ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ತಪ್ಪಿನಿಂದಾಗಿ ಬಗರ್ ಹುಕುಂ ಸಾಗುವಳಿದಾರರಿಗೆ ನ್ಯಾಯ ಒದಗಿಸಲು ಆಗುತ್ತಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಕಗ್ಗಂಟಾಗಿ ಉಳಿಯಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಯಾವುದೇ ರೀತಿಯ ಅನುಕೂಲ ಮಾಡಿಕೊಡಲಿಲ್ಲ. ಈಗ ಕಾಂಗ್ರೆಸ್ ಮುಖಂಡರು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಚರ್ಚೆ ಮಾಡುತ್ತಿದ್ದಾರೆ. ಸಂಸದರ ಮನೆಗೆ ಮುತ್ತಿಗೆ ಹಾಕುವ ಬಗ್ಗೆ ಮಾತಾಡುತ್ತಿದ್ದಾರೆ ಎಂದರು.ಕಾಂಗ್ರೆಸ್ ಮುಖಂಡ ತೀ.ನಾ. ಶ್ರೀನಿವಾಸ್ ಅವರು ಮಾ. 7 ರಂದು ಬಗರ್ ಹುಕುಂ ಹೋರಾಟ ಸಮಿತಿಯಿಂದ ಶಿಕಾರಿಪುರದಲ್ಲಿ ನಮ್ಮ ಮನೆಗೆ ಮುತ್ತಿಗೆ ಹಾಕುವ ಹೇಳಿಕೆ ನೀಡಿದ್ದಾರೆ. ಆದರೆ, ಅವರು ತಿಳಿದುಕೊಳ್ಳಬೇಕು. 2006 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅನುಸೂಚಿತ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು.

ಆ ಕಾಯ್ದೆ ಪ್ರಕಾರ, 2005 ರ ಹಿಂದೆ ಸಾಗುವಳಿ ಮಾಡಿರುವ ರೈತರು ಅದರಲ್ಲಿ ಎಸ್.ಸಿ., ಎಸ್.ಟಿ.ಯವರು 25 ವರ್ಷದ ದಾಖಲೆ ನೀಡಬೇಕು. ಇನ್ನುಳಿದವರು 75 ವರ್ಷದ ದಾಖಲೆ ನೀಡಬೇಕು ಎಂದು ಕಾಯ್ದೆ ತಂದರು ಎಂದು ಹೇಳಿದರು.2007 ರಲ್ಲಿ ಕೂಡ ಇದರಲ್ಲಿರುವ ನ್ಯೂನತೆಯನ್ನು ಸರಿಪಡಿಸಬಹುದಿತ್ತು. ತಿದ್ದುಪಡಿ ತರಬಹುದಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ಮಾಡಲಿಲ್ಲ. ಸುಮಾರು 1 ಲಕ್ಷ ರೈತರಿಗೆ ಈಗ ನ್ಯಾಯ ಒದಗಿಸಲು ಆಗುತ್ತಿಲ್ಲ. ಇದರ ಜೊತೆಗೆ ಪರಿಸರವಾದಿಗಳು ಕೂಡ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದಾರೆ. ಕೆಲವು ದಾಖಲಾತಿಗಳನ್ನು ಕೋರ್ಟ್ ಗೆ ನೀಡಿದ್ದಾರೆ. ಅದರಲ್ಲಿ ಒಂದೇ ಕುಟುಂಬಕ್ಕೆ ನಾಲ್ಕು ವ್ಯಕ್ತಿಗಳಿಗೆ 35 ಎಕರೆ ಭೂಮಿಯನ್ನು ನೀಡಿರುವ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬಗರ್ ಹುಕುಂ ಸಮಸ್ಯೆ ಇನ್ನೂ ಜೀವಂತವಾಗಿ ಉಳಿದಿದೆ.

