
ಶಿವಮೊಗ್ಗ: ಸೈಕಲ್ ಬಳಕೆಯಿಂದ ದೇಹ, ಮನಸ್ಸು ಸದೃಢವಾಗುವುದರ ಜೊತೆಗೆ ಹಲವು ಕಾಯಿಲೆಗಳಿಂದ ದೂರ ಇರುತ್ತೇವೆ ಎಂದು ಮಹಾನಗರಪಾಲಿಕೆ ಮಹಾಪೌರರಾದ ಸುನಿತಾ ಅಣ್ಣಪ್ಪ ನುಡಿದರು.

ಅವರು ಇಂದು ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಆಯೋಜಿಸಿದ್ದ ವಿಶ್ವ ಬೈಸಿಕಲ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ಸೈಕಲ್ ಬಳಸುವುದರಿಂದ ಇಂಧನ ಉಳಿತಾಯ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಬಹುದು. ಸೈಕಲ್ ಬಳಕೆಯಿಂದ ನೂರಾರು ಉಪಯೋಗವಿದೆ. ಆದ್ದರಿಂದ ಪ್ರತಿಯೊಬ್ಬರು ಸಣ್ಣ ಕೆಲಸಗಳಿಗೆ ನಿತ್ಯ ಸೈಕಲ್ ಬಳಸಬೇಕು ಎಂದು ನುಡಿದರು.ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಬೈಸಿಕಲ್ ಬಳಕೆಯಿಂದಾಗುವ ಉಪಯೋಗಗಳು, ಪರಿಸರ ಮಾಲಿನ್ಯ ತಡೆ, ಇಂಧನ ಉಳಿತಾಯ ಇತ್ಯಾದಿ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸ್ಮಾರ್ಟ್ ಸಿಟಿ ವತಿಯಿಂದ ಇಂದು ಬೆಳಿಗ್ಗೆ 7 ಗಂಟೆಗೆ ನಗರದ ಗೋಪಾಳ ಪೊಲೀಸ್ ಚೌಕಿಯಿಂದ ಪ್ರಾರಂಭಿಸಿ ಡಿವಿಜಿ ಸರ್ಕಲ್, ಪ್ರೊ.ಕೃಷ್ಣಪ್ಪ ಸರ್ಕಲ್, ಐಜಿ ಸರ್ಕಲ್, ವಿನೋಬನಗರ ಪೊಲೀಸ್ ಚೌಕಿ ಮಾರ್ಗವಾಗಿ ಫ್ರೀಡಂ ಪಾರ್ಕ್ ವರೆಗೆ ಸೈಕಲ್ ಜಾಥಾ ನಡೆಯಿತು.ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷರಾದ ಎಸ್. ದತ್ತಾತ್ರಿ, ಸೈಕಲ್ ಬಳಸುವುದರಿಂದ ನಮ್ಮ ದೇಹದಲ್ಲಿ ರಕ್ತಸಂಚಾರ ಸರಾಗವಾಗಿ ಹರಿಯುವುದರಿಂದ ನಮ್ಮ ಆಯಷ್ಯ ವೃದ್ಧಿಯಾಗುವುದರ ಜೊತೆಗೆ ಸದಾ ಲವಲವಿಕೆಯಿಂದ ಇರುತ್ತೇವೆ ಎಂದು ಹೇಳಿದರು.

ಪ್ರತಿ ವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನಾಚರಣೆಯನ್ನು ಪ್ರಪಂಚಾದ್ಯಂತ ಆಚರಿಸಲಾಗುತ್ತಿದೆ. ಅದರಂತೆ ಭಾರತ ಸರ್ಕಾರದ ವಸತಿ ಮತ್ತು ನಗರ ಯೋಜನೆಗಳ ಮಂತ್ರಾಲಯವು ಇದರಡಿ ಬರುವ ಸ್ಮಾರ್ಟ್ ಸಿಟಿ ಮಿಷನ್ ಮೂಲಕ ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಜೂನ್ 3 ರಂದು ಬೈಸಿಕಲ್ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಇಂದು ನಗರದಲ್ಲಿ ಸೈಕಲ್ ರ್ಯಾ ಲಿ ನಡೆಸಲಾಯಿತು.ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಟಿ.ವಿ. ಮಂಜುನಾಥ್, ಅನಿತಾ ರವಿಶಂಕರ್, ವಿಶ್ವಾಸ್, ಶಿವಮೊಗ್ಗ ಸೈಕಲ್ ಕ್ಲಬ್ನ ಅಧ್ಯಕ್ಷ ಶ್ರೀಕಾಂತ್, ವಿಜಯ್ ಕುಮಾರ್, ಸ್ಮಾರ್ಟ್ ಸಿಟಿ ಕಮಿಷನರ್ ಚಿದಾನಂದ್ ವಠಾರೆ, ಸೈಕಲೋತ್ಸವ ಶಾಪ್ನ ಮಾಲೀಕ ನರಸಿಂಹ ಮೂರ್ತಿ, ಡಾ. ಪರಿಸರ ನಾಗರಾಜ್, ಸೈಕಲ್ ಕ್ಲಬ್ ಕಾರ್ಯದರ್ಶಿ ಗಿರೀಶ್ ಕಾಮತ್, ಡಾ. ಶೇಖರ್ ಗೌಳೇರ್, ಯೂತ್ ಹಾಸ್ಟೆಲ್ ಕಾರ್ಯದರ್ಶೀ ಸುರೇಶ್ ಕುಮಾರ್, ಮೊದಲಾದವರಿದ್ದರು.