
ಶಿವಮೊಗ್ಗ: ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಭೂ ಮಾಫಿಯಾ ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ನಕಲಿ ಹಕ್ಕುಪತ್ರ ಸೃಷ್ಟಿ ಮಾಡಿ ಹಣ ಮಾಡುವ ದಂಧೆ ಹೆಗ್ಗಿಲ್ಲದೆ ಸಾಗಿದ್ದು, ಈ ಹಿಂದೆ ನಕಲಿ ಹಕ್ಕುಪತ್ರ ಪ್ರಕರಣ ಬಯಲಿಗೆ ಬಂದಾಗ ನಕಲಿ ಹಕ್ಕುಪತ್ರ ಸೃಷ್ಟಿಕರ್ತರಿಗೆ ಈ ದಂಧೆಯಲ್ಲಿ ತೊಡಗಿದವರಿಗೆ ಕೆಲ ರಾಜಕಾರಣಿಗಳ ಕೃಪೆಯಿಂದ ದೊಡ್ಡಮಟ್ಟದ ತನಿಖೆಯಾಗಲೀ, ಶಿಕ್ಷೆಯಾಗಲೀ ಆಗದೇ ಇರುವುದರಿಂದ ಈ ಬಡಾವಣೆಗಳಲ್ಲಿ ನಕಲಿ ಹಕ್ಕುಪತ್ರ ಸೃಷ್ಟಿಸುವ ಜಾಲ ಮತ್ತೆ ತನ್ನ ಕಾರ್ಯ ಪ್ರಾರಂಭ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಹಿಂದೆ ರೆವಿನ್ಯೂ ನಿವೇಶನಗಳ ತುಂಡು ಭೂಮಿ ನೊಂದಣಿಗೆ ಅವಕಾಶವಿದ್ದ ಸಮಯದಲ್ಲಿ ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಸರ್ವೇ ನಂ:-103 ರಲ್ಲಿ ಸಹ ರೆವಿನ್ನೂ ನಿವೇಶನಗಳ ನೋಂದಣಿಯಾಗಿದ್ದು,

ಆ ಸಮಯದಲ್ಲಿ ಮನೆಕಟ್ಟಲು ಹಣವಿಲ್ಲದ ಕೆಲಬಡವರು ನಿವೇಶನ ಖರೀದಿ ಮಾಡಿ ಹಾಗೇಯೆ ಖಾಲಿ ಬಿಟ್ಟಿದ್ದು ಈ ವಿಚಾರವನ್ನು ಅರಿತಿರುವ ಭೂ ಮಾಫಿಯಾ ತಂಡದವರು ನಕಲಿ ಹಕ್ಕುಪತ್ರವನ್ನು ಸೃಷ್ಟಿ ಮಾಡಿ ರೆವಿನ್ನೂ ನಿವೇಶನದಾರರ ಸೈಟಿನಲ್ಲಿ ತಮಗೆ ಕೆಲ ಅಧಿಕಾರಿಗಳನ್ನು ಬಳಸಿಕೊಂಡು ಬಡವರ ಮೇಲೆ ದಬ್ಬಾಳಿಕೆ ನಡೆಸಿ, ಕಟ್ಟಡ ಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.ಆದ್ದರಿಂದ ತಾವುಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಕೂಡಲೇ ಈ ರೀತಿ ನಕಲಿ ಹಕ್ಕುಪತ್ರ ಪಡೆದವರನ್ನ ಹಾಗೂ ಸೃಷ್ಟಿ ಮಾಡಿದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಹಕ್ಕುದಾರರನ್ನು ರಕ್ಷಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಪ್ರಮುಖರಾದ ನಿಂಗರಾಜು, ಸಂತೋಷ್, ನಯನ, ರಾಜಮ್ಮ, ಸುರೇಶ್, ಆಶ್ರಫ್, ರಾಜು, ನಟೇಶ್, ಗುಜ್ಜರ್, ಆಸೀಫ್, ಅತಾವುಲ್ಲ, ಮತ್ತಿತರರು ಭಾಗವಹಿಸಿದ್ದರು.