ಮನುಷ್ಯರಾದ ನಾವು ಮಕ್ಕಳ ವಿಷಯದಲ್ಲಿ ನಡೆದುಕೊಳ್ಳುತ್ತಿರುವುದು ಹೇಗೆ.ನಡೆಯಲು ಕಲಿತಿರುವ ಮಕ್ಕಳನ್ನೂ ಕೈಹಿಡಿದುಕೊಂಡೆ ಸಾಗುತ್ತಿದ್ದೇವೆ. ಕುಂತಲ್ಲಿ ನಿಂತಲ್ಲಿ ಮಕ್ಕಳ ಬಗ್ಗೆಯೇ ಚಿಂತಿಸಿ ನಾವು ಮನೋರೋಗಿಗಳಾಗುವುದರ ಜೊತೆಗೆ ಅವರನ್ನೂ ಒತ್ತಡದ ಬೆಂಕಿಯಲ್ಲಿ ಬೇಯಿಸುತ್ತಿದ್ದೇವೆ. ನಾವು ದುಡಿಯುವ ಪ್ರತಿ ಕಾಸಿನ ಮೇಲೂ ಮಕ್ಕಳ ಹೆಸರನ್ನೇ ಕೆತ್ತುತ್ತಿದ್ದೇವೆ. ಅದ್ಯಾವ ಪರಿ ಎಂದರೆ ನಾವು ರುಚಿಸುವುದನ್ನು ತಿನ್ನದೆ, ಶೋಕಿ ಬಟ್ಟೆ ತೊಡದೆ, ಯಾವ ಸುಖವನ್ನು ಅನುಭವಿಸದೆ ಸರ್ವವನ್ನು ಮಕ್ಕಳಿಗೆಂದೇ ಮೀಸಲಿಡುತ್ತಿದ್ದೇವೆ. ಸಮಾಜದಲ್ಲಿ ಕೆಟ್ಟ ಹೆಸರು ಸಂಪಾದಿಸಿಯೋ ಅಥವಾ ಸ್ವಂತ ಪರಿಶ್ರಮದ ಮೂಲಕವೋ ದುಡಿದ ಹಣ, ಆಸ್ತಿ, ಅಂತಸ್ತುಗಳನ್ನು ಅವರಿಗೆಂದೇ ಕೂಡಿಡುತ್ತಿದ್ದೇವೆ. ಮಕ್ಕಳಿಗಾಗಿ ಅದೆಷ್ಟು ಸಂಬಂಧಗಳನ್ನು ಮುರಿದುಕೊಂಡಿದ್ದೇವೆಂದರೆ ಲೆಕ್ಕವಿಲ್ಲ. ಮಕ್ಕಳನ್ನು ಓದಿಸುವ ಕುಂಟುನೆಪ ಇಟ್ಟುಕೊಂಡು ಹಳ್ಳಿಯನ್ನು, ಹುಟ್ಟಿಬೆಳೆದ ಮನೆಯನ್ನು,ಸಂಬಂಧಿಕರನ್ನು, ನಮಗಾಗಿ ಜೀವ ತೆಯ್ದ ಹೆತ್ತವರನ್ನು ಬಿಟ್ಟು ಬಂದವರು ಮತ್ತೆ ಮಕ್ಕಳ ಮದುವೆಯಾದರೂ ಅತ್ತ ತಿರುಗಿ ನೋಡಿದ್ದಿಲ್ಲ. ನಮ್ಮ ಮಕ್ಕಳನ್ನು ಅದೆಷ್ಟು ಹಚ್ಚಿಕೊಂಡಿದ್ದೇವೆಂದರೆ ಅವರ ಚಿಕ್ಕಚಿಕ್ಕ ವಿಷಯಗಳಿಗಾಗಿ ಸ್ನೇಹಿತರು, ಒಡಹುಟ್ಟಿದವರು, ನೆರೆಹೊರೆಯವರ ಜೊತೆ ಜಗಳವಾಡಿದ್ದೇವೆ. ಮುನಿಸಿಕೊಂಡಿದ್ದೇವೆ. ಮತ್ತೆ ಸೇರಲಾರದಷ್ಟು ದೂರ ಹೋಗಿದ್ದೇವೆ. ಅದರ ಬದಲು *ಮಕ್ಕಳಿಗೆ ಬುದ್ಧಿ ಹೇಳಿ ತಿದ್ದಿ ನಡೆಸಿ ಎಲ್ಲರ ಜೊತೆ ವಿಶಾಲ ಮನೋಭಾವ ತೋರಿದ್ದರೆ ಸಂಬಂಧಗಳು ಇನ್ನೂ ಗಟ್ಟಿಯಾಗುತ್ತಿದ್ದವು. ಮಕ್ಕಳು ಸಾಗಬೇಕಾದ ದಾರಿತಪ್ಪಿದಾಗ ತಿದ್ದಬೇಕಾದ್ದು