ಕರ್ನಾಟಕದ ಶಬರಿಮಲೆ ಬೆಜ್ಜವಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಿಶೇಷ ಅದ್ದೂರಿ ಸಂಕ್ರಾಂತಿ ಉತ್ಸವ ಕಾರ್ಯಕ್ರಮ…
ಮಂಜುನಾಥ್ ಶೆಟ್ಟಿ…
ಕರ್ನಾಟಕದ ಶಬರಿಮಲೆ ಹಿಂದೆ ಪ್ರಸಿದ್ಧವಾಗಿರುವ ತೀರ್ಥಹಳ್ಳಿ ತಾಲ್ಲೂಕು ಬೆಜ್ಜುವಳ್ಳಿಯ ಶ್ರೀ ಅಯ್ಯಪ್ಪಸ್ವಾಮಿ ಧಾರ್ಮಿಕ ದತ್ತಿ ವತಿಯಿಂದ ಜ. 14 ಮತ್ತು 15ರಂದು ವಿಶೇಷ ಮಕರ ಸಂಕ್ರಾಂತಿ ಮಹೋತ್ಸವ ಮತ್ತು ಶ್ರೀಗಳ ಪೀಠಾರೋಹಣದ ವರ್ಧಂತ್ಯೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಪೀಠಾಧಿಪತಿ ಡಾ. ಶ್ರೀ ಶ್ರೀ ಶ್ರೀ ವಿಶ್ವ ಸಂತೋಷ ಭಾರತಿ ಶ್ರೀಪಾದರು ಹೇಳಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ತೀರ್ಥಹಳ್ಳಿಯ ಬೆಜ್ಜುವಳ್ಳಿ ಕರ್ನಾಟಕದ ಶಬರಿಮಲೈ ಎಂದೇ ಹೆಸರಾಗಿದೆ. ಶಬರಿಮಲೈ ಬಿಟ್ಟರೆ ಬೆಜ್ಜುವಳ್ಳಿಗೆ ಹೆಚ್ಚು ಭಕ್ತರು ಇಲ್ಲಿ ಆಗಮಿಸಿ ಇರುಮುಡಿ ಸಲ್ಲಿಸುತ್ತಾರೆ. ಕಳೆದ 14ವರ್ಷಗಳಿಂದ ಈ ಕ್ಷೇತ್ರ ಅತ್ಯಂತ ಧಾರ್ಮಿಕ ಕ್ಷೇತ್ರವಾಗಿ ಅಯ್ಯಪ್ಪ ಸ್ವಾಮಿಯ ಕೇಂದ್ರವಾಗಿದೆ. ದೇಶದ ಗುರುಸಿಂಹಾಸನ ಪೀಠ ಪಡೆದ ಮೊದಲ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರದಲ್ಲಿ ಪ್ರತಿ ವಷರ್ಘದಂತೆ ಈ ವರ್ಷವೂ ಸಹ ಅತ್ಯಂತ ವಿಜೃಂಭಣೆಯಿಂದ ಮಕರ ಸಂಕ್ರಾಂತಿ ಮಹೋತ್ಸವವನ್ನು ದೇವಳದ ಕುಟುಂಬಸ್ಥರುಮ ಭಗವತ್ಪಾದಕರು ಮತ್ತು ಗ್ರಾಮಸ್ಥರು ಒಟ್ಟಾಗಿ ಆಚರಿಸಲಾಗುವುದು ಎಂದರು.
14-1-2026…
14ರಂದು ಮುಂಜನೆಯೇ ಗಣಪತಿ ಪೂಜೆ, ಹೋಮ-ಹವನ, ಕಲಶ ಸ್ಥಾಪನೆ ನಡೆಯುತ್ತದೆ. ಶ್ರೀ ಡಾ. ವಿಶ್ವ ಸಂತೋಷ ಭಾರತಿ ಶ್ರೀ ಪಾದಂಗಳವರ ಪೀಠಾರೋಹಣ ವರ್ಧಂತ್ಯೋತ್ಸವ ಸಮಾರಂಭ ನಡೆಯುತ್ತದೆ. ಬೆಳಿಗ್ಗೆಯಿಂದಲೇ ರಾಜಪಲ್ಲಕ್ಕಿ ಮಹಾಪೂಜೆ, ಹರಕೆ ತುಲಾಭಾರ ಸೇವೆ, ಬ್ರಹ್ಮಕಲಶ ಸ್ಥಾಪನೆ, ಕ್ಷೇತ್ರಗಣಗಳ ದೇವರ ಬೀಡಿಗೆ ಆಗಮಿಸುತ್ತವೆ. ನಂತರ ಬೀಡಿನಲ್ಲಿ ಆಭರಣ ಹಾಗೂ ಪಟ್ಟದ ಆಯುಧಗಳ ಮಹಾಪೂಜೆ ನಡೆಯುತ್ತದೆ. ಮಧ್ಯಾಹ್ನ 11.15ಕ್ಕೆ ಅಯ್ಯಪ್ಪಸ್ವಾಮಿ ಉತ್ಸವಮೂರ್ತಿಗೆ ಮಹಾಮಂಗಳಾರತಿ ನಡೆಯುತ್ತದೆ. ನಂತರ ರಾಜಪಲ್ಲಕ್ಕಿಯಲ್ಲಿ ಸ್ವಾಮಿಯ ಪಾದುಕೆಪೂಜೆ ನಡೆದು, 11.45ಕ್ಕೆ ಭವ್ಯಾಕರ್ಷಣೆಯ ಆಭರಣೋತ್ಸವ ಹಾಗೂ ಪರಿವಾರ ಧೈವಗಳೊಂದಿಗೆ ರಾಜಪಲ್ಲಕ್ಕಿಯೂ ಬೀಡಿನಿಂದ ಸನ್ನಿಧಾನಕ್ಕೆ ಭವ್ಯ ಮೆರವಣಿಗೆಯ ಮೂಲಕ ಸಾಗುತ್ತದೆ. ನಂತರ ಅಯ್ಯಪ್ಪ ಸ್ವಾಮಿಯ ಉಯ್ಯಾಲೆ ಸೇವೆ, ಕನಕಾಭಿಷೇಕ, ಕುಂಭಾಭಿಷೇಕ, 1.45ಕ್ಕೆ ಮಹಾಮಂಗಳಾರತಿ ನಡೆಯುತ್ತದೆ ಎಂದು ತಿಳಿಸಿದರು.
