ಚಿಕ್ಕ ವಯಸ್ಸಿನಿಂದಲೇ ದುಶ್ಚಟಗಳಿಂದ ದೂರವಿದ್ದು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎನ್ಎಸ್ಎಸ್ ಘಟಕ 1, 2, 3, ಬಾಪೂಜಿನಗರ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ.ಮ.ನಿ.ಪ್ರ.ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವ್ಯಸನಮುಕ್ತ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಮಹಾಂತ ಶಿವಯೋಗಿಗಳು ಜನರ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಳ್ಳುತ್ತಾ ವ್ಯಸನಗಳಿಂದ ಮುಕ್ತರಾಗಿರಬೇಕೆಂದು ಜಾಗೃತಿ ಮೂಡಿಸುತ್ತಿದ್ದರು. ಯುವಜನತೆ ಸೇರಿದಂತೆ ಎಲ್ಲರೂ ಗುಟ್ಕಾ, ಸಿಗರೇಟ್, ತಂಬಾಕು, ಮದ್ಯ ಮುಂತಾದ ಮಾದಕ ವ್ಯಸನಗಳಿಂದ ದೂರ ಇರಬೇಕು. ಆರೋಗ್ಯವೇ ಎಲ್ಲಕ್ಕೂ ಮೂಲ. ಆರೋಗ್ಯ ಬಹಳ ಮುಖ್ಯವಾಗಿದ್ದು, ದೈಹಿಕ, ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.
ದುಶ್ಚಟಗಳಿಂದ ದೂರವಿದ್ದಾಗ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಅಭ್ಯಾಸ, ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದ ಅವರು ಸರ್ಕಾರಿ ಶಾಲಾ ಕಾಲೇಜುಗಳು ಮಾದರಿಯಾಗಿರಬೇಕು ಎಂದರು.
ಪಾಸಿಟಿವ್ ಮೈಂಡ್ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಡಾ.ಐಶ್ವರ್ಯಾ ವಿ.ಹೆಚ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅರಿವೇ ಗುರು. ನಮ್ಮ ಅರಿವನ್ನು ನಾವು ಗುರುವಾಗಿ ಸ್ವೀಕರಿಸಿ ಉತ್ತಮ ಮಾರ್ಗದಲ್ಲಿ ನಡೆಯಬೇಕು.
ವರದಿಯೊಂದರ ಪ್ರಕಾರ ಭಾರತದಲ್ಲಿ 16 ಕೋಟಿ ಜನರು ಮದ್ಯಪಾನಕ್ಕೆ, 3.1 ಕೋಟಿ ಜನ ಗಾಂಜಾ, 5.7 ಕೋಟಿ ಜನ ಯಾವುದಾದರೊಂದು ವ್ಯಸನಕ್ಕೆ ತುತ್ತಾಗಿದ್ದಾರೆ. ಸಾಮಾನ್ಯವಾಗಿ 14 ರಿಂದ 15 ವಯಸ್ಸಿನಲ್ಲಿ ಈ ವ್ಯಸನ ಶುರುವಾಗುತ್ತದೆ. ಮೀಡಿಯಾ ಪ್ರಭಾವ, ಜಾಹಿರಾತುಗಳಿಂದ ಶೇ.60 ರಷ್ಟು ಮಾದಕ ವಸ್ತುಗಳ ಬಳಕೆ ಹೆಚ್ಚಿದೆ ಎಂದು ವರದಿಯೊಂದು ಹೇಳುತ್ತದೆ.
ಪಾರ್ಟಿ ಸಂಸ್ಕೃತಿ, ಕಾನೂನು ಬಾಹಿರ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಹೆಚ್ಚಾಗಿರುವುದು ಹೀಗೆ ಹಲವು ಕಾರಣಗಳಿಂದ ಈ ವ್ಯಸನ ಸುಲಭವಾಗಿದೆ.
