲಿ ಪ್ರದರ್ಶಿಸಿದ ಯೋಗೀಶ್ ಕೇವಲ ಅರ್ಧ ಗಂಟೆ ನೀರು ಬರುತ್ತಿದೆ. ಅದೂ ಕಲುಷಿತವಾಗಿದ್ದು, ನಿನ್ನೆ ಶೇಷಾದ್ರಿಪುರಂ ವಾರ್ಡ್ ನಲ್ಲಿ ಉಸ್ತುವಾರಿ ಸಚಿವರ ಕಾರ್ ಅಡ್ಡಗಟ್ಟಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳಿಗೆ ಉತ್ತರಿಸಲಾಗುತ್ತಿಲ್ಲ. 24*7 ನೀರು ನೀಡುವುದಾಗಿ ಹೇಳಿ ಮಾರ್ಚ್ ನೊಳಗೆ ಪೂರ್ಣಗೊಳಿಸಬೇಕಿದ್ದ ಯೋಜನೆ ಇನ್ನೂ ಮುಗಿದಿಲ್ಲ. ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಆಸಕ್ತಿ ಇಲ್ಲ. ಈಗಾಗಲೇ ಅವರಿಗೆ 98 ಕೋಟಿ ರೂ. ಬಿಡುಗಡೆ ಆಗಿದೆ. ಶೇ. 40 ರಷ್ಟೂ ಕೆಲಸವಾಗಿಲ್ಲ. ಅಧಿಕಾರಿಗಳು ಶೇ. 80 ರಷ್ಟು ಕೆಲಸವಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅರ್ಧ ಗಂಟೆ ನೀರು ಬಿಟ್ಟರೇ ಸಾಕಾಗುತ್ತದೆಯೇ ಎಂದು ಪ್ರಶ್ನಿಸಿದರು.ಸುಮಾರು ಒಂದು ಗಂಟೆ ಬರೀ ಗದ್ದಲ, ಕಿರುಚಾಟದಲ್ಲಿಯೇ ಸಭೆ ಮುಂದುವರೆಯಿತು. ಕುಡಿಯುವ ನೀರು ಬಿಟ್ಟರೆ ಬೇರೆ ವಿಷಯದ ಕಡೆಗೆ ಹೋಗಲೇ ಇಲ್ಲ. ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಸಮಸ್ಯೆ ಇರುವುದು ನಿಜ. ಪರಿಹಾರ ಹುಡುಕುವ ಕೆಲಸವನ್ನು ಆಡಳಿತ ಪಕ್ಷವಾಗಿ ಮಾಡಿದ್ದೇವೆ. ಮಳೆಗಾಲದಲ್ಲಿ ಬರುವ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಶಾಶ್ವತ ಪರಿಹಾರಕ್ಕೆ ಮಾರ್ಗ ಕಂಡು ಹಿಡಿದಿದ್ದೇವೆ. ಶಾಸಕರು ವೈಯಕ್ತಿಕವಾಗಿ ಸಭೆ ಕರೆದರೆ ಸಭೆ ಕರೆಯುವುದು ಅವರ ಹಕ್ಕು ಎಂದರು.

