ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಯಾವುದೇ ಎಡರು ತೊಡರು ಆಗದಂತೆ ಪ್ರಾರಂಭದ ಹಂತದಿಂದ ಕೊನೆಯಂಚಿನ ರೈತರಿಗೆ ಸಕಾಲದಲ್ಲಿ ನೀರು ತಲುಪಿಸಲು ಹಗಲು ರಾತ್ರಿ ಎನ್ನದೇ ಸೂಕ್ತ ಸಾಮಾಜಿಕ ಭದ್ರತೆಯ ಅನಾನುಕೂಲದ ನಡುವೆ ಕೆಲಸ ಮಾಡುವ ನೀರು ಗಂಟಿಗಳು ನಮ್ಮ ರೈತರಷ್ಟೇ ಸಮಾನರು ಎಂದು ಕಾಡಾ ಅಧ್ಯಕ್ಷ ಪವಿತ್ರ ರಾಮಯ್ಯ ಹೇಳಿದರು ಹೇಳಿದರು.

ದಾವಣಗೆರೆ ತಾಲ್ಲೂಕು ಬೇತೂರು – ಕಡಜ್ಜಿ ಗ್ರಾಮದ ನಡುವೆ ಬರುವ ಆರ್-4 ವಿತರಣಾ ನಾಲೆಯಲ್ಲಿ ರೈತರೊಂದಿಗೆ ಹಾಗೂ ನೀರು ಗಂಟಿಗಳೊಂದಿಗೆ ಸ್ನೇಹಮಯ ವಾತಾವರಣ ನಿರ್ಮಾಣ ಮಾಡಲು ಹಮ್ಮಿಕೊಂಡಿದ್ದ ಔತಣಕೂಟ ಕಾರ್ಯಕ್ರಮದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಮಾತನಾಡಿದರು.

ಈ ಸಮಯದಲ್ಲಿ ನೀರು ಗಂಟಿ ರವಿ ಮತ್ತು ಕುಬೇರ ಅವರು ಮಾತನಾಡಿ, ಕಳೆದ 25ವರ್ಷಗಳಿಂದ ನಿರಂತರವಾಗಿ ಈ ಭಾಗದಲ್ಲಿ ನೀರು ನಿರ್ವಹಣೆ ಹಾಗೂ ನೀರಾವರಿ ಇಲಾಖೆಯ ಅವಶ್ಯಕ ಸೇವೆಯನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದು, ದುರದೃಷ್ಟವಶಾತ್ ನಾವು ಜನ ಪ್ರತಿನಿಧಿಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಎಷ್ಟೇ ಪ್ರಯತ್ನ ಪಟ್ಟರು ಇಲ್ಲಿಯವರೆಗೂ ಸರ್ಕಾರದಿಂದ ನಮಗೆ ಕನಿಷ್ಠ ಮೂಲಭೂತ ಸೌಕರ್ಯ ದೊರಕದಿರುವುದು ನೋವುಂಟು ಮಾಡಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಪ್ರಮುಖವಾಗಿ ನಮ್ಮ ಬೇಡಿಕೆ ಏನೆಂದರೆ, ಖಾಸಗಿ ಕಂಪನಿಗೆ ಗುತ್ತಿಗೆ ನೀಡುವುದನ್ನು ರದ್ದು ಪಡಿಸಿ ನೇರವಾಗಿ ನೀರಾವರಿ ಇಲಾಖೆಯಿಂದ ವೇತನ ನೀಡುವಂತೆ ಅಥವಾ ಕನಿಷ್ಟ ವೇತನ ಜಾರಿ ಮಾಡುವಂತೆ ಅಥವಾ 20 ವರ್ಷಕ್ಕಿಂತ ಅಧಿಕ ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ನೇರ ನೇಮಕಾತಿ ಮೂಲಕ ಕೆಲಸಕ್ಕೆ ತಗೆದುಕೊಳ್ಳುವಂತೆ ಈ ಸಮಯದಲ್ಲಿ ಒಕ್ಕೊರಲಿನಿಂದ ಮನವಿ ಮಾಡಿದರು.

ನಿಮ್ಮ ನೋವು ಏನು ಎಂಬುದು ನನ್ನ ಅರಿವಿನಲಿದ್ದು, ಈ ಸಂಬಂಧ ಜಲ ಸಂಪನ್ಮೂಲ ಸಚಿವರೊಂದಿಗೆ ಈ ಕುರಿತು ಚರ್ಚಿಸಿ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಸರ್ವ ರೀತಿಯಲ್ಲೂ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಲಾಯಿತು.

ಸ್ಥಳೀಯ ರೈತ ಮುಖಂಡ ಬಸವರಾಜ್ ಮಾತನಾಡಿ, ಯಾವುದೇ ಒಳ್ಳೆಯ ಕೆಲಸ ಆಗಬೇಕು ಎಂದರೆ ಕಾಲ್ಗುಣ ಬಹಳ ಮುಖ್ಯ ಅದರಂತೆ ನೀವು ಕಾಡಾ ಅಧ್ಯಕ್ಷರಾದ ನಂತರ ಬಹಳ ವರ್ಷಗಳಿಂದ ರೈತರು ಅನುಭವಿಸುತ್ತಿದ್ದ ಕಷ್ಟಗಳು ದೂರವಾಗಿದ್ದು ನಿಮ್ಮ ಕಾಲ್ಗುಣದಿಂದ ಎಂದರೆ ತಪ್ಪಿಲ್ಲ ಎಂದು ಹೇಳಿದರು.

ಈ ಸಮಯದಲ್ಲಿ ದಾವಣಗೆರೆ ನಂ.01 ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಸವರಾಜ್, ಭದ್ರಾ ಕಾಡಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗೇಂದ್ರ, ಸಹಾಯಕ ಅಭಿಯಂತರರಾದ ಮಹಾಂತೇಶ್, ಶೀಲಾ, ಗೋವಿಂದ್ ರಾಜ್, ಹೆಮೋಜಿ ರಾವ್ ಹಾಗೂ ನೀರು ಬಳಕೆದಾರರ ಸಂಘದ ಶಿವಕುಮಾರ್ ಜೊತೆಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…