ಮಂಜುನಾಥ್ ಶೆಟ್ಟಿ…
ಶಿವಮೊಗ್ಗದ ವಿಮಾನ ನಿಲ್ದಾಣ ಹತ್ತಿರವಿರುವ ಪ್ರತ್ಯಂಗೀರಾ ದೇವಸ್ಥಾನದ ಗರೂಜಿ ಮತ್ತು ಸಹೋದರ ನಡುವೆ ಇರುವ ಆಸ್ತಿವಿವಾದ ಕೊನೆಗೂ ಠಾಣ ಮೆಟ್ಟಿಲೇರಿ ಎರಡು ಎಫ್ ಐಆರ್ ದಾಖಲಾಗಿದೆ.
ಸುಪ್ರೀತ್ ಗುರೂಜಿ ಅಲಿಯಾಸ್ ಮೆಣಸಿನಕಾಯಿ ಸ್ವಾಮೀಜಿ ಅವರ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ದೂರು ದಾಖಲಾಗಿರುವ ಬೆನ್ನಲ್ಲೇ, ಸುಪ್ರೀತ್ ಗುರೂಜಿಯೂ ಸಹ ಸಹೋದರ ತಂದೆ ಹಾಗೂ ಕೆಲವರ ವಿರುದ್ಧ ಅತಿಕ್ರಮ ಪ್ರವೇಶ ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರತಿದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎರಡು ಎಫ್ಐಆರ್ಗಳು ದಾಖಲಾಗಿದೆ.
ಮಾಹಿತಿಯ ಪ್ರಕಾರ ಸುಪ್ರೀತ್ ಗುರೂಜಿ ಅವರ ವಿರುದ್ಧ ಹರೀಶ್ ಎಂಬುವವರ ದೂರಿನ ಆಧಾರದ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸುಪ್ರೀತ್ ಗುರೂಜಿ ಹರೀಶ್ ಎಂಬುವರನ್ನ ಜಾತಿ ನಿಂದನೆ ಮಾಡಿರುವ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದಾರೆ. ತಂದೆ ವೆಂಕಟೇಶ್ ಮತ್ತು ಸಹೋದರ ಉದೀತ್ ಪರ ಹರೀಶ್ ಮತ್ತು ಇತರರು ಆಸ್ತಿ ವಿವಾದದಲ್ಲಿ ಪ್ರತಿಭಟನೆ ಮಾಡುವಾಗ ಅವರ ಕಾಲರ್ ಹಿಡಿದು ಕಾಲಿನಿಂದ ಒದ್ದಿರುವ ಬಗ್ಗೆ ಉಲ್ಲೇಖಿಸಿ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ.
ಇದರ ಪ್ರತಿಯಾಗಿ ಸುಪ್ರೀತ್ ಗುರೂಜಿ ಅವರ ಕಡೆಯಿಂದಲೂ ದೂರು ದಾಖಲಾಗಿದ್ದು, ಉದಿತ್, ವೆಂಕಟೇಶ್ ಸೇರಿದಂತೆ ಕೆಲವರು ಹಾಗೂ ಭಕ್ತರ ಸಂಘಟನೆಗಳೊಂದಿಗೆ ಸೇರಿಕೊಂಡು ಮನೆಗೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದೂರಿನಲ್ಲಿ ಆರೋಪಿಗಳು ಗೇಟ್ ಒಳಗೆ ನುಗ್ಗಿ ಮನೆಗೆ ಬಂದು ತಮ್ಮನ್ನು ಹಾಗೂ ಕುಟುಂಬದ ಸದಸ್ಯರನ್ನು ಎಳೆದಾಡಿದ್ದಾರೆ. ತಮ್ಮ ಪತ್ನಿಯನ್ನೂ ಎಳೆದಾಡಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಅತಿಕ್ರಮ ಪ್ರವೇಶ ಮತ್ತು ಜೀವ ಬೆದರಿಕೆ ಆರೋಪಗಳನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ, ಒಂದು ಕಡೆ ಅಟ್ರಾಸಿಟಿ ಕಾಯ್ದೆಯಡಿ ಸುಪ್ರೀತ್ ಗುರೂಜಿ ವಿರುದ್ಧ ದೂರು ದಾಖಲಾಗಿದ್ದರೆ, ಮತ್ತೊಂದೆಡೆ ಮನೆಗೆ ಅತಿಕ್ರಮ ಪ್ರವೇಶ, ಕುಟುಂಬದ ಸದಸ್ಯರೊಂದಿಗೆ ಎಳೆದಾಟ ಹಾಗೂ ಜೀವ ಬೆದರಿಕೆ ಆರೋಪಗಳ ಕುರಿತು ಪ್ರತಿದೂರು ದಾಖಲಾಗಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.
ಆದರೆ, ಎರಡೂ ಕಡೆಯ ಆರೋಪಗಳು ತನಿಖೆಯಲ್ಲಿದ್ದು ಆರೋಪಗಳು ಸಾಬೀತಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸುವ ತನಿಖೆ ಹಾಗೂ ಮುಂದಿನ ಕಾನೂನು ಕ್ರಮಗಳಿಂದ ಪೂರ್ಣ ಮಾಹಿತಿ ತಿಳಿಯುತ್ತದೆ.