ಹದಿ ವಯಸ್ಸಿನ ಗುಂಪಿನವರು ಬೇಗ ವ್ಯಸನಗಳಿಗೆ ಬಲಿಯಾಗುತ್ತಾರೆ. ನಮ್ಮ ದೇಶ ಯೂತ್ ಅಡಿಕ್ಷನ್ ಸೆಂಟರ್ ಆಗುತ್ತಿದೆ. ಇದಕ್ಕೆ ಹದಿಹರೆಯದ ಕುತೂಹಲ, ಮೀಡಿಯಾ ಪ್ರಭಾವ, ಹೆದರಿಕೆ, ನೋವು, ಇತರೆ ಹಲವಾರು ಕಾರಣಗಳಿವೆ ಕೇವಲ 0.5 ರಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾದಕ ವಸ್ತುಗಳು ನಮ್ಮ ನಡವಳಿಕೆ, ಮೂಡು, ಯೋಚಿಸುವ ಕ್ರಮವನ್ನು ಬದಲಿಸುತ್ತದೆ. ತಲೆನೋವು, ನಿದ್ರೆ ಸಮಸ್ಯೆ, ತೊದಲು, ಗಂಟಲು, ಹೊಟ್ಟೆ, ಮೆದುಳು, ಹೃದಯಕ್ಕೆ ಹಾನಿ ಮಾಡುತ್ತವೆ, ಕ್ಯಾನ್ಸರ್ ಸೇರಿದಂತೆ ಅನೇಕ ರೀತಿಯ ಖಾಯಿಲೆಗಳೂ ಬರುತ್ತವೆ. ಮಾನಸಿಕ ಆರೋಗ್ಯ ಕೆಟ್ಟು ಕೋಪ, ಕುಟುಂಬದಿAದ ದೂರವಿರುವುದು, ಅಪಾಯಕಾರಿ ನಡವಳಿಕೆ, ಸಮಾಜ ಘಾತುಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಈ ರೀತಿಯ ಸಮಸ್ಯೆಗಳು ಉದ್ಭವವಾಗುತ್ತವೆ. ಚಟಗಳು ನಮ್ಮ ಮೆದುಳಿನ ರಾಸಾಯನಿಕಗಳನ್ನು ಏರುಪೇರು ಮಾಡುತ್ತವೆ.
ಮದ್ಯ, ಗಾಂಜಾ, ಓಪಿಯಾಡ್ಸ್, ಕೊಕೇನ್, ವಿವಿಧ ಬಗೆಯ ಮಾದಕ ವಸ್ತುಗಳ ಬಳಕೆದಾರರು ಇದ್ದಾರೆ. ಮಾದಕ ವಸ್ತು ತೆಗೆದುಕೊಂಡು ಅಪಾಯಕಾರಿ ಚಟುವಟಿಕೆಯಲ್ಲಿ ತೊಡಗುವುದು, ಅಪರಾಧ ಚಟುವಟಿಕೆಯಲ್ಲಿ ತೊಡಗುವವರು ಇದ್ದಾರೆ.
ಗೆಳೆಯರು ಸೇರಿದಂತೆ ಯಾರೇ ಮಾದಕ ವಸ್ತುಗಳನ್ನು ಬಳಸಲು ಮನವೊಲಿಸಿದರೆ ಬೇಡ ಎನ್ನಬೇಕು. ಮನಸ್ಸು ದುರ್ಬಲ ಆಗಬಾರದು. ಒಳ್ಳೆಯ ಗೆಳೆಯರನ್ನು ಮಾಡಿಕೊಳ್ಳಬೇಕು. ಒಂದು ವೇಳೆ ವ್ಯಸಕ್ಕೆ ತುತ್ತಾದಲ್ಲಿ ವ್ಯಸನವನ್ನು ತಕ್ಷಣಕ್ಕೆ ಬಿಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಬಿಡಬೇಕು. ವ್ಯಸನ ಮುಕ್ತರಾಗಲು ಚಿಕಿತ್ಸೆ, ಆಪ್ತ ಸಮಾಲೋಚನೆ ಲಭ್ಯವಿದ್ದು ಅದನ್ನು ಪಡೆಯಲು ಮುಂದೆ ಬರಬೇಕು.
ಡಾ.ಐಶ್ವರ್ಯಾ ವಿ ಹೆಚ್, ಆಪ್ತ ಸಮಾಲೋಚಕರು, ಪಾಸಿಟಿವ್ ಮೈಂಡ್ ಆಸ್ಪತ್ರೆ
ಮಾದಕ ವಸ್ತುಗಳು ಮಾತ್ರ ಕಿಕ್ ಕೊಡುವುದಿಲ್ಲ. ಯಶಸ್ಸು, ಸಾಧನೆಗಳು ಕೂಡ ಕೊಡುತ್ತವೆ. ಸರ್ಕಾರ, ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಅರಿವು ಮೂಡಿಸುತ್ತಿದ್ದು, ವಿದ್ಯಾರ್ಥಿಗಳಾದ ನೀವು ಕೂಡ ಜಾಗೃತರಾಗಿ ತಮ್ಮ ಸುತ್ತಮುತ್ತ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.
ಡಿಹೆಚ್ಓ ಡಾ.ನಟರಾಜ್ ಮಾತನಾಡಿ, ಯುವಜನತೆ ಮೊದ ಮೊದಲಿಗೆ ಫ್ಯಾಷನ್ಗಾಗಿ, ಅಥವಾ ಗೆಳೆಯರ ಒತ್ತಡಕ್ಕೆ ಮಣಿದು ಮಾದಕ ವಸ್ತುಗಳನ್ನು ತೆಗೆದುಕೊಳ್ಳಲು ಶುರು ಮಾಡುತ್ತಾರೆ. ಅದು ಬರ ಬರುತ್ತಾ ಚಟವಾಗಿ ಪರಿಣಮಿಸಿ, ದೈಹಿಕ, ಮಾನಸಿಕ, ಸಾಮಾಜಿಕ, ಕೌಟುಂಬಿಕ ಹೀಗೆ ಎಲ್ಲ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತದೆ. ಖುಷಿಗಾಗಿ ಆರಂಭವಾದದ್ದು ವ್ಯಸನವಾಗಿ ಮಾರ್ಪಟ್ಟು ಆರೋಗ್ಯ ಹದಗೆಡುತ್ತಾ ಹೋಗಿ ಜೀವನವೇ ಹಾಳಾಗುತ್ತದೆ.
