ಶಿವಮೊಗ್ಗ: ಸಮಾಜದ ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ನಿಸ್ವಾರ್ಥ ಸೇವೆಯು ಆತ್ಮ ತೃಪ್ತಿಯನ್ನು ಒದಗಿಸುವ ಮಾರ್ಗ ಆಗಿದೆ ಎಂದು *ಸರ್ಜಿ ಸಮೂಹ ಸಂಸ್ಥೆಯ *ಡಾ. ಧನಂಜಯ ಸರ್ಜಿ* ಹೇಳಿದರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ 14ರ ಸಂಭ್ರಮದ “ಸಹ್ಯಾದ್ರಿ ಉತ್ಸವ” ಹಾಗೂ ಜೆಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಂಘ ಸಂಸ್ಥೆಗಳಲ್ಲಿ ಭಾಗಿ ಆಗುವುದರಿಂದ ಸೇವಾ ಮನೋಭಾವ ಬೆಳೆಯುತ್ತದೆ. ಅನ್ನದಾನ, ವಿದ್ಯಾದಾನ, ರಕ್ತದಾನ ಪ್ರಮುಖ ಸೇವೆಗಳಾಗಿವೆ ಎಂದು ತಿಳಿಸಿದರು.
ಜೆಸಿಐನಂತಹ ಸಂಸ್ಥೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಆಗುವುದರ ಜತೆಯಲ್ಲಿ ಆತ್ಮಸ್ಥೆöÊರ್ಯ ವೃದ್ಧಿಸುತ್ತದೆ. ಸೇವಾ ಮನೋಭಾವ ಬೆಳೆಯುತ್ತದೆ. ಮನುಷ್ಯ ಕಠಿಣ ಸನ್ನಿವೇಶಗಳನ್ನು ದಾಟಿದ ನಂತರ ಯಶಸ್ಸು ಲಭಿಸುತ್ತದೆ. ಕಷ್ಟ ಬಂದಾಗ ಹೆದರದೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಧೈರ್ಯದಿಂದ ಸಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಕ್ಕಮಗಳೂರಿನ ಕಾಫಿನಾಡು ಚಂದು, ಜೀವನದಲ್ಲಿ ಏನೇ ಕಷ್ಟ ಬಂದರೂ ಛಲದಿಂದ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು. ಅವಮಾನ, ನೋವು ಎದುರಾದರೂ ಮುಂದೆ ಗೆಲುವು ಸಿಕ್ಕೇ ಸಿಗುತ್ತದೆ. ಶ್ರಮ ವಹಿಸಿ ಬದುಕಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಿರುವ ಜೆಸಿಐ ಸಂಸ್ಥೆ ಕಾರ್ಯ ಅಭಿನಂದನೀಯ. ಆರೋಗ್ಯ, ಶಿಕ್ಷಣ ಮತ್ತು ಪರಿಸರ ಸಂರಕ್ಷಣೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತ ಜಾಗೃತಿ ಮೂಡಿಸುತ್ತಿರುವ ಸಂಸ್ಥೆಗೆ ಶುಭವಾಗಲಿ ಎಂದು ತಿಳಿಸಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್‌ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾವಂತ ಯುವ ಸಮುದಾಯ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಸಾರ್ವಜನಿಕ ಸೇವೆ ಸಲ್ಲಿಸಲು ಅವಕಾಶ ಇರುವ ರಾಜಕೀಯ ಕ್ಷೇತ್ರಕ್ಕೆ ವಿದ್ಯಾವಂತ ಯುವ ಸಮುದಾಯ ಬರುವುದರ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿ ಭಾಗವಾಗಬೇಕು ಎಂದು ಹೇಳಿದರು.
ಸೆಪ್ಟೆಂಬರ್ ತಿಂಗಳಲ್ಲಿ ಜೆಸಿಐ ಸಂಸ್ಥೆ ವತಿಯಿಂದ ಸಪ್ತಾಹ ಕಾರ್ಯಕ್ರಮ ಮುಖಾಂತರ ಸೇವಾ ಕಾರ್ಯಗಳನ್ನು ನಡೆಸಲಾಗುತ್ತದೆ. ಸಪ್ತಾಹದಲ್ಲಿ ಅನ್ನದಾನ, ರಕ್ತದಾನ, ಶಾಲೆ ದತ್ತು, ಪರಿಸರ ಜಾಗೃತಿ, ಕಾನೂನು ಅರಿವು ಕಾರ್ಯಾಗಾರ ಸೇರಿದಂತೆ ವಿವಿಧ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪವಿತ್ರಕುಮಾರ, ಕಿಶೋರ್‌ಕುಮಾರ್, ಪ್ರಕಾಶ್ ಬೈಂದೂರ್, ಕಿರಣ್.ಕೆ. ಅವರಿಗೆ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಯೂರಿ ನೃತ್ಯ ಕಲಾ ಕೇಂದ್ರ ವಿದುಷಿ ಶ್ವೇತಾ ಪ್ರಕಾಶ್ ಅವರಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು.
ವಲಯ ನಿರ್ದೇಶಕ ಅನೂಶ್ ಗೌಡ, ಜೆಸಿ ವೀಕ್ ಕೋಆರ್ಡಿನೇಟರ್ ಚಂದ್ರಹಾಸ ಶೆಟ್ಟಿ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥಾಪಕ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸಂತೋಷ್‌ಕುಮಾರ್.ಬಿ.ಎನ್., ಕಾರ್ಯಕ್ರಮ ನಿರ್ದೇಶಕಿ ಡಾ. ಅಖಿಲಾ ಡಿ., ಮತ್ತಿತರರು ಉಪಸ್ಥಿತರಿದ್ದರು.

ಸಹ್ಯಾದ್ರಿ ಉತ್ಸವ ಸಂಭ್ರಮ…

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ನಡೆದ 14ರ ಸಂಭ್ರಮದ “ಸಹ್ಯಾದ್ರಿ ಉತ್ಸವ” ಸಮಾರಂಭದಲ್ಲಿ ಕಾಫಿನಾಡು ಚಂದು ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡಿರುವ ಸರ್ಜಿ ಸಮೂಹ ಸಂಸ್ಥೆಯ ಡಾ. ಧನಂಜಯ ಸರ್ಜಿ ಅವರಿಗೆ ಕಾಫಿ ನಾಡು ಚಂದು ಅವರು ತಮ್ಮದೇ Style ನಲ್ಲಿ ಜನ್ಮದಿನದ ಶುಭಾಶಯ ಕೋರಿದರು. ಸಾಮಾಜಿಕ ಜಾಲತಾಣದಲ್ಲಿ ಪ್ರಖ್ಯಾತಿ ಗಳಿಸಿರುವಂತೆ ನಾನು ಶಿವಣ್ಣ, ಪುನೀತಣ್ಣ ಅವರ ಅಭಿಮಾನಿ ಎಂದು ಭಾಷಣ ಆರಂಭಿಸಿದ ಚಂದು ಅವರು ತಮ್ಮ Styleನಲ್ಲಿ ಭಾಷಣ ಮಾಡಿ ಎಲ್ಲರನ್ನು ರಂಜಿಸಿದರು.

ವರದಿ ಪ್ರಜಾಶಕ್ತಿ…