
ಸ್ವಂತ ಸೂರೊಂದನ್ನು ಕಟ್ಟಿಕೊಳ್ಳಬೇಕೆಂಬ ಕನಸನ್ನು ಹೊಂದಿದ್ದು, ನಿವೇಶನದ ನಿರೀಕ್ಷೆಯಲ್ಲಿರುವ ಶಿವಮೊಗ್ಗದ ಅಸಂಖ್ಯಾತ ವಸತಿರಹಿತರನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನಿಷ್ಟ 5000 ನಿವೇಶನಗಳನ್ನಾದರೂ ಸೃಜಿಸಿ ಅರ್ಹರಿಗೆ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ನಗರದ ಹೊರವಲಯದಲ್ಲಿರುವ ಗೋಪಶೆಟ್ಟಿಕೊಪ್ಪದಲ್ಲಿ ಈಗಾಗಲೇ 104 ಎಕರೆ ಭೂಪ್ರದೇಶವನ್ನು ಗುರುತಿಸಲಾಗಿದ್ದು, ಆ ಪೈಕಿ ಈಗಾಗಲೇ 30ಎಕರೆ ಭೂಮಿಯ ಮಾಲೀಕರು 50:50 ಅನುಪಾತದಲ್ಲಿ ನಿವೇಶನವನ್ನು ಹಸ್ತಾಂತರಿಸಲು ಒಡಂಬಡಿಕೆ ಮಾಡಿಕೊಟ್ಟಿದ್ದು, ಭೂಪರಿವರ್ತನೆಗೆ ಸರ್ಕಾರದ ಅನುಮತಿ ದೊರೆತಿದ್ದು, ಶೀಘ್ರದಲ್ಲಿ ಬಡಾವಣೆ ಅಭಿವೃದ್ಧಿಪಡಿಸುವ ಕಾರ್ಯ ಆರಂಭಿಸಲಾಗುವುದು. ಉಳಿದ ಭೂಮಿಯ ಭೂಮಾಲೀಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಕ್ರಮ ವಹಿಸಲಾಗುವುದು. ಸಮಾಲೋಚನೆಯ ನಂತರವೂ ಭೂಮಿಯನ್ನು ಪ್ರಾಧಿಕಾರಕ್ಕೆ ನೀಡಲು ಹಿಂದೆ ಸರಿದಲ್ಲಿ ಅಂತಹ ಮಾಲೀಕತ್ವದ ಭೂಮಿಯನ್ನು ನಿಯಮಾನುಸಾರ ಭೂಸ್ವಾದೀನಪಡಿಸಿಕೊಂಡು ಸರ್ಕಾರದ ಅನುಮತಿ ಪಡೆದು ಅಭಿವೃದ್ಧಿಪಡಿಸಲಾಗುವುದು ಎಂದವರು ನುಡಿದರು.
ಅಲ್ಲದೇ ನಗರಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಕನಿಷ್ಟ 1.20ಎಕರೆಗಿಂತ ಹೆಚ್ಚಿನ ಭೂಮಿಯನ್ನು 50:50ಅನುಪಾತದಲ್ಲಿಯಾದರೂ ಸರಿ ಅಥವಾ ಸಂಪೂರ್ಣ ಮಾಲೀಕತ್ವವನ್ನು ವಹಿಸಿಕೊಡಲು ಇಚ್ಚಿಸಿದಲ್ಲಿ ಸೂಡಾ ವತಿಯಿಂದ ಉತ್ತಮ ಬೆಲೆಗೆ ಖರೀದಿಸಿ, ಬಡಾವಣೆ ಸೃಜಿಸಿ, ಅರ್ಹರಿಗೆ ನಿವೇಶನ ವಿತರಿಸಲು ಕ್ರಮ ವಹಿಸಲಾಗುವುದು. 100ಎಕರೆ ಭೂಮಿ ಖರೀದಿಸಲು ಸೂಡಾ ಸಿದ್ದವಾಗಿದ್ದು, ಅದಕ್ಕಾಗಿ 70ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದರು.