ಜಲಮಂಡಳಿ ಎಇ ರಮೇಶ್ ಪ್ರತಿಕ್ರಿಯೆ ನೀಡಿ, ಮಳೆ ಕಾರಣದಿಂದ ನೀರೆತ್ತುವ ಪಂಪ್ ನೀರಲ್ಲಿ ಮುಳುಗಿದ್ದ ಕಾರಣ ಕಳೆದ ಒಂದು ವಾರದಿಂದ ವ್ಯತ್ಯಯವಾಗಿದೆ. 13 ಟ್ಯಾಂಕ್ ಗಳಿಗೆ ನೀರು ಸರಬರಾಜಿಗೆ ತೊಂದರೆಯಾಗಿದೆ. ಪಂಪಿಂಗ್ ನಲ್ಲಿ ವ್ಯತ್ಯಾಸವಾದಾಗ ಹಲವೆಡೆ ನೀರು ಪೂರೈಕೆಗೆ ತೊಂದರೆಯಾಗುತ್ತದೆ. ಅನೇಕ ಕಡೆ ಸ್ಮಾರ್ಟ್ ಸಿಟಿಯವರು ನೀರು ಪೂರೈಕೆ ಪೈಪ್ ಗಳನ್ನು ಡ್ಯಾಮೇಜ್ ಮಾಡಿದ್ದಾರೆ. ಎಲ್ಲವನ್ನು ತ್ವರಿತಗತಿಯಲ್ಲಿ ಸರಿಪಡಿಸುತ್ತಿದ್ದೇವೆ ಎಂದರು.ರಮೇಶ್ ಹೆಗ್ಡೆ ಮಾತನಾಡಿ, ಸ್ಮಾರ್ಟ್ ಸಿಟಿಯವರು ಒಡೆದು ಹಾಕಿದ್ದನ್ನು ಪಾಲಿಕೆಯವರು ತಮ್ಮ ಖರ್ಚಿನಲ್ಲಿ ರಿಪೇರಿ ಮಾಡಬೇಕಾದ ದುರಂತವಿದೆ. ಸ್ಮಾರ್ಟ್ ಸಿಟಿ ಎಂಡಿ ಕೈಗೆ ಸಿಗುತ್ತಿಲ್ಲ. ಇನ್ನುಮುಂದೆ ಅವರನ್ನು ಸಭೆಗೆ ಕರೆಸಿರಿ. ಜನತೆಗೆ ನಾವು ಉತ್ತರಿಸಲಾಗುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಮಂಡ್ಲಿ ಭಾಗದ ಪಾಲಿಕೆ ಸದಸ್ಯೆ ಲಕ್ಷ್ಮಿ ಶಂಕರನಾಯಕ್ ಸಭೆಯಲ್ಲಿ ಭಾವುಕರಾಗಿ ಆಡಳಿತ ಪಕ್ಷದ ಸದಸ್ಯೆಯಾದರೂ ನಮ್ಮ ವಾರ್ಡ್ ನಲ್ಲಿ 12 ಗಂಟೆಗೆ ಕುಡಿಯುವ ನೀರು ಬಿಡುತ್ತಾರೆ. ಅಲ್ಲಿರುವ ನಿವಾಸಿಗಳೆಲ್ಲರೂ ಕೂಲಿ ಕಾರ್ಮಿಕರು. ಅವರಿಗೆ ಕುಡಿಯುವ ನೀಡು ತುಂಬಿಸಿಕೊಳ್ಳಲು ಆಗುತ್ತಿಲ್ಲ. ಎಷ್ಟು ಬಾರಿ ಹೇಳಿದರೂ ಅಧಿಕಾರಿಗಳು ತಾಂತ್ರಿಕ ತೊಂದರೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ನೀರಿಗಾಗಿ ಒಂದು ದಿನದ ಕೂಲಿ ಬಿಟ್ಟು ಮನೆಯಲ್ಲಿ ಕುಳೀತುಕೊಳ್ಳುವ ಅನಿವಾರ್ಯತೆ ಇದೆ. ದಯವಿಟ್ಟು ಬೆಳಗ್ಗೆ 9 ಗಂಟೆಯೊಳಗೆ ನೀರು ಬಿಡಬೇಕು ಎಂದರು. ತಾಂತ್ರಿಕ ತೊಂದರೆ ಎಂದರೆ ಜನ ಒಪ್ಪಲು ಸಿದ್ಧರಿಲ್ಲ ಎಂದು ಭಾವುಕರಾದ ಅವರು, ನಮಗೆ ಈ ಸದಸ್ಯತ್ವವೇ ಬೇಡ ಎಂದು ಅನಿಸಿದೆ ಎಂದು ಹೇಳಿದರು.ಅವರ ಸಮಸ್ಯೆಗೆ ಹಲವಾರು ಸದಸ್ಯರು ಎದ್ದು ನಿಂತು ತಮ್ಮ ವಾರ್ಡ್ ನಲ್ಲಿಯೂ ಇದೇ ಕತೆ. ಸರಿಯಾದ ಸಮಯಕ್ಕೆ ನೀರು ಬಿಡುವುದಿಲ್ಲ. ಮನಸಿಗೆ ಬಂದ ರೀತಿಯಲ್ಲಿ ನೀರು ಬಿಡುತ್ತಾರೆ ಎಂದರು.

ಸಭೆಯಲ್ಲಿ ಒಟ್ಟಾರೆ ಜಲಮಂಡಳಿಯಿಂದಾದ ಕಾಮಗಾರಿ ಬಗ್ಗೆ ಮತ್ತು ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ಎಇ ರಮೇಶ್ ವಿವರಿಸಿದರು. ಮಾಧ್ಯಮಗಳಿಗೆ ಸಭೆಯ ಮಾಹಿತಿ ನೀಡದೇ ಇರುವುದಕ್ಕೂ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸುತ್ತಿದ್ದೀರಿ ಎಂದು ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಮತ್ತು ಯೋಗೀಶ್ ಆಕ್ರೋಶ ವ್ಯಕ್ತಪಡಿಸಿದರು. ಒಂದು ವಾರ ಮೊದಲೇ ವಾರ್ತಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಮೇಯರ್ ಸುನಿತಾಅಣ್ಣಪ್ಪ ಹೇಳಿದರು.ಸಭೆಯಲ್ಲಿ ಕುಡಿಯುವ ನೀರು ಮತ್ತು ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಕಾವೇರಿದ ಚರ್ಚೆ ನಡೆಯಿತು.ಉಪಮೇಯರ್ ಶಂಕರ್ ಗನ್ನಿ, ಆಯುಕ್ತ ಮಾಯಣ್ಣ ಗೌಡ ಮೊದಲಾದವರಿದ್ದರು.  

ವರದಿ ಮಂಜುನಾಥ್ ಶೆಟ್ಟಿ…