ನಾನು ಶಾಸಕರಾಗಿನಿಂದಲೂ ಸಕ್ಕರೆ ಕಾರ್ಖಾನೆ ಜಾಗದಲ್ಲಿ ರೈತರು ಸಾಗವಳಿ ಮಾಡಿಕೊಂಡಿಕೊಂಡು ಬಂದಿದ್ದೀರಿ, ನಿಮ್ಮನ್ನು ಆಗಲೂ ಒಕ್ಕಲೆಬ್ಬಿಸಲು ಬಿಟ್ಟಿಲ್ಲ. ಈಗಲೂ ಬಿಡಲ್ಲ ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಭರವಸೆ ನೀಡಿದರು.


ಶಿವಮೊಗ್ಗ ತಾಲೂಕು ಮಂಡೇನಕೊಪ್ಪದಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಕೆಲ ಹಿತಶಕ್ತಿಗಳು ಆ ಭೂಮಿಯನ್ನು ಸ್ವಂತ ಮಾಡಿಕೊಳ್ಳಲು ನೋಡುತ್ತಿದ್ದಾರೆ. ಆದರೆ, ಆ ಭೂಮಿಯನ್ನೇ ನೆಚ್ಚಿಕೊಂಡು ಅನೇಕರು ಜೀವನ ನಡೆಸುತ್ತಿದ್ದಾರೆ. ಎಷ್ಟೇ ಪ್ರಭಾವಿ ವ್ಯಕ್ತಿಗಳು ಬಂದರೂ ನಿಮ್ಮಿಂದ ಆ ಭೂಮಿಯನ್ನು ಕಿತ್ತುಕೊಳ್ಳಲು ನಾನು ಬಿಡಲ್ಲ. ನಿಮ್ಮ ಜೊತೆ ನಾನು ನಿಲ್ಲುತ್ತೇನೆ ಎಂದರು.
ಗೂಳಿಹಟ್ಟಿ ಶೇಖರ್‌ ಅವರು ದಲಿತ ಸಮಾಜದಿಂದ ಬಂದವರು. ಅವರು ಸಚಿವರು ಆಗಿದ್ದರು. ಅವರು ಒಂದು ತಿಂಗಳಿಂದ ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಈಶ್ವರಪ್ಪ ಅವರನ್ನು ಗೆಲ್ಲಿಸಿಯೇ ಇಲ್ಲಿಂದ ಹೋಗುತ್ತೇನೆ ಎಂದು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅದೇ ರೀತಿ ಅನರಕ ವರ್ಷದಿಂದ ರೈತರ ಪರ ಹೋರಾಟ ಮಾಡಿಕೊಂಡು ಬಂದಿರುವ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರೂ ಆಗಿದ್ದ ತೀ.ನಾ.ಶ್ರೀನಿವಾಸ್‌ ಅವರು ನನ್ನ ಜೊತೆ ಬಂದಿರುವುದು ಸಂತಸ ತಂದಿದೆ ಎಂದರು.


ಕಾಂಗ್ರೆಸ್‌ ಅಭ್ಯರ್ಥಿ ಪರ ಸ್ಟಾರ್‌ ಪ್ರಚಾರಕರಾಗಿ ರಾಹುಲ್‌ ಗಾಂಧಿ, ಸಿನಿಮಾ ನಟ, ನಟಿಯರು ಬಂದು ಹೋಗಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ನರೇಂದ್ರ ಮೋದಿ, ನಡ್ಡಾ, ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಮಕ್ಕಳು ಇಲ್ಲೇ ಇದ್ದಾರೆ. ನಟಿ ತಾರಾ ಬಂದು ಹೋದರು. ಆದರೆ, ನನ್ನ ಪರವಾಗಿ ಯುವಕರು, ಹಿರಿಯರು, ತಾಯಂದಿರೇ ನನ್ನ ಸ್ಟಾರ್‌ ಪ್ರಚಾರಕರು. ನಿಮ್ಮೆಲ್ಲ ಬೆಂಬಲದಿಂದ ನಾನು ಗೆದ್ದೆ ಗೆಲ್ಲುತ್ತೇನೆ ಎಂದು ಹೇಳಿದರು.
ಎಲ್ಲ ಕ್ಷೇತ್ರದಲ್ಲೂ ಅನೇಕರು ನನ್ನ ಮುಖ ನೋಡದವರು ನನ್ನ ಪರ ನಿಂತು ಪ್ರಚಾರ ಮಾಡುತ್ತಿದ್ದಾರೆ. 2 ಸಾವಿರಕ್ಕೂ ಹೆಚ್ಚು ಹಳ್ಳಿಯಲ್ಲಿರುವ ಯುವ ಶಕ್ತಿ ಇದೆ. ರೈತ ಶಕ್ತಿ, ಮಹಿಳಾ ಶಕ್ತಿಗಳು, ಬಡವರು ಈ ಬಾರಿ ಈಶ್ವರಪ್ಪರನ್ನು ಗೆಲ್ಲಿಸುತ್ತೇವೆ ಎಂದು ಮುಂದೆ ಬಂದಿದ್ದಾರೆ. ಇವರೆಲ್ಲರ ಋಣವನ್ನು ನಾನು ಯಾವ ರೀತಿ ತೀರಿಸಬೇಕೋ ನನಗೆ ಗೊತ್ತಾಗುತ್ತಿಲ್ಲ ಎಂದರು.