ಆದರೂ ನಾವು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದನ್ನು ಮಾಡುವುದಿಲ್ಲ. ಈ ಬಗ್ಗೆ ಸಂಸತ್ ನಲ್ಲಿ ಚರ್ಚೆ ಮಾಡಿ ಕೇಂದ್ರಕ್ಕೂ ಮನವರಿಕೆ ಮಾಡಿದ್ದೇನೆ ಎಂದರು.ತೀ.ನಾ. ಶ್ರೀನಿವಾಸ್ ಅವರು ಕಾಂಗ್ರೆಸ್ ಮುಖಂಡರೇ ಬಗರ್ ಹುಕುಂ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. ಇದು ಸರಿಯಾದ ಮಾತು. ಅವರಿಗೆ ಪಶ್ಚಾತ್ತಾಪವಾದರೆ ನಮ್ಮ ಮನೆಯ ಮುಂದೆ ಪ್ರತಿಭಟನೆ ಮಾಡುವುದನ್ನು ಬಿಟ್ಟು ಕಾಂಗ್ರೆಸ್ ನಾಯಕರ ಮನೆ ಮುಂದೆ ಪ್ರತಿಭಟನೆ ಮಾಡಲಿ ಎಂದರು.ಶರಾವತಿ, ವರಾಹಿ ಮುಳುಗಡೆ ಪ್ರದೇಶದ ಸಮಸ್ಯೆಗಳು ಕೂಡ ಹಾಗೆ ಉಳಿದುಕೊಂಡಿವೆ. ಕಾಂಗ್ರೆಸ್ ದೀರ್ಘ ಕಾಲ ಆಡಳಿತ ನಡೆಸಿದರೂ ಕೂಡ ಮುಳುಗಡೆ ಪ್ರದೇಶದ ಜನರಿಗೆ ನ್ಯಾಯ ಒದಗಿಸಲಿಲ್ಲ. ಈಗ ನಮ್ಮ ಕಡೆ ಬೆಟ್ಟು ಮಾಡಿ ತೋರಿಸುತ್ತಾರೆ ಎಂದು ದೂರಿದ ಅವರು ಈ ಎಲ್ಲಾ ಸಮಸ್ಯೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೋರಾಟ ನಡೆಸಿದ್ದಾರೆ. ಪಾದಯಾತ್ರೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಕೂಡ ರೈತರ ಹಿತವನ್ನೆ ಕಾಪಾಡುತ್ತಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 2.1 ಲಕ್ಷ ಹೆಕ್ಟೇರ್ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಕೊಂಡಿದೆ. ಇದರಿಂದ ರೈತರಿಗೆ ಅರಣ್ಯ ವಾಸಿಗಳಿಗೆ ತೊಂದರೆಯಾಗುತ್ತದೆ. ಪರಿಸರ ಸೂಕ್ಷ್ಮ ಪ್ರದೇಶದಿಂದ ಸುಮಾರು ಕಿ.ಮೀ. ನಷ್ಟು ದೂರದಷ್ಟು ಇದರ ಕಾಯ್ದೆಗಳು ಅನ್ವಯವಾಗುತ್ತವೆ. ಹಾಗಾಗಿ ರಾಜ್ಯ ಸರ್ಕಾರ ಇದನ್ನು 0.1 ಕಿ.ಮೀ. ಗೆ ಇಳಿಸಲು ಪ್ರಯತ್ನಿಸುತ್ತಿದೆ. ಶೆಟ್ಟಿಹಳ್ಳಿ, ಶರಾವತಿ, ಡೀಮ್ಡ್ ಫಾರೆಸ್ಟ್ ಮುಂತಾದ ಕಡೆಗಳಲ್ಲಿ ಇರುವ ಹೆಚ್ಚು ಪ್ರಮಾಣದ ಕಾಡಿನ ಭಾಗವನ್ನು ಕಡಿಮೆ ಪ್ರಮಾಣಕ್ಕೆ ಇಳಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿಂದೆ ಕಂದಾಯ ಭೂಮಿಯಲ್ಲಿನ ಅರಣ್ಯದಲ್ಲಿ ಗಿಡ ಮರ ಬೆಳೆಸಲು ಅರಣ್ಯ ಇಲಾಖೆಗೆ ನೀಡಲಾಗಿತ್ತು. ಈಗ ಆ ಭೂಮಿಯನ್ನು ಅರಣ್ಯ ಇಲಾಖೆಯಿಂದ ಕಂದಾಯ ಭೂಮಿಗೆ ವರ್ಗಾಯಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಅನುಕೂಲವಾಗುತ್ತದೆ. ಒಟ್ಟಾರೆ ಬಿಜೆಪಿ ಸರ್ಕಾರ ಬಗರ್ ಹುಕುಂ ಸಾಗುವಳಿದಾರರನ್ನು ಯಾವ ಕಾರಣದಿಂದಲೂ ಒಕ್ಕೆಲೆಬ್ಬಿಸುವುದಿಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮೇಯರ್ ಸುನಿತಾ ಅಣ್ಣಪ್ಪ, ಪ್ರಮುಖರಾದ ಎಸ್. ದತ್ತಾತ್ರಿ, ಜ್ಞಾನೇಶ್ವರ್, ಕೆ.ಇ. ಕಾಂತೇಶ್, ಧರ್ಮ ಪ್ರಸಾದ್, ಎಸ್. ಕುಮಾರ್, ಎಸ್.ಎಸ್. ಜ್ಯೋತಿಪ್ರಕಾಶ್, ಮಾಲತೇಶ್, ಶಿವರಾಜ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…