ಮಾನಸಿಕ ಒತ್ತಡ ಪ್ರತಿ ಹಂತದಲ್ಲೂ ಇದೆ. ಯಾವುದೇ ಇಲಾಖೆಗಳು ಹಾಗೂ ಅಧಿಕಾರಿಗಳು ಇದರಿಂದ ಹೊರತಾಗಿಲ್ಲ. ಹಾಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಕಾರ್ಯಾಗಾರ ಅತ್ಯವಶ್ಯಕವಾಗಿದೆ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದಾರಾಧ್ಯ ಹೆಚ್.ಜೆ ಹೇಳಿದರು.
ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾನಸಿಕ ಆರೋಗ್ಯದ ಕುರಿತು ಶನಿವಾರ ನಗರದ ಪೊಲೀಸ್ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಜಾರಿಗೆ ತಂದಿರುವ ಕಾನೂನನ್ನು ಹಾಗೂ ಯೋಜನೆಗಳನ್ನು ನಾವೆಲ್ಲ ತಿಳಿದುಕೊಳ್ಳಬೇಕು. ಸರ್ಕಾರವು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಜಾರಿಗೆ ತಂದಿದೆ. ಈ ಪ್ರಾಧಿಕಾರ ಸರ್ವೋಚ್ಚ ನಾಯ್ಯಾಧೀಶರ ಅಧೀನದಲ್ಲಿ ಕೆಲಸ ಮಾಡುತ್ತದೆ. ಸುಮಾರು ೧೦ ವಿವಿಧ ಕಾನೂನು ಹಾಗೂ ಯೋಜನೆಗಳನ್ನು ಇದು ಒಳಗೊಂಡಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ನೆರವು, ಮಾನಸಿಕ ಅಸ್ವಸ್ಥರಿಗಾಗಿಯೇ ಕಾನೂನು ಸೇವೆಗಳು, ವಕೀಲರ ಸಮಿತಿ, ಹಕ್ಕುಬಾಧ್ಯತೆ ಹಾಗೂ ಸರ್ಕಾರಿ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡುತ್ತದೆ ಎಂದರು.
ಮಾನಸಿಕ ಅಸ್ವಸ್ಥರನ್ನು ತಾರತಮ್ಯಕ್ಕೆ ಒಳಪಡಿಸದಂತೆ ನಮ್ಮೊಳಗೆ ಅವರೂ ಒಬ್ಬರಂತೆ ಕಾಣಬೇಕು. ಭಾರತ ಸಂವಿಧಾನ ಎಲ್ಲರಂತೆ ಅವರಿಗೂ ಜೀವಿಸುವ ಹಕ್ಕು, ಸಮಾನರಾಗಿ ಬಾಳುವ ಹಕ್ಕು, ಮತದಾನದ ಹಕ್ಕು, ಕಾನೂನು ಸೇವೆ ಪಡೆಯುವ ಹಕ್ಕನ್ನು ನೀಡಿದೆ. ಅದರಂತೆ ೧೯೮೭ ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಯನ್ನು ಕೂಡ ಜಾರಿಗೆ ತರಲಾಗಿದೆ. ನಾವೆಲ್ಲರೂ ಮಾನಸಿಕ ಅಸ್ವಸ್ಥರಿಗೆ ಈ ಹಕ್ಕುಗಳ ಹಾಗೂ ಕಾನೂನಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಮನುಷ್ಯ ಅನೇಕ ಮಾನಸಿಕ ಒತ್ತಡಗಳಿಗೆ ಸಿಲುಕಿ ಅತ್ಮಹತ್ಯೆ ಹಾದಿ ತುಳಿಯುತ್ತಿದ್ದು, ಪ್ರತಿದನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಹೆಚ್ಚು ಗಂಡು ಮಕ್ಕಳೆ ಆಗಿದ್ದಾರೆ. ಇವರು ಸದಾ ಗಂಡು ಎಂಬ ಅಹಂಗೆ ಬಿದ್ದು ಭಾವನೆಗಳನ್ನು, ನೋವುಗಳನ್ನು ವ್ಯಕ್ತಪಡಿಸಲಾಗದೆ ಹಾಗೂ ಅದನ್ನು ಎದುರಿಸಲಾಗದೆ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ಗಂಡು ಮಕ್ಕಳನ್ನು ಈ ಅಹಂ ನಿಂದ ಹೊರಬರುವಂತೆ ಮಾಡಬೇಕು. ಅವರ ನೋವುಗಳನ್ನು ತೊಡಿಕೊಳ್ಳುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಆ ಮೂಲಕ ೨೦೩೦ ರಷ್ಟರಲ್ಲಿ ಆತ್ಮಹತ್ಯೆಯ ಪ್ರಮಾಣ ಶೇ.