ಶಿವಮೊಗ್ಗ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕೊಡುಗೆ ಅಪಾರ ಎಂದು ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಹೇಳಿದರು.

ಶಿವಮೊಗ್ಗ ನಗರದ ವಾಸವಿ ವಿದ್ಯಾಲಯದಲ್ಲಿ ಜೆಸಿಐ ಸಹ್ಯಾದ್ರಿ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ “ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 84ನೇ ಜನ್ಮದಿನದ ಪ್ರಯುಕ್ತ ಪಕ್ಷಿ ಪ್ರಪಂಚದ ಪಿಪಿಟಿ ಪ್ರಾತ್ಯಕ್ಷಿಕೆ ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತೇಜಸ್ವಿ ಅವರು ಸಾಹಿತ್ಯದ ಜತೆಯಲ್ಲಿ ಪ್ರಕೃತಿಯ ಜತೆ ಬದುಕುವ ಬಗೆ ತಿಳಿಸಿಕೊಟ್ಟರು. ಪಕ್ಷಿಗಳ ಬಗ್ಗೆ ಸಾಹಿತ್ಯ ಬರಹದಲ್ಲಿ ಅಪಾರ ಸಂಗತಿಗಳನ್ನು ಜನರಿಗೆ ತಲುಪಿಸಿದ್ದಾರೆ. ಹೊಸ ಶೈಲಿಯಲ್ಲಿ ಕಥೆ, ನಾಟಕ, ಕಾದಂಬರಿಗಳನ್ನು ಬರೆದ ತೇಜಸ್ವಿಯವರ ಬರಹಗಳು ಕೋಟ್ಯಾಂತರ ಓದುರಿಗೆ ಪ್ರಿಯವಾಗಿದೆ ಎಂದು ತಿಳಿಸಿದರು.

ವನ್ಯಜೀವಿ ಛಾಯಾಗ್ರಾಹಕ ಡಾ. ಶೇಖರ್ ಗೌಳೇರ್ ಪಿಪಿಟಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪಶ್ಚಿಮ ಘಟ್ಟ ಹಾಗೂ ಹಿಮಾಲಯದ 140 ಪಕ್ಷಿಗಳ ಛಾಯಾಚಿತ್ರಗಳನ್ನು ಪಿಪಿಟಿ ಮೂಲಕ ಮಕ್ಕಳಿಗೆ ಪರಿಚಯಿಸಿದರು. ಪಕ್ಷಿಗಳ ಚಲನವಲನ, ವಲಸೆ, ಗೂಡು ಕಟ್ಟುವಿಕೆ, ಮೊಟ್ಟೆ, ಮರಿ ಇನ್ನೂ ಮುಂತದಾ ಅನೇಕ ವಿಷಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದರು.
ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಸಂಸ್ಥೆ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಮುಖ ಸಾಹಿತಿಗಳಲ್ಲಿ ತೇಜಸ್ವಿ ಪ್ರಮುಖರು. ಸಣ್ಣ ಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಸವಿ ವಿದ್ಯಾಲಯದ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ಮಾತನಾಡಿದರು. ವಾಸವಿ ವಿದ್ಯಾಲಯ ಪ್ರಾಚಾರ್ಯ ಮನು, ಶಿಕ್ಷಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…