ಶಿವಮೊಗ್ಗ: ಕಾಂಗ್ರೆಸ್ ಪಕ್ಷದಿಂದ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಹನ್ನೊಂದು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿಯೇ ಯಾರಿಗಾದರೂ ಟಿಕೆಟ್ ಸಿಗಬಹುದೆಂಬ ನಂಬಿಕೆ ನಮಗಿದೆ. ಆದರೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಮಾಜಿ ಶಾಸಕ ಹಾಗೂ ಅಭ್ಯರ್ಥಿ ಆಕಾಂಕ್ಷಿ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.

ಅವರು ಇಂದು ಹೋಟೆಲ್ ಮಥುರಾ ಪ್ಯಾರಾಡೈಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬರುವುದಾದರೆ ಯಾರು ಬೇಕಾದರೂ ಬರಬಹುದು. ಅದಕ್ಕೆ ಸ್ವಾಗತವಿದೆ. ಆಯನೂರು ಮಂಜುನಾಥ್ ಅವರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಬಿಡುವುದು ಹೈಕಮಾಂಡಿಗೆ ಬಿಟ್ಟದ್ದು, ಹೈಕಮಾಂಡ್ ಅರ್ಜಿ ಸಲ್ಲಿಸಿದ ಹನ್ನೊಂದು ಜನರನ್ನು ಬಿಟ್ಟು ಹನ್ನೆರಡನೆಯವರಿಗೆ ಟಿಕೆಟ್ ನೀಡಿದರೂ ಕೂಡ ನಾವು ಕೆಲಸ ಮಾಡುತ್ತೇವೆ ಎಂದರು.

ಮುಖ್ಯವಾಗಿ ಆಯನೂರು ಮಂಜುನಾಥ್ ಅವರು ಶಿವಮೊಗ್ಗದ ಶಾಂತಿಯನ್ನು ಬಯಸಿದ್ದಾರೆ. ಈಶ್ವರಪ್ಪನವರು ಅಶಾಂತಿ ಕೋಮುಗಲಬೆ ಸೃಷ್ಟಿಸಿಯೇ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಪಕ್ಷದವರೇ ಆದ ಆಯನೂರು ಮಂಜುನಾಥ್ ಅವರ ಸ್ವಭಾವ ನಡೆಯನ್ನು ಗಮನಿಸಿಯೇ ಮುಂದಿನ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಗಲಾಟೆ, ಗೊಂದಲ ಆಗಬಹುದು. ಮಸೀದಿ ಮಂದಿರಗಳು ಮಲಿನವಾಗಬಹುದು ಎಂಬ ದಟ್ಟ ಸೂಚನೆ ಕೊಟ್ಟಿದ್ದಾರೆ ಇವರ ಗಂಭೀರ ಹೇಳಿಕೆಯನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಚುನಾವಣಾ ಅಧಿಕಾರಿಗಳು ಗಮನಿಸಬೇಕಾಗಿದೆ. ಎಚ್ಚರ ವಹಿಸಬೇಕಾಗಿದೆ. ರಾಜ್ಯ ಚುನಾವಣಾ ಅಧಿಕಾರಿಗಳು ಕೂಡ ಶಿವಮೊಗ್ಗದ ಮೇಲೆ ಹದ್ದಿನಕಣ್ಣು ಇಡಬೇಕಾಗಿದೆ ಎಂದರು.

ಇದರ ಜೊತೆಗೆ ಶಿವಮೊಗ್ಗದಲ್ಲಿ ಈಗಾಗಲೇ ಹಣದ ಹೊಳೆ ಹರಿಯುತ್ತಿದೆ. ಕೋಟ್ಯಂತರ ರೂ. ಬೆಲೆ ಬಾಳುವ ಸೀರೆಗಳು ಸಿಕ್ಕಿವೆ. ನಗದು ಸಿಕ್ಕಿದೆ. ವಾರ್ಡ್ಗಳಲ್ಲಿ ಹಣವನ್ನು ಈಗಾಗಲೇ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿಯ ಬಗ್ಗೆ ಸುಳಿವನ್ನು ಕೂಡ ಆಯನೂರು ಮಂಜುನಾಥ್ ನೀಡಿದ್ದಾರೆ. ಈ ವಿಷಯವನ್ನು ಕೂಡ ಚುನಾವಣಾ ಅಧಿಕಾರಿಗಳ ಗಮನಿಸಬೇಕು ಎಂದರು.
ಶಿವಮೊಗ್ಗದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ ಎನ್ನುವುದು ನಿಜ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲಿ ನಡೆದ ಅಭಿವೃದ್ಧಿಯನ್ನು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮುಂದುವರಿಸಿದ್ದು ನಿಜ. ಅಂತಹ ಯಡಿಯೂರಪ್ಪನವರನ್ನ ಈಶ್ವರಪ್ಪ ಕಡೆಗಣಿಸಿದ್ದು ಸತ್ಯ. ಆಯನೂರು ಮಂಜುನಾಥ್ ಈಶ್ವರಪ್ಪನವರನ್ನು ಕುರಿತಂತೆ ಅನೇಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದರು.
ಈ ಎಲ್ಲದರ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಶಿವಮೊಗ್ಗದಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಕೂಡ ನಾವು ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ, ಆಯನೂರು ಬಂದರೂ ಕೂಡ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶ್ಯಾಂಸುAದರ್, ಕರಿಬಸಪ್ಪ, ದಯಾನಂದ್, ಲೋಹಿತ್ ಕುಮಾರ್, ಅಭಿಷೇಕ್ ಸೇರಿದಂತೆ ಹಲವರು ಇದ್ದರು.

ವರದಿ ಪ್ರಜಾ ಶಕ್ತಿ…