ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಘಟನಾ ಮಹಾಮಂಡಲಿ ವತಿಯಿಂದ 82ನೇ ವರ್ಷದ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ಗಣೇಶೋತ್ಸವವನ್ನು ಸೆಪ್ಟೆಂಬರ್ 14ರಿಂದ 25ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಹಿಂದೂ ಸಂಘಟನಾ ಮಹಾಮಂಡಳಿ ತಿಳಿಸಿದೆ.
1945ರಿಂದ ಹಿಂದೂ ಸಂಘಟನಾ ಮಹಾಮಂಡಲಿ ವತಿಯಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, 2026ರ ಗಣೇಶೋತ್ಸವವು 82ನೇ ವರ್ಷದ ಆಚರಣೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಗಣೇಶೋತ್ಸವವನ್ನು ವಿಶೇಷವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಮಂಡಲಿ ನಿರ್ಧರಿಸಿದೆ.
ಸೆ.14ರಂದು ಗಣಪತಿ ಪ್ರತಿಷ್ಠಾಪನೆ…
ಭಾದ್ರಪದ ಶುದ್ಧ ಚತುರ್ಥಿಯಂದು ಸೆಪ್ಟೆಂಬರ್ 14ರ ಸೋಮವಾರ ಬೆಳಗ್ಗೆ 11.30ಕ್ಕೆ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಶ್ರೀ ವರಸಿದ್ಧಿವಿನಾಯಕ ಸ್ವಾಮಿಯ ಪ್ರತಿಷ್ಠಾಪನೆ ನೆರವೇರಲಿದೆ.
ಗಣೇಶೋತ್ಸವದ ಅಂಗವಾಗಿ ಸೆಪ್ಟೆಂಬರ್ 14ರಿಂದ ಪ್ರತಿದಿನ ಸಂಜೆ 7 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 14ರಂದು ಶ್ರೀ ಮಹಾಗಣಪತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಸೆಪ್ಟೆಂಬರ್ 15ರಂದು ಶಿವಮೊಗ್ಗದ ಸ್ನೇಹ ಸಮ್ಮಿಲನ ಕಲಾತಂಡ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರೂಪಾಕರಿಬಸಯ್ಯ ಹಾಗೂ ಶ್ಯಾಮಲಾ ಸತೀಶ್ ಅವರು ಆಯೋಜಕರಾಗಿದ್ದಾರೆ.
ಯಕ್ಷಗಾನ, ಸಂಗೀತ, ನೃತ್ಯಕ್ಕೆ ಆದ್ಯತೆ…
ಸೆಪ್ಟೆಂಬರ್ 16ರಂದು ಶ್ರೀ ಮಹಾಗಣಪತಿ ಯಕ್ಷಗಾನ ಬಳಗ (ರಿ.), ಶಿವಮೊಗ್ಗ ವತಿಯಿಂದ ಪೌರಾಣಿಕ ಪ್ರಸಂಗದ ಯಕ್ಷಗಾನ ನಡೆಯಲಿದೆ.
ಸೆಪ್ಟೆಂಬರ್ 17ರಂದು ರಾಜಶೇಖರ್ ಮತ್ತು ಸಂಗಡಿಗರು, ಶಿವಮೊಗ್ಗ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸೆ.25ರಂದು ರಾಜಬೀದಿ ಉತ್ಸವ…
ಸೆಪ್ಟೆಂಬರ್ 25ರ ಶುಕ್ರವಾರ ಬೆಳಗ್ಗೆ 9.30ಕ್ಕೆ ಶ್ರೀ ವರಸಿದ್ಧಿವಿನಾಯಕ ಸ್ವಾಮಿಯ ರಾಜಬೀದಿ ಉತ್ಸವ ಹಾಗೂ ವಿಸರ್ಜನೆ ನಡೆಯಲಿದೆ. ಇದರೊಂದಿಗೆ 11 ದಿನಗಳ ಗಣೇಶೋತ್ಸವಕ್ಕೆ ತೆರೆ ಬೀಳಲಿದೆ.
ಗಣೇಶೋತ್ಸವದ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಿಂದೂ ಧರ್ಮಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಹಿಂದೂ ಸಂಘಟನಾ ಮಹಾಮಂಡಲಿ ಮನವಿ ಮಾಡಿದೆ.
ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹಾಗೂ ಭಕ್ತರು ಶಾಂತಿಯುತವಾಗಿ ಭಾಗವಹಿಸಿ ಗಣೇಶೋತ್ಸವದ ಯಶಸ್ಸಿಗೆ ಸಹಕರಿಸುವಂತೆ ಸಂಘಟಕರು ಕೋರಿದ್ದಾರೆ.