ಮಂಜುನಾಥ್ ಶೆಟ್ಟಿ…

ದಸರಾ ಕ್ರೀಡಾಕೂಟ ಕೇವಲ ಸ್ಪರ್ಧೆಯಲ್ಲ; ಆರೋಗ್ಯವಂತ, ಶಿಸ್ತಿನ, ಆತ್ಮವಿಶ್ವಾಸಿ ಮತ್ತು ಜವಾಬ್ದಾರಿಯುತ ಯುವಜನತೆಯನ್ನು ರೂಪಿಸುವ ಪ್ರಮುಖ ವೇದಿಕೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್‌ವಿ. ಅವರು ಹೇಳಿದರು.


ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೈಹಿಕ ಆರೋಗ್ಯ: ದೇಹದ ಸದೃಢತೆ, ಚುರುಕುತನ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಕ್ರೀಡೆಗಳು ಸಹಕಾರಿಯಾಗಿರುವಂತೆಯೇ ಮಾನಸಿಕ ಆರೋಗ್ಯ: ಒತ್ತಡ, ಆತಂಕ ಮತ್ತು ಏಕತಾನತೆ ಕಡಿಮೆಯಾಗಿ ಉತ್ಸಾಹ ಹೆಚ್ಚುತ್ತದೆ ಮಾತ್ರವಲ್ಲ ಶಿಸ್ತು ಮತ್ತು ಸಮಯಪಾಲನೆ, ನಿಯಮಗಳನ್ನು ಪಾಲಿಸುವ ಮತ್ತು ಗುರಿ ಸಾಧಿಸುವ ಮನೋಭಾವ ಮೂಡುತ್ತದೆ ಎಂದವರು ನುಡಿದರು.


ದಸರಾ ಕ್ರೀಡಾಕೂಟದಂತಹ ಕ್ರೀಡಾಕೂಟಗಳು ಯುವಕರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಮಹತ್ವದ ವೇದಿಕೆಯಾಗಿವೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಯುವಕರಲ್ಲಿ ಆರೋಗ್ಯ, ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಮತ್ತು ತಂಡದ ಮನೋಭಾವ ಬೆಳೆಯಲಿದೆ. ಪರಸ್ಪರ ಸಹಕಾರ, ಸ್ನೇಹ ಮತ್ತು ಸಾಮಾಜಿಕ ಬಾಂಧವ್ಯ ಗಟ್ಟಿಗೊಳ್ಳುವಲ್ಲಿಯೂ ಕ್ರೀಡೆಗಳು ಸಹಕಾರಿಯಾಗಿವೆ ಎಂದವರು ನುಡಿದರು.
ನಾಡಹಬ್ಬ ದಸರಾ ನಾಡಿನ ಸಂಸ್ಕೃತಿ ಮತ್ತು ಭವ್ಯ ಪರಂಪರೆಯ ಪ್ರತೀಕವಾಗಿದೆ ಎಂದ ಅವರು ಕ್ರೀಡೆಗಳೂ ಸಹ ಆ ಸಂಭ್ರಮದ ಭಾಗವಾಗಿವೆ. ಎಲ್ಲಾ ಯುವಕರು ವ್ಯಕ್ತಿಯನ್ನು ಸದಾ ಕ್ರಿಯಾಶೀಲವಾಗಿರುವ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಅವರು ಸೂಚಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಗ್ರಾಮೀಣ ಹಾಗೂ ಪ್ರತಿಭಾವಂತ ಯುವಕರಿಗೆ ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ಕ್ರೀಡಾಕೂಟದಲ್ಲಿ ಅವಕಾಶ ದೊರೆಯಲಿದೆ. ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳು ಹಾಗೂ ಕ್ರೀಡಾ ಕೋಟಾದ ಮೂಲಕ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ದೊರೆಯಲಿವೆ ಎಂದ ಅವರು, ಯುವಕರನ್ನು ಮಾದಕ ವ್ಯಸನ, ಅಕ್ರಮ ಚಟುವಟಿಕೆ ಮತ್ತು ಅಸಾಮಾಜಿಕ ಪ್ರವೃತ್ತಿಗಳಿಂದ ದೂರವಿರಿಸಲು ಕ್ರೀಡೆ ಸಹಕಾರಿಯಾಗಿವೆ. ಅಂತೆಯೇ ಗೆಲುವನ್ನು ವಿನಯದಿಂದ ಸ್ವೀಕರಿಸುವುದು ಮತ್ತು ಸೋಲಿನಿಂದ ಪಾಠ ಕಲಿಯುವ ಗುಣ ಬೆಳೆಸುವುದರ ಜೊತೆಗೆ ಸಮಗ್ರ ವ್ಯಕ್ತಿತ್ವ ವಿಕಸನಗೊಳ್ಳಲಿದೆ ಎಂದರು.


ಈಗಾಗಲೇ ತಾಲೂಕು ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ಆಯ್ಕೆಗೊಂಡ ಪ್ರತಿಭಾವಂತ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಕ್ರೀಡೆಯಲ್ಲಿ ವಿಜೇತರಾದ ಕ್ರೀಡಾಪಟುಗಳು ಶ್ರಮವಹಿಸಿ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ಪದಕ ಗಳಿಸಿ, ಜಿಲ್ಲೆಗೆ ಕೀರ್ತಿ ತರುವಂತೆ ಮನವಿ ಮಾಡಿದರು.
ಕ್ರೀಡೆಯಲ್ಲಿ ಅತಿ ಹೆಚ್ಚಿನ ಪ್ರತಿಭಾವಂತರು, ಸಾಧಕರು ಜಿಲ್ಲೆಯಲ್ಲಿದ್ದಾರೆ. ನಾವೆಲ್ಲರೂ ಗಮನಿಸಿದಂತೆ ಓಲಂಪಿಕ್ಸ್‌ನಂತಹ ಕ್ರೀಡೆಗಳಲ್ಲಿ ದೇಶದ ಪ್ರತಿಭೆಗಳು ನಿರೀಕ್ಷೆ ಪ್ರಮಾಣದಲ್ಲಿ ಕಾಣದಿರುವುದು ಬೇಸರದ ಸಂಗತಿ ಎಂದ ಅವರು, ಮಲೆನಾಡ ಯುವ ಕ್ರೀಡಾಪಟುಗಳು ಇಂತಹ ಮಹತ್ವದ ಕ್ರೀಡೆಗಳಲ್ಲಿ ಭಾಗವಹಿಸಿ, ಪದಕ ವಿಜೇತರಾಗಿ ದೇಶದ ಕೀರ್ತಿ ಹೆಚ್ಚಿಸುವಲ್ಲಿ ಯತ್ನಿಸಬೇಕೆಂದವರು ನುಡಿದರು.


ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್‌, ಮೇರಾ ಭಾರತ್ ‌ಸಂಸ್ಥೆಯ ಯುವಸಮನ್ವಯಾಧಿಕಾರಿ ಶ್ರೀಮತಿ ಐಶ್ವರ್ಯಾ ಶ್ರೀನಿವಾಸ್‌, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಮಾರುತಿ ಸೇರಿದಂತೆ ಗಣ್ಯರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *