ಶಿವಮೊಗ್ಗ: ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಸಿದ್ಧರಾಗೋಣ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಅವರು ಇಂದು ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ಇನ್ನು ಒಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಆ ಚುನಾವಣೆಗೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಕಾರ್ಯಕರ್ತರು ಸಂಘಟನೆಗೆ ಹೆಚ್ಚಿನ ಶ್ರಮ ಹಾಕಬೇಕು. ಮತ್ತೊಮ್ಮೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲು ಕಂಕಣಬದ್ಧರಾಗಬೇಕು ಎಂದು ಹೇಳಿದರು.ಬಿಜೆಪಿ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದಿದೆ. ಸುಮಾರು 20 ಕೋಟಿ ಬಿಜೆಪಿ ಸದಸ್ಯರಿದ್ದಾರೆ. ಸಮಘಟನೆಯ ಶಕ್ತಿ ವಿಸ್ತಾರವಾಗಿದೆ. ರಾಜ್ಯಸಭೆಯಲ್ಲಿ 100 ಕ್ಕೂ ಹೆಚ್ಚು ಬಿಜೆಪಿ ಸದಸ್ಯರಿದ್ದಾರೆ. 17 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಹಿಂದಿನ ಹೆಜ್ಜೆ ಗಮನದಲ್ಲಿಟ್ಟು ಮುಂದಿನ ಗುರಿಯನ್ನು ನಾವು ತಲುಪಬೇಕು. ಇದೇ ಬಿಜೆಪಿಯ ಮಂತ್ರ ಎಂದರು.ಬಿಜೆಪಿ ಈಗ ಯಾವುದೇ ಜಾತಿ, ಶ್ರೀಮಂತಿಕೆಗೆ ಸೀಮಿತವಾಗಿಲ್ಲ. ಬಿಜೆಪಿ ಎಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಇಡೀ ಜಗತ್ತಿನಲ್ಲಿಯೇ ಶಿಸ್ತು ಬದ್ಧ ಮತ್ತು ಅತ್ಯಂತ ದೊಡ್ಡ ಪಕ್ಷ ಬಿಜೆಪಿ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ ಎಂದರು.

ನಮ್ಮ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ  ಡಬಲ್ ಇಂಜಿನ್ ಸರ್ಕಾರದಿಂದ ಅನೇಕ ಜನಪರ ಯೋಜನೆಗಳು ಮನೆ ಮನೆ ತಲುಪುತ್ತಿದೆ. ಕೋವಿಡ್ ಸಮಯದಲ್ಲಿ ಹೆಚ್ಚು ಶ್ರಮವನ್ನು ಹಾಕಿ, ಜನತೆಯ ಆರೋಗ್ಯವನ್ನು ರಕ್ಷಿಸುವ ಕೆಲಸವನ್ನು ಮಾಡಿದ್ದೇವೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಟಿ. ಡಿ. ಮೇಘರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತು ಭಾರತದ ಕಡೆ ನೋಡುತ್ತಿದೆ. ಬಿಜೆಪಿ ಕೇವಲ ರಾಜಕೀಯ ಪಕ್ಷ ಮಾತ್ರವಲ್ಲ, ಅದೊಂದು ಸಂಘಟನೆಯಾಗಿದೆ. ಮುಂಬರುವ ಚುನಾವಣೆಯ ಹಿನ್ನಲೆಯಲ್ಲಿ ಕಾರ್ಯಕರ್ತರ ಕ್ರಿಯಾಶೀಲತೆ ಹೆಚ್ಚಿಸಲು ಆಗಾಗ ಬೂತ್ ಮಟ್ಟದಿಂದ ಹಿಡಿದು ಮಟ್ಟದಿಂದ ಸಂಘಟನೆ ಶಕ್ತಿಯನ್ನು ಬಲಗೊಳಿಸಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪಡೆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ಹಾಗೂ ತೀರ್ಥಹಳ್ಳಿಯ ಹೆಚ್.ಎಸ್. ಮಂಜಪ್ಪ ಅವರನ್ನು ಅಭಿನಂದಿಸಲಾಯಿತು.

ಶಾಸಕರಾದ ಕೆ.ಎಸ್. ಈಶ್ವರಪ್ಪ, ಕೆ.ಬಿ. ಅಶೋಕ್ ನಾಯ್ಕ್, ಕುಮಾರ್ ಬಂಗಾರಪ್ಪ, ಎಸ್. ರುದ್ರೇಗೌಡ, ಆಯನೂರು ಮಂಜುನಾಥ್, ಡಿ.ಎಸ್. ಅರುಣ್, ಪ್ರಮುಖರಾದ ಗಿರೀಶ್ ಪಟೇಲ್, ಮೋನಪ್ಪ ಬಂಡಾರಿ, ಎನ್. ಎಸ್. ಹೆಗಡೆ, ಆರ್.ಕೆ. ಸಿದ್ಧರಾಮಣ್ಣ, ನಟರಾಜ್, ಸುನಿತಾ ಅಣ್ಣಪ್ಪ ಮೊದಲಾದವರಿದ್ದರು. ಮಾಲತೇಶ್ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ…