ಶಿವಮೊಗ್ಗ ನ್ಯೂಸ್…

ಕೊರೋನಾ ಲಸಿಕೆ 100 ಕೋಟಿ ದಾಟಿಸಿ ಇಡೀ ವಿಶ್ವದಲ್ಲೇ ಪ್ರಶಂಸೆಗೆ ಪಾತ್ರರಾದ ಪ್ರಧಾನಿ ಮೋದಿ ಅವರನ್ನು ಈ ಅಭಿಯಾನಕ್ಕೆ ಸಹಕರಿಸಿದ ಎಲ್ಲಾ ಕೊರೋನಾ ವಾರಿಯರ್ಸ್ ಗಳನ್ನು ಅಭಿನಂದಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಅವರು ಇಂದು ನಗರದ ಕುವೆಂಪು ರಸ್ತೆಯಲ್ಲಿರುವ ಆರೋಗ್ಯ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಬಿಜೆಪಿಯ ಕೊರೋನಾ ಲಸಿಕೆ ಅಭಿಯಾನ ಶಿವಮೊಗ್ಗದ ವತಿಯಿಂದ ಹಮ್ಮಿಕೊಂಡಿದ್ದ ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಲಸಿಕೆ ಉತ್ಪಾದನೆ ಪ್ರಾರಂಭದಲ್ಲಿ ವಿರೋಧ ಪಕ್ಷಗಳು ಇದು ಬಿಜೆಪಿ ಲಸಿಕೆ, ಮೋದಿ ಲಸಿಕೆ ಇದನ್ನು ಪಡೆದರೆ ಮಕ್ಕಳಾಗುವುದಿಲ್ಲ ಎಂದೆಲ್ಲಾ ಅಪಪ್ರಚಾರ ಮಾಡಿ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಲಾಯಿತು. ಎಲ್ಲಾ ಅಪಪ್ರಚಾರದ ನಡುವೆಯೂ ಸಾರ್ವಜನಿಕರ ಮನಗೆದ್ದು ಅವರ ಮನವೊಲಿಸಿ ಯಶಸ್ವಿಯಾಗಿ 100 ಕೋಟಿ ಲಸಿಕೆಯನ್ನು ಹಾಕುವುದರ ಮೂಲಕ ವಿಶ್ವದಲ್ಲೇ ಯಾವ ದೇಶವೂ ಮಾಡದ ಸಾಧನೆ ಮಾಡಿ ದೇಶದಿಂದ ಕೊರೋನಾ ಓಡಿಸುವಲ್ಲಿ ಮೋದಿ ಅವರು ಯಶಸ್ವಿಯಾಗಿದ್ದಾರೆ.

ಆದರೂ ಕೂಡ ಪ್ರಧಾನಿಯವರು ಇದು ನನ್ನ ಸಾಧನೆಯಲ್ಲ. ಇದು ದೇಶದ ವಿಜ್ಞಾನಿಗಳ, ವೈದ್ಯರ, ಶುಶ್ರೂಷಕಿಯರ, ಆರೋಗ್ಯ ಇಲಾಖೆಯ ಎಲ್ಲಾ ನೌಕರರ ಸಾಧನೆ ಎಂದು ಹೇಳುವುದರ ಮೂಲಕ ತಮ್ಮ ಸ್ಥಾನದ ಘನತೆಯನ್ನು ಹೆಚ್ಚಿಸಿದ್ದಾರೆ. 100 ಕೋಟಿ ಡೋಸ್ ಲಸಿಕೆ ಹಾಕಿದ ಉದಾಹರಣೆ ವಿಶ್ವದಲ್ಲಿ ಎಲ್ಲಿಯೂ ಇಲ್ಲ ಎಂದರು.ತಮ್ಮ ಜೀವದ ಹಂಗು ತೊರೆದು ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಅಭಿನಂದನೆ ತಿಳಿಸಿದರು. ಸಚಿವರು ಪ್ರಮುಖವಾಗಿ ಲಸಿಕಾ ಅಭಿಯಾನದ ರೂವಾರಿಗಳಾದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಮತ್ತು ಡಾ. ನಾಗರಾಜ್ ನಾಯಕ್ ಹಾಗೂ ಶೂಶ್ರೂಷಕಿಯರು, ಡಿ ದರ್ಜೆ ನೌಕರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು., ಪ್ರಾಸ್ತಾವಿಕವಾಗಿ ಮಾತನಾಡಿದ ಲಸಿಕಾ ಅಭಿಯಾನದ ಸಂಚಾಲಕ ಎಸ್. ದತ್ತಾತ್ರಿ, ದೇಶದಲ್ಲಿ ಹಿಂದೆ ಅನೇಕ ಮಾರಣಾಂತಿಕ ರೋಗಗಳು ಬಂದಾಗ ಲಸಿಕೆ ಕಂಡು ಹಿಡಿದು ಅದನ್ನು ಪೂರೈಸಲು ಹತ್ತಾರು ವರ್ಷಗಳನ್ನು ತೆಗೆದುಕೊಂಡಿದ್ದಾರೆ.

ಆದರೆ, ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕೊರೋನಾ ವೈರಸ್ ಹರಡಿದಾಗ 139 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ರೋಗವನ್ನು ಹತೋಟಿಗೆ ತರಲು ಕೇವಲ 9 ತಿಂಗಳಲ್ಲಿ ಲಸಿಕೆ ಕಂಡು ಹಿಡಿದು 100 ಕೋಟಿ ಲಸಿಕೆ ನೀಡಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಹಾಗೂ ಜಿಲ್ಲೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಲಸಿಕೆ ನೀಡಿ ದಾಖಲೆ ಪ್ರಮಾಣದಲ್ಲಿ ಸಾಧನೆ ಮಾಡಿದ ಜಿಲ್ಲಾ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಅವರು ಕೃತಜ್ಞತೆ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯೆ ಭಾರತಿಶೆಟ್ಟಿ, ಮೇಯರ್ ಸುನಿತಾ ಅಣ್ಣಪ್ಪ, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಮೆಗ್ಗಾನ್ ಅಧೀಕ್ಷಕ ಡಾ. ಶ್ರೀಧರ್, ಡಾ. ಕಿರಣ್, ಡಾ. ಸಿದ್ಧನಗೌಡ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…