ಶಿವಮೊಗ್ ನ್ಯೂಸ್…

ನಟನೆಯಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ನಟ ಪುನೀತ್ ರಾಜ್‌ಕುಮಾರ್’, ಸಮಾಜ ಸೇವೆಯ ಅರಸು ಎಂದು ಗೋಣಿಬೀಡಿನ ಸಿದ್ದಲಿಂಗೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಸದ್ಭಾವನಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಪ್ಪು ನುಡಿನಮನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ನಟನೆ, ಸಿನಿಮಾ ನಿರ್ಮಾಣದ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಆದರೆ, ಈ ಕುರಿತು ಅವರು ಹೇಳಿ ಕೊಳ್ಳುತ್ತಿರಲಿಲ್ಲ. ಪ್ರಚಾರ ಬಯಸುತ್ತಿರಲಿಲ್ಲ. ಪುನೀತ್ ಅವರ ಬದುಕು 46ನೇ ವಯಸ್ಸಿಗೆ ಅಂತ್ಯಗೊಂಡಿದ್ದು ಬೇಸರದ ಸಂಗತಿ. ಯಾವ ಸಂತನೂ ಮಾಡದ ಕೆಲಸವನ್ನು ಅವರು ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.

ಬದುಕು ಅನಿಶ್ಚಿತ. ಒಂದು ಕಾಲದಲ್ಲಿ ಸಾವಿಗೆ ಕಾರಣವಿತ್ತು. ಆದರೆ, ಇಂದು ಸಾವಿಗೆ ಕಾರಣ ಸಿಗುತ್ತಿಲ್ಲ. ನಿಜ ಜೀವನದಲ್ಲಿ ಪುನೀತ್ ರಾಜ್‌ಕುಮಾರ್‌ ರಾಜಕುಮಾರನಾಗಿಯೇ ಮೆರೆದರು. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತಶಿಕ್ಷಣ, ವೃದ್ಧರ ಮತ್ತು ಅನಾಥರ ಪೋಷಣೆ ಜತೆಗೆ  ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆದಿದ್ದರು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಪತ್ರಕರ್ತ ದಿನೇಶ್ ನಾಗರಾಜ್ ಕೊಣನೂರು, ವಿಜಯಕುಮಾರ್, ಜನಾರ್ದನ ಪೈ ಭಾಗವಹಿಸಿದ್ದರು. ಸದ್ಭಾವನಾ ಟ್ರಸ್ಟ್ ಅಧ್ಯಕ್ಷ ಎಂ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು.
ಗಾಯಕ ರಾಜೇಶ್ ಕೃಷ್ಣನ್ ನೇತೃತ್ವದಲ್ಲಿ ಗಾಯಕರಾದ ಸುರೇಖಾ ಹೆಗಡೆ, ಋತ್ವಿಕ್ ಮುರಳೀಧರ್, ಚಾರ್ವಿ, ಎಸ್.ಪಿ. ವಿಶಾಖ್ ಅವರು ಪುನೀತ್ ಅವರ ಚಿತ್ರಗಳ ಹಾಡುಗಳನ್ನು ಹಾಡುವ ಮೂಲಕ ನುಡಿನಮನ ಸಲ್ಲಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…