ಭದ್ರವಾತಿಯಲ್ಲಿ ವಿಐಎಸ್‌ಎಲ್‌ ಸಮಸ್ಯೆ, ಶಿವಮೊಗ್ಗ ಗ್ರಾಮಾಂತರ, ಸಾಗರ, ಶಿಕಾರಿಪುರದಲ್ಲಿ ಬಗರ್‌ಹುಕುಂ ಸಮಸ್ಯೆ ಇದೆ. ಯಡಿಯೂರಪ್ಪ ಅವರು ಈ ಸಮಸ್ಯೆ ಇಟ್ಟುಕೊಂಡೇ ಹೋರಾಟ ಮಾಡಿದರು. ಸಕ್ಕರೆ ಕಾರ್ಖಾನೆ ಜಾಗದಲ್ಲಿ ಉಳಿಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು ಬಿಡಲ್ಲ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ನಾನು ಕೂಡ ಅವರ ಬೆಂಬಲಕ್ಕೆ ನಿಂತಿದ್ದೆ. ಈ ಜಾಗ ನಿಮಗೆ ಮಾಡಿಕೊಡುತ್ತೇವೆ ಎಂದು ಭರವಸೆ ಕೊಟ್ಟು ಅವರ ಮಗನನ್ನು ಮೂರು ಬಾರಿ ಸಂಸದನನ್ನಾಗಿ ಮಾಡಿದರೂ ಈವರೆಗೆ ನಿಮಗೆ ಭೂಮಿ ದಕ್ಕಿಲ್ಲ. ಈಗ ಪ್ರಭಾವಿ ವ್ಯಕ್ತಿಗಳು ಈ ಜಾಗಕ್ಕೆ ಕಣ್ಣಾಕಿದ್ದಾರೆ. ಯಡಿಯೂರಪ್ಪ ಅವರು ಬಡವರಿಗೆ ಯಾವುದೇ ಕಾರಣಕ್ಕೂ ನ್ಯಾಯ ಕೊಡಲ್ಲ ಎಂದು ಶಿಕಾರಿಪುರ ಜನ ಹೇಳುತ್ತಿದ್ದಾರೆ. ಹೀಗಾಗಿ ಕಳೆದ ಬಾರಿ ನೂರಾರು ಕೋಟಿ ಖರ್ಚು ಮಾಡಿದರೂ ತಿಣುಕಾಡಿ ಗೆದ್ದಿದ್ದಾರೆ. ಈ ಬಾರಿ ಯಾವುದೇ ಕಾರಣಕ್ಕೂ ಯಡಿಯೂರಪ್ಪ ಮಗನಿಗೆ ಓಟು ಕೊಡಲ್ಲ, ಈಶ್ವರಪ್ಪರನ್ನು ಇಲ್ಲಿ ಗೆಲ್ಲಿಸುತ್ತೇವೆ ಎಂದು ಜನ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.


ರಾಗಿಗುಡ್ಡದ ಕುಮಾರಸ್ವಾಮಿ ಬೆಂಬಲ ಸೂಚನೆ…


ಶಿವಮೊಗ್ಗ ನಗರದ ರಾಗಿಗುಡ್ಡ, ಶಾಂತಿನಗರದಲ್ಲಿ ಕಳೆದ ಮಹಾನಗರ ಪಾಲಿಕೆ ಸದಸ್ಯರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಕುಮಾರಸ್ವಾಮಿಯವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಲೋಕಸಭಾ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸಮ್ಮುಖದಲ್ಲಿ ರಾಷ್ಟ್ರ ಭಕ್ತರ ಬಳಗ ಸೇರಿಕೊಂಡು ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಇ.ವಿಶ್ವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