ಶಿವಮೊಗ್ಗ: ಹಿಂದೂ ಯುವಕ ಹರ್ಷನ ಕಗ್ಗೊಲೆಗೆ ಸಂಬಂಧಿಸಿದಂತೆ ಸರ್ಕಾರದ ವತಿಯಿಂದ 25 ಲಕ್ಷ ರೂ. ಪರಿಹಾರ ನೀಡಲಾಗುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಮಾ. 6 ರಂದು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ರಾಜ್ಯ ಸರ್ಕಾರದಿಂದ ನೀಡುತ್ತಿರುವ ಪರಿಹಾರದ ಚೆಕ್ ವಿತರಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಕೆಲವು ಮುಸಲ್ಮಾನ್ ಗೂಂಡಾಗಳು ಈ ಹತ್ಯೆ ಮಾಡಿದ್ದಾರೆ ಎಂದು ಪುನರುಚ್ಛರಿಸಿದ ಅವರು, ಎಲ್ಲಾ ಮುಸ್ಲಿಮರು ಕೆಟ್ಟವರಲ್ಲ, ಆದರೆ, ಹತ್ಯೆ ಮಾಡುವ ಗೂಂಡಾಗಳು ಮುಸ್ಲಿಮರಲ್ಲಿ ಇದ್ದಾರೆ. ಈ ಹತ್ಯೆಯನ್ನು ಪಕ್ಷಾತೀತವಾಗಿ ಖಂಡಿಸಬೇಕು. ಮುಸ್ಲಿಂ ಮುಖಂಡರು ಕೂಡ ಇಂತಹ ಘಟನೆಗಳಾದಾಗ ಎಚ್ಚರಿಕೆಯಿಂದಿರಬೇಕು ಎಂದರು.

ಕಾಂಗ್ರೆಸ್ ನಾಯಕರು ಮತ್ತು ಕೆಲವು ಮುಸ್ಲಿಂ ಮುಖಂಡರು ಕೆಲವು ವರ್ಷಗಳ ಹಿಂದೆ ಹತ್ಯೆಯಾದ ವಿಶ್ವನಾಥ್  ಶೆಟ್ಟಿ ಅವರ ಮನೆಗೆ ಹೋಗಿ ಸಾಂತ್ವನ ಹೇಳುತ್ತಿದ್ದಾರೆ. ನಮಗೂ ಕೂಡ ಅವರ ತಾಯಿ ಚಿಂದಿ ಆಯುತ್ತಿರುವ ವಿಷಯ ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಗೊತ್ತಾಗಿದೆ. ಆದರೆ, ಬಿಜೆಪಿ ವಿಶ್ವನಾಥ್ ಹತ್ಯೆಯಾದಾಗ ಸುಮಾರು 18 ಲಕ್ಷ ರೂ. ನೀಡಿತ್ತು ಎಂದ ಅವರು ಈಗ ಕೆಲವರು ಇದನ್ನು ರಾಜಕೀಯಗೊಳಿಸಲು ಸಾಂತ್ವನ ಹೇಳುವ ನೆಪ ಮಾಡುತ್ತಿದ್ದಾರೆ ಎಂದು ದೂರಿದರು.

ಬಿ.ಕೆ. ಹರಿಪ್ರಸಾದ್ ಅವರು ಶಿವಮೊಗ್ಗದಲ್ಲಿ ಈಶ್ವರಪ್ಪ ಕುಟುಂಬದವರು ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧಿಸದೇ ಹರ್ಷ ಕುಟುಂಬದವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಅಭ್ಯರ್ಥಿಯನ್ನೇ ಹಾಕುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಆಕ್ರೋಶಗೊಂಡ ಈಶ್ವರಪ್ಪ, ಬಿ.ಕೆ. ಹರಿಪ್ರಸಾದ್ ಯಾರು? ಆತ ಒಂದೇ ಒಂದು ಚುನಾವಣೆ ಎದುರಿಸಿ ಗೆದ್ದು ಬಂದಿಲ್ಲ. ಹಿಂಬಾಗಿಲ ಮೂಲಕ ರಾಜಕೀಯ ಪ್ರವೇಶ ಮಾಡಿದವರು. ಇಂದಿಗೂ ಒಂದು ತಾಪಂ ಕ್ಷೇತ್ರದಲ್ಲಿ ನಿಂತು ಗೆಲ್ಲುವ ತಾಕತ್ ಆತನಿಗಿಲ್ಲ. ಬಿಜೆಪಿ ನೀಡುವ ಟಿಕೆಟ್ ಬಗ್ಗೆ ಮಾತನಾಡಲು ಅವನ್ಯಾರು ಎಂದು ಏಕವಚನದಲ್ಲಯೇ ವಾಗ್ದಾಳಿ ನಡೆಸಿದರು.

ವರದಿ ಮಂಜುನಾಥ್ ಶೆಟ್ಟಿ…