ಶಿವಮೊಗ್ಗ ನ್ಯೂಸ್…

ಗೋ ರಕ್ಷಣೆ ನಮ್ಮೆಲ್ಲರ ಹೊಣೆ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯ ಸ್ಥಾನವಿದ್ದು, ದೇಹದ ಅನೇಕ ರೋಗಗಳಿಗೆ ಗೋವಿನ ಉತ್ಪನ್ನಗಳು ಔಷಧಿಯ ಪರಿಣಾಮ ಬೀರುವುದು ಪ್ರಾಚೀನ ಕಾಲದಿಂದಲೂ ಸಾಬೀತಾಗಿದ್ದು, ಗೋವು ನಮ್ಮ ರಾಷ್ಟ್ರೀಯ ಸಂಪತ್ತು ಎಂದು ಖ್ಯಾತ ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ ಹೇಳಿದ್ದಾರೆ.

ಅವರು ನಗರದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಗೋ ಪೂಜೆಯ ನಿಮಿತ್ತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಹಮ್ಮಿಕೊಂಡಿದ್ದ ಗೋಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ದೇಶದಲ್ಲಿ 30 ಕೋಟಿ ಗೂ ಹೆಚ್ಚು ಗೋವುಗಳಿವೆ. ಗೋವನ್ನು ಪುಣ್ಯಕೋಟಿ ಎಂದು ಕರೆಯುತ್ತಾರೆ. ಗೋವಿನ ಹಾಲು, ಸಗಣಿ, ಮೂತ್ರದಿಂದ ಕೂಡ ಅನೇಕ ಔಷಧಿಗಳು ತಯಾರಾಗುತ್ತಿದ್ದು, ಆಯುರ್ವೇದದಲ್ಲಿ ಗೋವಿನ ಉತ್ಪನ್ನಗಳು ಪ್ರಮುಖ ಪಾತ್ರ ವಹಿಸಿವೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಚರ್ಮರೋಗ, ಕ್ಯಾನ್ಸರ್, ಹೃದಯ ರೋಗಗಳ ನಿಯಂತ್ರಣದಲ್ಲಿ ಗೋಮೂತ್ರ ಪ್ರಮುಖ ಪಾತ್ರ ವಹಿಸುತ್ತದೆ. ಗೋವಿನ ಗೊಬ್ಬರದಿಂದಲೂ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ. ಸಗಣಿ ಕೂಡ ಕ್ರಿಮಿನಾಶಕವಾಗಿ ಪರಿಣಾಮ ಬೀರುತ್ತದೆ ಎಂದರು.ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿನಿತ್ಯ ಕನಿಷ್ಠ 400 ಮಿ.ಲೀ. ಹಾಲು ಬೇಕೇ ಬೇಕು.

ನಮ್ಮ ದೇಶದಲ್ಲಿ ಗೋವಿನ ಸಂತತಿ ಜಾಸ್ತಿ ಇರುವುದರಿಂದ ನಮಗೆ ಹಾಲು ಉತ್ಪನ್ನಗಳ ಆಮದು ಅವಶ್ಯಕತೆ ಇಲ್ಲ. ವಿಶ್ವದಲ್ಲೇ ಗೋ ಉತ್ಪನ್ನಗಳ ಮಾರಾಟದಲ್ಲಿ 5 ನೇ ಸ್ಥಾನ ಪಡೆದಿದ್ದೇವೆ. ಆದರೆ, ನಮ್ಮ ದೇಶದಲ್ಲಿ ಪೂಜಿಸಲ್ಪಡುವ ಗೋವನ್ನು ಮಾಂಸಕ್ಕಾಗಿ ಹತ್ಯೆ ಮಾಡುತ್ತಿರುವುದು ವಿಷಾದದ ಸಂಗತಿಯಾಗಿದೆ. 360 ಮಿಲಿಯನ್ ಮೆಟ್ರಿಕ್ ಟನ್ ಗೋ ಮಾಂಸವನ್ನು ನಾವು ರಫ್ತು ಮಾಡುತ್ತಿದ್ದೇವೆ. ಗೋ ಹತ್ಯೆಯನ್ನು ತಡೆಯುವ ಅವಶ್ಯಕತೆ ಇದ್ದು, ಇದರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಗೋವುಗಳು ನಮ್ಮ ದೇಶದ ಸಂಪತ್ತು. ನಮ್ಮ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ಗೋವಿಗೆ ದೇವರ ಸ್ಥಾನ ನೀಡಿ ಪೂಜಿಸುತ್ತಾ ಬಂದಿದ್ದು, ಮುಂದಿನ ಪೀಳಿಗೆ ಗೋವಿನ ಸಂತತಿ ರಕ್ಷಿಸಲು ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ಗೋವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಮಿತಾ ಸರ್ಜಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಾಸುದೇವ್, ಕಾರ್ಯದರ್ಶಿ ನಾರಾಯಣ ವರ್ಣೇಕರ್, ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ಕೋಶಾಧ್ಯಕ್ಷ ಕುಮಾರಸ್ವಾಮಿ, ನಗರ ಕಾರ್ಯದರ್ಶಿ ಸುಧಾಕರ್, ಅರವಿಂದ್, ಕಿರಣ್, ಗಣೇಶ್, ವಿಷ್ಣುಮೂರ್ತಿ, ರಾಜು, ಪಾಲಿಕೆ ಸದಸ್ಯ ಚನ್ನಬಸಪ್ಪ, ನಟರಾಜ್, ರಾಮಪ್ರಸಾದ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…