ಹದಿಹರೆಯದ ವೇಳೆ ಯುವಜನತೆ ದುಶ್ಚಟಗಳಿಗೆ ದಾಸರಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಈ ವಯಸ್ಸಿನ ಗುಂಪಿನವರು ಅತ್ಯಂತ ಜಾಗೃತೆಯಿಂದ ಇರಬೇಕು. ವ್ಯಸನಕ್ಕೊಳಗಾದ ವ್ಯಕ್ತಿ ಒಂದೇ ಬಾರಿ ಅದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ನಡುಕ, ಸಿಟ್ಟು, ಕೋಪ ಇತರೆ ಲಕ್ಷಣಗಳು ಹೆಚ್ಚಾಗಿರುತ್ತವೆ. ವ್ಯಸನಮುಕ್ತವಾಗಲು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದು, ಚಿಕಿತ್ಸೆ ಪಡೆಯಲು ಮುಂದೆ ಬಂದು ಇದರಿಂದ ಹೊರಬರಬೇಕು. ಯುವಜನತೆ ದೇಶದ ಆಸ್ತಿಯಾಗಿದ್ದು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಾರ್ತಾಧಿಕಾರಿ ಆರ್.ಮಾರುತಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಜೀವನದಲ್ಲಿ ಏನೇ ಮಾಡಬೇಕು ಮತ್ತು ಸಾಧಿಸಬೇಕೆಂದರೂ ಆರೋಗ್ಯ ಬಹಳ ಮುಖ್ಯವಾಗಿದ್ದು ಯುವಜನತೆ ಸೇರಿದಂತೆ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಬಾಗಲಕೋಟೆ ಜಿಲ್ಲೆಯ ಡಾ.ಮಹಾಂತ ಶಿವಯೋಗಿಗಳು ಜನರ ಆರೋಗ್ಯದ ಹಿತದೃಷ್ಟಿಯಿಂದ ದುಶ್ಚಟಗಳನ್ನು ಬಿಡಿಸಲು ತಮ್ಮ ಜೋಳಿಗೆಯಲ್ಲಿ ದುಶ್ಚಟಗಳ ಭಿಕ್ಷೆ ಬೇಡಿ, ಯುವಜನತೆ, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಅವರ ಸ್ಮರಣಾರ್ಥ ರಾಜ್ಯ ಸರ್ಕಾರ ಅವರ ಜನ್ಮ ದಿನವಾದ ಆ.1 ನ್ನು ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ದುಶ್ಚಟಗಳು ಸರ್ವಾಂಗೀಣ ಅಭಿವೃದ್ದಿಗೆ ಮಾರಕವಾಗಿದ್ದು, ಯುವಜನತೆ ಸೇರಿದಂತೆ ಎಲ್ಲರೂ ಯಾವುದೇ ದುಶ್ಚಟಗಳಿಂದ ದೂರ ಇರಬೇಕು ಎಂದು ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಜಿ.ಚನ್ನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾವಿ ಹಾಕಿದ, ಯಾವ ಪದವಿಯೂ ಇಲ್ಲದ ಡಾ.ಮಹಾಂತ ಶಿವಯೋಗಿಗಳು ಜನರನ್ನು ದುಶ್ಚಟಗಳಿಂದ ಮುಕ್ತ ಗೊಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಸಾಮಾನ್ಯವಾಗಿ ಪಾಸಿಟಿವ್ ಮತ್ತು ನೆಗೆಟಿವ್ ಚಟಗಳಿರುತ್ತವೆ. ಆದರೆ ನಾವು ಉತ್ತಮ ಚಟಗಳನ್ನು ಹತ್ತಿಸಿಕೊಳ್ಳಬೇಕು. ಸಂಗೀತ, ಸಾಹಿತ್ಯ ,ಪ್ರವಾಸ, ಸಾಧನೆ ಇಂತಹ ವ್ಯಸನ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕಿ ವಿದ್ಯಾ, ಎಸ್ಸ್ಎಸ್ ಘಟಕ 1, 2 ಮತ್ತು 3 ರ ಸಂಯೋಜಕರಾದ ಸೋಮಶೇಖರ್, ಸುಧಾಕರ್, ಜಾನ್ಹವಿ, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.