ಅನಂತಪುರ ನ್ಯೂಸ್…

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಸಿದ್ಧೇಶ್ವರ ಕಾಲೊನಿಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಮಮತಾ ಕಳೆದ ವರ್ಷ ಸರ್ಕಾರ ಇಲ್ಲಿನ ವಿದ್ಯಾರ್ಥಿಗಳಿಗೆ ನೀಡಲು ಬೆಡ್ ಶೀಟನ್ನು ನೀಡಿತ್ತು ಆದರೆ ಹಾಸ್ಟೆಲ್ ಮೇಲ್ವಿಚಾರಕಿ ದುರುದ್ದೇಶದಿಂದ ಮೂವತ್ತಕ್ಕೂ ಹೆಚ್ಚು ಬೆಡ್ ಶೀಟ್ ಗಳನ್ನು ಮುಚ್ಚಿಟ್ಟಿದ್ದು ಹಾಸ್ಟೆಲ್ ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿತ್ತು.

ಈ ಸಂಬಂಧ ಹಾಸ್ಟೆಲ್ ನ ವಿದ್ಯಾರ್ಥಿನಿಯರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಕುಮಾರಿ ಹಾಗೂ ಸಾಗರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಕ್ರೆಯವರ ಬಳಿ ದೂರವಾಣಿ ಮೂಲಕ ಮೊರೆ ಹೋಗಿದ್ದರು.

ಈ ವಿಚಾರವಾಗಿ ಇಂದು ಸಂಜೆ ಆನಂದಪುರದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿದ ಸಾಗರ ತಾಪಂ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಕ್ರೆ ಹಾಗೂ ಜಿಪಂ ಮಾಜಿ ಸದಸ್ಯೆ ಅನಿತಾ ಕುಮಾರಿ ವಿದ್ಯಾರ್ಥಿಗಳ ಕುಂದು ಕೊರತೆಯನ್ನು ಆಲಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಹಾಸ್ಟೆಲ್ ಮೇಲ್ವಿಚಾರಕಿ ಯ ಮೇಲೆ ಗುರುತರವಾದ ಆಪಾದನೆಗಳನ್ನು ಮಾಡಿದರು.ಚಳಿಗಾಲದಲ್ಲಿ ಬೆಡ್ ಶೀಟ್ ನೀಡುವಂತೆ ಬೇಡಿಕೊಂಡರು ಸಹ ನೀಡಲಿಲ್ಲ,
52 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರತಿ ದಿನ ಟೀ ಮಾಡಲು ಕೇವಲ 1ಲೀಟರ್ ಹಾಲನ್ನು ತರಿಸುತ್ತಿದ್ದು ಕುಡಿಯಲು ಸಾಧ್ಯವಾಗದಂತಹ ಟೀ ನೀಡುತ್ತಿದ್ದಾರೆ.52 ಜನ ವಿದ್ಯಾರ್ಥಿಗಳಿಗೆ ಕೇವಲ 1 ಕೆಜಿ ಚಿಕನ್ ತರಿಸಿ ಉಣಬಡಿಸುತ್ತಿದ್ದಾರೆ.ಸಸ್ಯಹಾರಿ ವಿದ್ಯಾರ್ಥಿಗಳಿಗೆ ಅದು ಕೂಡಾ ಇಲ್ಲ ಒಟ್ಟಾರೆ ನಮ್ಮ ಹಾಸ್ಟೆಲ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ.ವಿದ್ಯಾರ್ಥಿಗಳಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಒಕ್ಕೊರಲಿನಿಂದ ಈ ಜನಪ್ರತಿನಿಧಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹೆಣ್ಣುಮಕ್ಕಳಿಗೆ ವಿಶೇಷ ಸಂಧರ್ಭಗಳಲ್ಲಿ ಸಿಗಬೇಕಾದ ಸ್ಯಾನಿಟೈಜ಼ರ್ ಹಾಗೂ ಇನ್ನಿತರ ಸೌಲಭ್ಯಗಳು ಈ ಹಾಸ್ಟೆಲ್ ವಾರ್ಡನ್ ನಿಂದ ನಮಗೆ ಸಿಗುತ್ತಿಲ್ಲ ಎಂದು ದೂರಿದ್ದಾರೆ.

