ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಹೆಚ್ ಸಿ ವೆಂಕಟೇಶ್, ರಾಘವೇಂದ್ರ, ಪಿಸಿ ಕವನ್, ಕಾಶಿನಾಥ್, ಗಣೇಶ್, ಶ್ರೀಕಾಂತ್, ಮತ್ತು ಬಸವರಾಜ್ ದನುವಿನ ಮನಿ ರವರುಗಳು ಪುರ್ಲೆಯ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಹಿಂಭಾಗ ಬೈಪಾಸ್ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ, ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಎರಡು ಬೈಕ್ ಗಳನ್ನು ನಿಲ್ಲಿಸಿಕೊಂಡು ನಿಂತಿದ್ದು, ಮುಂದಿನ ಕ್ರಮಕ್ಕಾಗಿ ಸದರಿ ಆಸಾಮಿಗಳು ಹಾಗೂ ಬೈಕ್ ಗಳನ್ನು ಶ್ರೀ ಸತ್ಯನಾರಾಯಣ, ಪಿ.ಐ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ಮುಂದೆ ಹಾಜರ್ ಪಡಿಸಿದ್ದು, ಸದರಿ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ 1) ಇಮ್ರಾನ್ @ ಇಮ್ಮು, 2) ಮದನ್ ಕುಮಾರ್ @ ಗುಂಡಾ ಮತ್ತು 3) ಹರೀಶ ಎನ್* ಎಂದು ತಿಳಿದು ಬಂದಿದ್ದು, ಸದರಿಯವರು ಎರಡೂ ಬೈಕ್ ಗಳನ್ನು ಶಿಕಾರಿಪುರದಲ್ಲಿ ಕಳ್ಳತನ ಮಾಡಿಕೊಂಡು ತಂದಿರುವುದು ಮತ್ತು ಇದೇ ರೀತಿ ಇನ್ನೂ ಹೆಚ್ಚಿನ ಬೈಕ್ ಗಳನ್ನು ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ.

ಆರೋಪಿತರ ವಿರುದ್ಧ ಠಾಣಾ ಗುನ್ನೆ ಸಂಖ್ಯೆ 0336/2024 ಕಲಂ 35(ಬಿ), 106 ಬಿ.ಎನ್.ಎಸ್.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಆರೋಪಿತರಿಂದ ಕಳ್ಳತನ ಮಾಡಿದ ಬೈಕ್ ಗಳನ್ನು ವಶಪಡಿಸಿಕೊಳ್ಳುವ ಸಂಬಂಧ ಶ್ರೀ ಮಿಥುನ್ ಕುಮಾರ್ ಜಿ. ಕೆ. ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮಾರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಸುರೇಶ್ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಬಿ ಉಪವಿಭಾಗರವರ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಸತ್ಯನಾರಾಯಣ, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳಾದ ಹೆಚ್ ಸಿ ವೆಂಕಟೇಶ್, ರಾಘವೇಂದ್ರ, ಪಿಸಿ ಕವನ್, ಕಾಶಿನಾಥ್, ಗಣೇಶ್, ಶ್ರೀಕಾಂತ್, ಮತ್ತು ಬಸವರಾಜ್ ದನುವಿನ ಮನಿ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಆರೋಪಿತರಾದ 1) ಇಮ್ರಾನ್ @ ಇಮ್ಮು, 26 ವರ್ಷ, ಮೆಕಾನಿಕ್ ಕೆಲಸ, ಸೀತಾರಾಂಪುರ ಭದ್ರಾವತಿ, 2) ಮದನ್ ಕುಮಾರ್ @ ಗುಂಡಾ, 18 ವರ್ಷ, ವುಡ್ ವರ್ಕ್, ಸೀತಾರಾಂಪುರ ಭದ್ರಾವತಿ ಮತ್ತು 3) ಹರೀಶ ಎನ್ 18 ವರ್ಷ, ಗಾರೆ ಕೆಲಸ, ಸೀತಾರಾಂಪುರ ಭದ್ರಾವತಿ ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯ – 03, ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ – 02, ತುಂಗಾನಗರ ಪೊಲೀಸ್ ಠಾಣೆಯ – 01 ಮತ್ತು ಜಯನಗರ ಪೊಲೀಸ್ ಠಾಣೆಯ – 01 ಪ್ರಕರಣ ಸೇರಿದಂತೆ ಒಟ್ಟು 07 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 9,40,000/- ರೂ ಗಳ 07 ದ್ವಿ ಚಕ್ರ ವಾಹನ ( 04 ಪಲ್ಸರ್, 01 ಅಪಾಚೆ, 01 ಸ್ಪ್ಲೆಂಡರ್ ಮತ್ತು 01 ರಾಯಲ್ ಎನ್ ಫೀಲ್ಡ್ ಹಿಮಾಲಯನ್) ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.