ನಮ್ಮ ಕೆಲಸ. ಆದರೆ ಅವರಿಗಾಗಿ ದಾರಿಯನ್ನೇ ನಿರ್ಮಿಸಲು ಹೊರಡುವುದು ಮೂರ್ಖತನ. ಅವರ ಭವಿಷ್ಯಕ್ಕಾಗಿ, ಸುಖಕ್ಕಾಗಿ ಒಂದಷ್ಟು ಗಳಿಸುವುದನ್ನು, ಉಳಿಸುವುದನ್ನು ಯಾರೂ ಬೇಡವೆನ್ನುವುದಿಲ್ಲ. ಆದರೆ ಇಡೀ ಬದುಕನ್ನೇ ಮಕ್ಕಳಿಗಾಗಿ ಮುಡಿಪಿಡುವಿದು ಆಕ್ಷೇಪಾರ್ಹ. ಹಾದಿಬೀದಿಯಲ್ಲಿ ನಾವು ಅವರಿಗಾಗಿ ಮಾಡಿದ ತ್ಯಾಗಬಲಿದಾನಗಳನ್ನು ಹೇಳಿಕೊಂಡು ಹುಚ್ಚರಂತೆ ಅಲೆಯಬೇಕಾದೀತು. ನಗೆಪಾಟಲಿಗೀಡಾಗಬೇಕಾದೀತು.ಆದ್ದರಿಂದ  *ಮಕ್ಕಳಿಗಾಗಿ ಆಸ್ತಿ ಮಾಡದಿದ್ದರೂ  ಸುಸಂಸ್ಕೃತರನ್ನಾಗಿಸೋಣ. ದುಡಿದು ತಿನ್ನುವ, ಸ್ವತಂತ್ರವಾಗಿ ಬದುಕುವ ಶಕ್ತಿಯನ್ನು ತುಂಬಿಸೋಣ. ಎಲ್ಲರೂಳಗೊಂದಾಗು ಮಂಕುತಿಮ್ಮ* ಎಂಬ ತತ್ವವನ್ನು ಕಲಿಸೋಣ. ನಾವೂ ಸಾಧ್ಯವಾದಷ್ಟು ನಮ್ಮ ದುಡಿಮೆಗನುಸಾರ ಸುಖವನ್ನೇ ಪಡೋಣ. ಮಕ್ಕಳಿಗಾಗಿ ಮಾಡಿ ಸತ್ತರೆ ಅವರ ಸುಖ ನೋಡಲು ನಾವಿರುವುದಿಲ್ಲ ಅಲ್ಲವೇ ಮಕ್ಕಳಿಗಾಗಿ  ಹೆತ್ತವರನ್ನೇ ದೂರ ಮಾಡಿರುವ, ಅವರನ್ನು ನೋಯಿಸಿರುವ ಎಷ್ಟೋ ಜನ ಕಣ್ಮುಂದಿದ್ದಾರೆ. ಹಾಗಾದರೆ ನಾವೇನು ಉದ್ಭವ ಮೂರ್ತಿಗಳೇ.ಆಧುನಿಕ ಪ್ರಪಂಚದಲ್ಲಿ ಎಲ್ಲವೂ ಸುಲಭವಾಗಿದೆ. ಇನ್ನು ನಮಗೂ ಮಕ್ಕಳಿಗೂ ಇರುವ ಸಂಬಂಧವೂ ಅಷ್ಟೇ. ಎಲ್ಲರನ್ನೂ ನೋಯಿಸಿ, ನಾವೂ ನೊಂದು ಸಾಕಿದ ಮಕ್ಕಳಿಂದ ಸಕರಾತ್ಮಕ ಫಲಿತಾಂಶವೇ ಸಿಗುತ್ತದೆ ಎನ್ನುವುದು ಸುಳ್ಳು. *ನಾವು ಹೆತ್ತವರನ್ನು ಬಿಟ್ಟು ಮಕ್ಕಳಿಗಾಗಿ ಬದುಕಿದಂತೆ ಅವರೂ ಮುಂದೊಂದು ದಿನ ಪುನರಾವರ್ತಿಸುತ್ತಾರೆ. ಆಗ ಹಿಂದಿನ ತಪ್ಪುಗಳಿಗೆ ಪರಿತಪಿಸಿ ಪ್ರಯೋಜನವಿಲ್ಲ.

ಸುಗಂಧಿ ಪ್ರಜಾಶ್ರೀ ಸಂಪಾದಕರು
ಹೈಕೋರ್ಟ್ ವಕೀಲರು ಬೆಂಗಳೂರು

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153