೧೦ ರಷ್ಟು ಕಡಿಮೆ ಮಾಡುವಲ್ಲಿ ಮುಂದಾಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸದಾ ಕೆಲಸದ ಒತ್ತಡದಲ್ಲಿರುವ ಆರಕ್ಷಕರಿಗಾಗಿ ಮಾನಸಿಕ ಆರೋಗ್ಯ ಕಾರ್ಯಾಗಾರ ಏರ್ಪಡಿಸಿರುವುದು ಬಹಳ ಅರ್ಥಪೂರ್ಣವಾಗಿದೆ. ನಮ್ಮ ಮಾನಸಿಕ ಆರೋಗ್ಯ, ಮಾನಸಿಕ ಕಾನೂನು ಹಾಗೂ ಆ ಕಾನೂನು ಹೇಗೆ ಅನುಷ್ಠಾನಕ್ಕೆ ತರಬೇಕೆಂದು ಈ ವೇದಿಕೆ ತಿಳಿಸಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇತ್ತೀಚೆಗೆ ಕಾನೂನು ಮತ್ತು ಸುವ್ಯವಸ್ಥೆ ಬದಲಾಗಿದೆ. ಈ ಬದಲಾವಣೆ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಯಾಗಬೇಕು ಎಂದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಬಗ್ಗೆ ಕಾಳಜಿ ವಹಿಸಬೇಕು. ಯಾಕೆಂದರೆ ಕೋವಿಡ್ ಅಂತಹ ಸಮಯದಲ್ಲಿ ಸಾರ್ವಜನಿಕರು ಒಳಗೊಂಡಂತೆ ಪೊಲೀಸರು ಕೂಡ ಮಾನಸಿಕ ಒತ್ತಡಕ್ಕೆ ಸಿಲುಕಿ ಸಾವನ್ನಪ್ಪಿದ್ದು ನಾವೆಲ್ಲಾ ನೋಡಿದ್ದೇವೆ. ಹಾಗಾಗಿ ಆರೋಗ್ಯದ ಬಗ್ಗೆ ಎಚ್ಚರದಿಂದರಬೇಕು. ಪೊಲೀಸ್ ಇಲಾಖೆಯು ತಮ್ಮ ಮಿತಿಯನ್ನು ಮೀರಿ ಒತ್ತಡಕ್ಕೆ ಒಳಗಾಗುತ್ತದೆ. ಕೆಲವೊಮ್ಮೆ ಆ ಒತ್ತಡಕ್ಕೆ ಮಣಿದು ಕಾರ್ಯನಿವಹಿಸಬೇಕಾಗುತ್ತದೆ. ಇದರಿಂದ ಅನೇಕ ಲೋಪಗಳು, ಅನಾಹುತಗಳು ನಡೆಯುತ್ತವೆ. ಅದರಿಂದ ಆತ್ಮಹತ್ಯೆಯಂತಹ ಪ್ರಕರಣಗಳು ಸಹ ಸಂಭವಿಸಿವೆ ಎಂದರು.
ಇಂತಹ ವಿಷಯಗಳನ್ನೆಲ್ಲಾ ಗಮನಿಸಿದ ನಂತರ ಪೊಲೀಸ್ ಇಲಾಖೆ ನಿಮ್ಹಾನ್ಸ್ನೊಂದಿಗೆ ಸಮಾಲೋಚನೆ ನಡೆಸಿ ೩೧ ಜಿಲ್ಲೆಯ ಪೊಲೀಸ್ ಕೇಂದ್ರ ಕಚೇರಿಗಳಲ್ಲಿ ಮಾನಸಿಕ ಆರೋಗ್ಯಕ್ಕೆಂದು ಉತ್ತಮ ಮನೋ ತಜ್ಞರನ್ನು ನೇಮಿಸಲಾಗಿದೆ. ಅವರುಗಳು ಪೊಲೀಸ್ ಅಧಿಕಾರಿಗಳೊಂದಿಗೆ ವೈಯಕ್ತಿವಾಗಿ, ಸಾಮೂಹಿಕವಾಗಿ ಸಮಾಲೋಚನೆ ನಡೆಸುವ ಮೂಲಕ ಅಧಿಕಾರಗಳ ಮಾನಸಿಕ ಒತ್ತಡಕ್ಕೆ ಪರಿಹಾರವನ್ನು ನೀಡುವರು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ ಮಾತನಾಡಿ, ವಕೀಲರು ಹಾಗೂ ಪೊಲೀಸರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಆತ್ಮಕ್ಕೆ ತೃಪ್ತಿಯಾಗುವಂತಹ ಕೆಲಸ ಮಾಡಬೇಕು. ಆಗ ಮಾತ್ರ ಮಾನಸಿಕ ಆರೋಗ್ಯ ನಮ್ಮ ಹಿಡಿತದಲ್ಲಿ ಇರುತ್ತದೆ. ಬೇರೆ ಯಾವುದೇ ಆಲೋಚನೆಗಳಲ್ಲಿ ತೊಡಗದೆ ನಮ್ಮ ಮಿತಿಯಲ್ಲಿ ಕೆಲಸ ಮಾಡಿಕೊಂಡು ಹೋಗಬೇಕು ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರ್ಯಪ್ಪ, ಡಿಹೆಚ್ಓ ಡಾ.ನಟರಾಜ್ ಕೆ ಎಸ್, ಸಿಮ್ಸ್ನ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ರಾಮ್ ಪ್ರಸಾದ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣ್ ಎಸ್ ಕೆ, ಮನೋತಜ್ಞ ಡಾ.ಪ್ರಮೋದ್ ಹೆಚ್ ಎಲ್ ಪಾಲ್ಗೊಂಡಿದ್ದರು.