ಶಿವಮೊಗ್ಗ ಮತ್ತು ಕರ್ನಾಟಕ ರಾಜ್ಯ ಕಂಡ ಅಪ್ರತಿಮ ಶಿಕ್ಷಣ ತಜ್ಞರು ಮತ್ತು ಚಿಂತಕರು, ವಿಡಿಆರ್ ಎಂದೇ ಪ್ರಸಿದ್ಧರಾಗಿದ್ದ ವಿ. ದೇವೇಂದ್ರರವರು ಶುಕ್ರವಾರ ರಾತ್ರಿ 09.30ರ ವೇಳೆಯಲ್ಲಿ ಕೋಟೆ ರಸ್ತೆಯ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.

ವಿ. ದೇವೇಂದ್ರರವರು ನಗರದ ಪ್ರತಿಷ್ಠಿತ ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿದ್ದರು..

1972 ರಲ್ಲಿ ವಿ. ದೇವೇಂದ್ರರವರು, ಶಿವಮೊಗ್ಗದ ಡಿ ವಿ ಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿ ಕಾಲೇಜಿಗೆ ಭದ್ರ ಬುನಾದಿ ಹಾಕಿದವರು. ಸುಧೀರ್ಘ 22 ವರ್ಷಗಳ ಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, 30 ಏಪ್ರಿಲ್ 1994 ರಂದು ನಿವೃತ್ತರಾಗಿದ್ದರು.

1970, 1980 ಮತ್ತು 1990 ದಶಕಗಳಲ್ಲಿ ಡಿವಿಎಸ್ ಪದವಿಪೂರ್ವ ಕಾಲೇಜು ಎಂದರೆ ರಾಂಕ್ ಗಳ ಕಾಲೇಜೆಂಬ ಹೆಸರನ್ನು ತರುವಲ್ಲಿ ಇವರು ಸಲ್ಲಿಸಿದ ಸೇವೆ ಅನನ್ಯ. ಡಿವಿಎಸ್ ಪದವಿಪೂರ್ವ ಕಾಲೇಜು ರಾಜ್ಯ ಮಟ್ಟದಲ್ಲಿ ಪ್ರತಿಷ್ಠಿತ ಕಾಲೇಜು ಎಂದು ಗುರುತಿಸಿಕೊಳ್ಳಲು ವಿಡಿಅರ್ ಕಾರಣಕರ್ತರಾಗಿದ್ದರು

ಡಿವಿಎಸ್ ಹೈಸ್ಕೂಲ್ ವಿಭಾಗದಲ್ಲಿ ಸಹ ಶಿಕ್ಷಕರಾಗಿ ಸೇವೆಯನ್ನು ಆರಂಭಿಸಿ, ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಪ್ರಾಚಾರ್ಯರ ಹುದ್ದೆಯಿಂದ ನಿವೃತ್ತಿಯಾದ ನಂತರ ಕೆಲಕಾಲ ಡಿವಿಎಸ್ ಸಂಸ್ಥೆಯ ಆಡಾಳಿಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದರು.

ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೇ ಸಹಕಾರಿ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ಪ್ರಮುಖವಾಗಿ ಡಿವಿಎಸ್‌ನ ಚಿಕ್ಕ ಕೊಠಡಿಯೊಂದರಲ್ಲಿ ಪ್ರಾರಂಭವಾದ ಪದವೀಧರರ ಸಹಕಾರ ಸಂಘದ ಸಂಸ್ಥಾಪಕ ಸದಸ್ಯರಾಗಿ, ಪ್ರಥಮ ಉಪಾಧ್ಯಾಕ್ಷರಾಗಿ ಮತ್ತು ಕೆಲ ವರ್ಷಗಳ ಕಾಲ ಈ ಸಂಘದ ಅಧ್ಯಕ್ಷರಾಗಿ ಸಂಘದ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದ್ದರು.

ಜಾವಳ್ಳಿ ಸಮೀಪದ ಜ್ಙಾನ ದೀಪ ಶಿಕ್ಷಣ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ಮತ್ತು ಶೈಕ್ಷಣಿಕ ನಿರ್ದೇಶಕರಾಗಿ 1999 ರಿಂದ 2022 ರವರೆಗೆ ಸೇವೆ ಸಲ್ಲಿಸಿ, ಸದರಿ ಸಂಸ್ಥೆಯ ಉನ್ನತಿಗಾಗಿ ಶ್ರಮಿಸಿದವರು.

ಆರು ದಶಕಗಳಿಗೂ ಹೆಚ್ಚಿನ ಸಾರ್ಥಕ ಸೇವೆ ಸಲ್ಲಿಸಿರುವ ವಿಡಿಆರ್ ಎಂದೇ ಪ್ರಸಿದ್ದಿ ಪಡೆದ ಒಬ್ಬ ಶ್ರೇಷ್ಟ ಚಿಂತಕ, ಶೈಕ್ಷಣಿಕ ತಜ್ಞರ ಅಗಲಿಕೆ ಶಿವಮೊಗ್ಗದ ಶಿಕ್ಷಣ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ.

ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ, ಅಸಂಖ್ಯಾತ ಶಿಷ್ಯ ವೃಂದ ಮತ್ತು ಸ್ನೇಹಿತರ ಬಳಗವನ್ನು ಅಗಲಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ಸದ್ಗತಿಗಳನ್ನು ನೀಡಲಿ ಎಂದು ಸಮಸ್ತ ಶಿಷ್ಯ ವೃಂದದ ಪರವಾಗಿ ಪ್ರಾರ್ಥಿಸುತ್ತೇವೆ.

ಡಾ.ಎ. ಸತೀಶ್ ಕುಮಾರ್ ಶೆಟ್ಟಿ
ಸಹ ಕಾರ್ಯದರ್ಶಿಗಳು
ದೇಶಿಯ ವಿದ್ಯಾಶಾಲಾ ಸಮಿತಿ
ಮತ್ತು
A E ರಾಜಶೇಕರ್.
ಪ್ರಾಚಾರ್ಯರು
ಡಿ ವಿ ಎಸ್ ಪ ಪೂ (ಸ್ವ) ಕಾಲೇಜು