ಅಂದು ಮಧ್ಯಾಹ್ನ 2.30ಕ್ಕೆ ಧಾರ್ಮಿಕಸಭೆ ನಡೆಯಲಿದೆ. ಗೌರಿಗದ್ದೆಯ ಅವಧೂತ ವಿನಯ ಗುರೂಜಿ, ಬೆಂಗಳೂರಿನ ಬಿಜಿಎಸ್ನ ಪ್ರಕಾಶನಾಥ ಸ್ವಾಮೀಜಿ, ಡಾ.ವಿಶ್ವಸಂತೋಷ ಭಾರತಿ ಶ್ರೀಪಾದರು ದಿವ್ಯಸಾನಿಧ್ಯ ವಹಿಸಲಿರುವ ಈ ಸಭೆಯನ್ನು ಶಿಕ್ಷಣ ಸಚಿವ ಮಧುಬಂಗಾರಪ್ಪ ಉದ್ಘಾಟಿಸುವರು.
ಶಾಸಕ ಆರಗ ಜನೇಂದ್ರ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೃಹಸಚಿವ ಡಾ. ಜಿ. ಪರಮೇಶ್ವರ್, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕರುಗಳಾದ ಬಲ್ಕೀಶ್ಬಾನು, ಬೋಜೇಗೌಡ, ಪ್ರಮುಖರಾದ ಹರೀಶ್ಕುಮಾರ್, ತೇಜಸ್ವಿನಿಗೌಡ, ಡಾ. ಆರ್.ಎಂ. ಮಂಜುನಾಥಗೌಡ, ಅಶೋಕ್ಮೂರ್ತಿ ಸೇರಿದಂತೆ ಹಲವರು ಈ ಧಾರ್ಮಿಕಸಭೆಯಲ್ಲಿ ಪಾಲ್ಗೊಳ್ಳುವರು ಎಂದರು.
ಶ್ರೀ ಹರಿಹರಾತ್ಮಜ ಪೀಠ ಪ್ರಶಸ್ತಿ ಪ್ರಧಾನ…
ಶ್ರೀ ಹರಿಹರಾತ್ಮಜ ಪೀಠ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ಈ ಬಾರಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ಜನಪದ ಗಾಯಕ ಕೆ.ಯುವರಾಜ್, ಹುಬ್ಬಳ್ಳಿಯ ಅಯ್ಯಪ್ಪ ಗುರುಸ್ವಾಮಿ, ಶಿವಾನಂದ ಬಾರ್ಕಿಯವರಿಗೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ನಟ ಶಿವರಾಜ್ಕುಮಾರ್, ಅರ್ಜುನ್ಜನ್ಯ ಸೇರಿದಂತೆ ಹಲವು ಸಿನಿಮಾ ನಟರು-ನಿರ್ದೇಶಕರು ಇರುಮುಡಿ ಇಲ್ಲಿಯೇ ಕಟ್ಟಲು ಶ್ರೀಕ್ಷೇತ್ರಕ್ಕೆ ಆಗಮಿಸುತ್ತಾರೆ ಎಂದರು.
15-1-2026…
ಜ.15ರಂದು ಬೆಳಿಗ್ಗೆ 10ಕ್ಕೆ ಆಶ್ಲೇಷಬಲಿ ಮಹಾಪೂಜೆ ಹಾಗೂ ಸಂಜೆ 4ಗಂಟೆಗೆ ಹನುಮಗಿರಿ ಮೇಳದವರಿಂದ ಯಕ್ಷಗಾನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ಕುಮಾರಶಾಸ್ತ್ರೀ, ರಮೇಶ್ ಶೆಟ್ಟಿ ಶಂಕರಘಟ್ಟ, ಸತೀಶ್ ಎನ್.ಡಿ., ಸುಭಾಷ್ಶೆಟ್ಟಿ, ಉದಯಕುಮಾರ್ ಶೆಟ್ಟಿ ಇದ್ದರು.