ಶಿವಮೊಗ್ಗ: ಗೇರುಬೀಜ ಉದ್ಯಮದಲ್ಲಿ ಕರ್ನಾಟಕ ರಾಜ್ಯವನ್ನು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿ ನಿಲ್ಲಿಸುವ ಮುಖಾಂತರ ದೇಶದ ಆರ್ಥಿಕತೆಗೆ ನಮ್ಮ ಕೊಡುಗೆ ನೀಡಬೇಕು ಎಂದು ಕರ್ನಾಟಕ ಗೋಂಡಬಿ ಉತ್ಪಾದಕರ ಸಂಘದ (ಕೆಸಿಎಂಎ) ಅಧ್ಯಕ್ಷ ಎಸ್.ಅನಂತ ಕೃಷ್ಣರಾವ್ ಹೇಳಿದರು.


ಕರ್ನಾಟಕ ಗೇರುಬೀಜ ಸಂಸ್ಕರಣೆಯ ಶತಮಾನೋತ್ಸವ ಪೂರೈಸಿದ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘದ ವತಿಯಿಂದ ಆಯೋಜಿಸಿದ್ದ ಗೇರುಬೀಜ ಬೆಳೆ ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕದ ಕನಿಷ್ಟ 30 ಸಣ್ಣ ಹಾಗೂ ದೊಡ್ಡ ಪಟ್ಟಣಗಳಲ್ಲಿ ಗೋಡಂಬಿ ಮಾರುಕಟ್ಟೆ ಬೆಳೆಸುವ ಬಗ್ಗೆ ಆಲೋಚನೆ ಇದೆ. ದೇಶದ ಆರ್ಥಿಕತೆಗೆ ಗೇರು ಬೀಜ ಉದ್ಯಮ ಅತಿ ಹೆಚ್ಚಿನ ಕೊಡುಗೆ ನೀಡಲು ಬದ್ಧವಾಗಿದೆ ಎಂದು ತಿಳಿಸಿದರು.


ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಗೇರುಬೀಜ ಉದ್ಯಮದ ಮಾರುಕಟ್ಟೆ ವಿಸ್ತರಣೆಗೆ ಸಂಘದ ಬೆಂಬಲ ಮತ್ತು ಪ್ರೋತ್ಸಾಹವು ಸದಾ ಇರುತ್ತದೆ. ಆಯುರ್ವೇದದಲ್ಲಿ ಹೇಳಿರುವಂತೆ ಗೋಡಂಬಿಯ ನಿಯಮಿತ ಸೇವನೆಯಿಂದ ಅದರಲ್ಲಿರುವ ಹೆಚ್ಚಿನ ವಿಟಮಿನ್ ಮತ್ತು ಪೋಟಾಸಿಯಂಗಳಿಂದ ಮೂಳೆಗಳು ಸಶಕ್ತವಾಗಿ, ಚರ್ಮ, ಕೂದಲಿನ ಆರೋಗ್ಯವು ಉತ್ತಮವಾಗುತ್ತದೆ ಎಂದು ಹೇಳಿದರು.


ಗೋಡಂಬಿ ಸಂಸ್ಕರಣೆಯಿಂದ ಅನೇಕ ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗ ಅವಕಾಶ ಹೆಚ್ಚುತ್ತದೆ. ದೇಶದ ಗ್ರಾಮೀಣ ಆರ್ಥಿಕತೆಗೆ ಗೇರು ಉದ್ಯಮ ಗಣನೀಯ ಕೊಡುಗೆ ನೀಡುತ್ತಿದೆ. ಉದ್ಯಮದ ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಂಘವು ಬದ್ಧವಾಗಿದೆ ಎಂದು ತಿಳಿಸಿದರು.


ಶಿವಮೊಗ್ಗ ಹೋಟೆಲ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಯು.ಎಂ.ಶಂಕರನಾರಾಯಣ ಹೊಳ್ಳ ಮಾತನಾಡಿದರು. ನಂತರ ಸಭೆಯಲ್ಲಿ ಹಾಜರಿದ್ದ ಉದ್ಯಮದಾರರ ಪ್ರಶ್ನೆಗಳಿಗೆ ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಎಸ್.ಅನಂತ ಕೃಷ್ಣರಾವ್ ಉತ್ತರಿಸಿದರು.
ಕೆಸಿಎಂಎ ಉಪಾಧ್ಯಕ್ಷ ತುಕಾರಾಂ ಪ್ರಭು, ಕಾರ್ಯದರ್ಶಿ ಅಮಿತ್ ಪೈ, ಖಜಾಂಚಿ ಗಣೇಶ್ ಕಾಮತ್, ಜಂಟಿ ಕಾರ್ಯದರ್ಶಿ ಸನತ್ ಪೈ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಗಣೇಶ್ ಅಂಗಡಿ, ಪ್ರದೀಪ್ ಯಲಿ, ಶರತ್ ಮತ್ತಿತರರು ಭಾಗವಹಿಸಿದ್ದರು.


ಗೋಡಂಬಿ ಬೆಳೆ ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಗೇರುಬೀಜ ಉದ್ಯಮದಾರರು, ಹೋಟೆಲ್, ಬೇಕರಿ, ಐಸ್‌ಕ್ರೀಂ ಉದ್ಯಮದಾರರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.