ಈ ಬಗ್ಗೆ ಹಾಸ್ಟೆಲ್ ಮೇಲ್ವಿಚಾರಕಿಯನ್ನು ವಿಚಾರಿಸಿದಾಗ ಕೇವಲ ಹಾರಿಕೆಯ ಉತ್ತರವನ್ನೇ ನೀಡಿದರು.ಈ ಸಂಧರ್ಭದಲ್ಲಿ ಬೆಡ್ ಶೀಟು ಮುಚ್ಚಿಟ್ಟಿರುವ ಬಗ್ಗೆ ವಿಚಾರಿಸಿದಾಗ ಕುಂಟು ನೆಪ ಹೇಳುತ್ತಿರುವಾಗ ಮಲ್ಲಿಕಾರ್ಜುನ್ ಹಕ್ರೆ ಖಾರವಾಗಿ ಮಾತನಾಡಿದಾಗ ನಂತರ ಇವರ ಸಮ್ಮುಖದಲ್ಲಿ ಮುಚ್ಚಿಟ್ಟಿದ್ದ ಬೆಡ್ ಶೀಟ್ ಗಳನ್ನು ವಿದ್ಯಾರ್ಥಿಗಳಿಗೆ ಹಂಚಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಹಕ್ರೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಹಿಂದೆ ಊಟದ ಚಾರ್ಟ್ ಮಾಡಿಸಿ ಎಲ್ಲಾ ಹಾಸ್ಟೆಲ್ ನಲ್ಲಿ ಹಾಕಲಾಗಿತ್ತು.ಹಾಗೂ ಪ್ರತಿಯೊಂದು ಹಾಸ್ಟೆಲ್ ನಲ್ಲಿ ದೂರು ಸಲ್ಲಿಸುವ ಬಾಕ್ಸ್ ಹಾಕಲಾಗಿತ್ತು.ಈಗ ಅದೆಲ್ಲಾ ನೇಪಥ್ಯಕ್ಕೆ ಸರಿದಿದೆ.ಶಾಲೆಯ ಮಕ್ಕಳಿಗೆ ಬಿಸಿಯೂಟವೇ ಅಷ್ಟು ರುಚಿಕರವಾಗಿ ನೀಡುವಾಗ ಹಾಸ್ಟೆಲ್ ನಲ್ಲಿ ಪ್ರತಿದಿನ 58 ರೂ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ನೀಡುವಾಗ ಉತ್ತಮ ಆಹಾರ ನೀಡಲು ಸಾಧ್ಯವಿಲ್ಲವೇ ?? ಎಂದು ಪ್ರಶ್ನಿಸಿದರು. ಇಷ್ಟೆಲ್ಲಾ ಆರೋಪಗಳಿರುವ ಹಾಸ್ಟೆಲ್ ವಾರ್ಡನ್ ಮೇಲೆ ಹೇಗೆ ಕ್ರಮ ಕೈಗೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ನಮಗೆ ಅಧಿಕಾರವಿಲ್ಲದಿದ್ದರೂ ಭ್ರಷ್ಟ ಅಧಿಕಾರಿಗಳ ವಿರುದ್ದ ಹೋರಾಡುವ ಶಕ್ತಿ ಇದೆ,ಮುಂದೇನಾಗುತ್ತೋ ಕಾದು ನೋಡಿ ಎಂದು ಮಾರ್ಮಿಕವಾಗಿ ಹೇಳಿದರು.

ನಂತರ ಮಾತನಾಡಿದ ಜಿಪಂ ಸದಸ್ಯೆ ಅನಿತಾಕುಮಾರಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣೆ ನಡೆಯದೇ ಅಧಿಕಾರ ವಿಕೇಂದ್ರೀಕರಣ ಆಗದೇ ಈ ತರಹದ ಸಮಸ್ಯೆಗಳು ಆಗುತ್ತಿವೆ.ಇಲ್ಲಿನ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗಲು ಉಸಿರಿರುವವರೆಗೂ ಬಿಡುವುದಿಲ್ಲ,ನಮ್ಮ ನಿಲುವು ಎಂದಿಗೂ ಬಡವರ,ದಮನಿತರ ಪರವಾಗಿರುತ್ತದೆ.ಈ ಹಾಸ್ಟೆಲ್ ನ ಅವ್ಯವಸ್ಥೆಯ ಬಗ್ಗೆ ಗಮನಕ್ಕೆ ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಸೂಕ್ತವಾದ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳು ಮಾತ್ರ ಒಕ್ಕೊರಲಿನಿಂದ ನಮ್ಮ ಹಾಸ್ಟೆಲ್ ವಾರ್ಡನ್ ನ್ನು ಬದಲಿಸಿ ಎಂದು ಮನವಿ ಮಾಡುತ್ತಿದ್ದದ್ದು ಆ ವಿದ್ಯಾರ್ಥಿಗಳಿಗೆ ಆಗಿರುವ ನೋವನ್ನು ಸೂಚಿಸುವಂತೆ ತೋರುತ್ತಿತ್ತು.

ಒಟ್ಟಾರೆ ದೇವರು ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎನ್ನುವಂತಹ ಗಂಭೀರ ಆರೋಪ ಇದೀಗ ಈ ಹಾಸ್ಟೆಲ್ ನ ಮೇಲ್ವಿಚಾರಕಿಯ ಮೇಲಿದೆ.

ಸಂಬಂಧಪಟ್ಟ ಅಧಿಕಾರಿಗಳು ಈ ಎಲ್ಲ ಅಂಶಗಳನ್ನು ಗಮನಿಸಿ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹ ಮಾಡುತ್ತಿದ್ದಾರೆ.

ವರದಿ : ರಫ಼ಿ ರಿಪ್ಪನ್ ಪೇಟೆ…