ಇದಲ್ಲದೇ ಪ್ರಾಧಿಕಾರದಿಂದ ರಚಿಸಲಾದ ಬಡಾವಣೆಗಳಿಗೆ ಮೂಲಭೂತ ಸೌಕರ್ಯ, ರಸ್ತೆ ಅಭಿವೃದ್ಧಿ, ಇತ್ಯಾದಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಸಾರ್ವಜನಿಕರ ಹಿತಾಸಕ್ತಿಗಾಗಿ ನಿರ್ವಹಿಸಲಾಗುವುದು ಎಂದ ಅವರು ಸ್ವಾಮಿ ವಿವೇಕಾನಂದ ಬಡಾವಣೆಯ ಮಹಿಳಾ ಪಾಲಿಟೆಕ್ನಿಕ್ಕಾಲೇಜು ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಜೆ.ಹೆಚ್.ಪಟೇಲ್ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಗೋಪಿಶೆಟ್ಟಿಕೊಪ್ಪ, ನಿಧಿಗೆ ಮಾಚೇನಹಳ್ಳಿ, ಸೋಮಿನಕೊಪ್ಪದಲ್ಲಿ ವಸತಿ ಸಮುಚ್ಛಯ, ಊರುಗಡೂರಿನ ಪ್ರಾಧಿಕಾರದ ವಸತಿ ಬಡಾವಣೆಯಲ್ಲಿ ಇರುವ 04 ಎಕರೆ ಪ್ರದೇಶದಲ್ಲಿ ವಸತಿ ಯೋಜನೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಪ್ರಾಧಿಕಾರದ ಹೊಸ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಅದಕ್ಕಾಗಿ ಒಂದು ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ನಗರದ ಹೊರವರ್ತುಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪ್ರಸಕ್ತ ಸಾಲಿನ ಆಯ-ವ್ಯಯದಲ್ಲಿ 4.10ಕೋಟಿ ರೂ.ಗಳನ್ನು ಹಾಗೂ ಸೂಡಾ ಪ್ರದೇಶ ವ್ಯಾಪ್ತಿಯಲ್ಲಿನ ಕೆರೆಗಳ ಅಭಿವೃದ್ಧಿಗಾಗಿ 3ಕೋಟಿ., ಪ್ರಾಧಿಕಾರದ ಬಡಾವಣೆಗಳಲ್ಲಿನ ಉದ್ಯಾನವನಗಳ ಅಭಿವೃದ್ಧಿ, ನಿರ್ವಹಣೆಗೆ 3ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಈ ಉದ್ಯಾನವನಗಳನ್ನು ಅಲ್ಲಿನ ನಿವಾಸಿಗಳೇ ವ್ಯವಸ್ಥಿತವಾಗಿ ನಿರ್ವಹಿಸಲು ಅನುಕೂಲವಾಗುವಂತೆ ನಿವಾಸಿಗಳೋಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲದೇ ನಗರದ ಆಯ್ದ ಕಡೆಗಳಲ್ಲಿ ಆಟೋ-ಬಸ್ನಿರ್ಮಾಣ ಕಾಮಗಾರಿಗಳು, ಇತರೆ ಮೂಲಭೂತ ಸೌಕಕರ್ಯಗಳ ಅಭಿವೃದ್ಧಿಗಾಗಿ 5ಕೋಟಿ ಹಾಗೂ ಸೂಡಾ ಕಚೇರಿಯಲ್ಲಿನ ಅಭಿಲೇಖಾಲಯದ ದಾಖಲೆಗಳನ್ನು ಗಣಕೀಕರೀಸಲು 50ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದರು.
ಇಂದು ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್ಜನಪರವಾಗಿದ್ದು, ಸಮಾಜದ ಎಲ್ಲ ಸ್ತರಗಳನ್ನು ಒಳಗೊಂಡಿದೆ. ವಿಶೇಷವಾಗಿ ಮಹಿಳೆ, ಮಕ್ಕಳು, ಶಿಕ್ಷಣ, ಕೃಷಿ, ನೀರಾವರಿ ಕೈಗಾರಿಕೆ ಸೇರಿದಂತೆ ಎಲ್ಲಾ ವಲಯಗಳಿಗೂ ಆದ್ಯತೆ ನೀಡಲಾಗಿದೆ. ಜನಸ್ನೇಹಿ ಬಜೆಟ್ರೂಪಿಸಿ, ಮಂಡಿಸಿರುವ ಮಾನ್ಯಮುಖ್ಯಮಂತ್ರಿಗಳಿಗೆ ಅಭಿನಂದಿಸುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಸೂಡಾ ನಿರ್ದೇಶಕರಾದ ಸಿದ್ಧಪ್ಪ, ಪ್ರವೀಣ್ಕುಮಾರ್, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.