ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಮತದಾನ ಪ್ರಮಾಣ ಏರ್ ಬಲೂನ್ ರೀತಿಯಲ್ಲಿ ಆಕಾಶದ ಎತ್ತರಕ್ಕೆ ಏರಲಿ ಎಂದು ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಆಶಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಏ.04 ರಂದು ನಗರದ ಫ್ರೀಡಂ ಪಾರ್ಕಿನಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿಗಾಗಿ ಹಾಟ್ ಏರ್ ಬಲೂನ್ ಹಾರಾಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಶೇ.100 ರಷ್ಟು ಮತದಾನ ಆಗಬೇಕು ಎನ್ನುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಾಗೂ ವಿಶಿಷ್ಟವಾದ, ವಿಭಿನ್ನವಾದ ಚಟುವಟಿಕೆಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದ್ದು, ಮತದಾರರು ತಪ್ಪದೇ ಮತದಾನ ಕಾರ್ಯದಲ್ಲಿ ಭಾಗವಹಿಸಿ ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


ಮತದಾನ ಜಾಗೃತಿ ಕುರಿತು ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾರಾಟಕ್ಕೆ ಅವಕಾಶ…


ಮತದಾನ ಜಾಗೃತಿ ಕುರಿತು ಏರ್ಪಡಿಸಲಾದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇಂದು ವಿಶೇಷವಾಗಿ ಏರ್ಪಡಿಸಲಾಗಿದ್ದ ಹಾಟ್‍ಏರ್ ಬಲೂನ್ ಹಾರಾಟದಲ್ಲಿ ಅವಕಾಶ ನೀಡಿ ಅಭಿನಂದಿಸಲಾಯಿತು.
ವಿಜಯ ಕರ್ನಾಟಕ ಕ್ವಿಜ್ ವಿಜೇತರು, ರೇಡಿಯೋ ಕ್ವಿಜ್ ವಿಜೇತರು, ರಾಷ್ಟ್ರ ಮಟ್ಟದ ಕ್ವಿಜ್ ವಿಜೇತರು, ಕ್ರಿಕೆಟ್ ಪಂದ್ಯಾವಳಿ ವಿಜೇತರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಮಾಧ್ಯಮ ತಂಡದವರಿಗೆ ಹಾಗೂ ಸಾರ್ವಜನಿಕರಿಗೆ ಏರ್ ಬಲೂನ್ ನಲ್ಲಿ ಹಾರಾಟ ನಡೆಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ರಂಗನಾಥ್, ವಾರ್ತಾಧಿಕಾರಿ ರಾಜು ಆರ್, ಚುನಾವಣಾ ಐಕಾನ್ ಡಾ.ಶುಬ್ರತಾ, ಜ್ಯೋತಿ, ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮದ್ ಪರ್ವೇಜ್ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವರದಿ ಪ್ರಜಾ ಶಕ್ತಿ