ಆಹಾರ ಭದ್ರತೆಯೊಂದಿಗೆ ಪೋಷಣೆಯ ಭದ್ರತೆಯನ್ನೂ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆದುಕೊಂಡಿದ್ದು ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಮಾಡಲು ಕ್ರಮ ಕೈಗೊಂಡಿದೆ ಎಂದು ಭಾರತ ಆಹಾರ ನಿಗಮದ ಶಿವಮೊಗ್ಗ ಡಿವಿಷನಲ್ ಮ್ಯಾನೇಜರ್ ಭಗವಾನ್ ಸಿಂಗ್ ತಿಳಿಸಿದರು.

ಗಾಡಿಕೊಪ್ಪದ ಭಾರತ ಆಹಾರ ನಿಗಮ(ಎಫ್‍ಸಿಐ)ದ ವಿಭಾಗೀಯ ಕಚೇರಿಯಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತಾಡಿದರು.
ಕೋವಿಡ್ ಸಮಯದಲ್ಲಿ ಯಾರೊಬ್ಬರೂ ಆಹಾರದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂಜಿಕೆವೈ ಯೋಜನೆ ಜಾರಿಗೊಳಿಸಿ ದುರ್ಬಲ ವರ್ಗದವರಿಗೆ ಉಚಿತ ಪಡಿತರ ವಿತರಿಸುತ್ತಿದೆ. ದೇಶದಲ್ಲಿ ಬಹುತೇಕರಲ್ಲಿ ಪೋಷಕಾಂಶದ ಕೊರತೆ ಇರುವುದನ್ನು ಸರ್ಕಾರ ಮನಗಂಡು ಸಾರವರ್ಧಿತ ಅಕ್ಕಿಯನ್ನು ಪಡಿತರ ವ್ಯವಸ್ಥೆ ಮತ್ತು ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಲು ಮುಂದಾಗಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ.

ಪ್ರಸ್ತುತ ಅತಿ ಹೆಚ್ಚು ಪೋಷಕಾಂಶ ಕೊರತೆ ಇರುವ ಅಧಿಸೂಚಿತ ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ಪೂರೈಕೆಯಾಗುತ್ತಿದ್ದು, 2024 ರ ಹೊತ್ತಿಗೆ ದೇಶಾದ್ಯಂತ ಪೂರೈಕೆಯಾಗಲಿದೆ ಎಂದರು.
ರಾಜ್ಯದಲ್ಲಿ ಮೊದಲನೇ ಹಂತದಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಪೈಲಟ್ ಕಾರ್ಯಕ್ರಮದಡಿ ಆಯ್ಕೆ ಮಾಡಿಕೊಂಡು ಮೇ ಮಾಹೆಯಿಂದ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.
ರೈತರಿಗೆ ಕನಿಷ್ಟ ಬೆಂಬಲ ಬೆಲೆ ಖಚಿತಪಡಿಸುವುದು, ಮುಕ್ತ ಮಾರುಕಟ್ಟೆಯಲ್ಲಿ ದರಗಳನ್ನು ಸ್ಥಿರಗೊಳಿಸುವುದು, ಸಮಾಜದ ದುರ್ಬಲ ವರ್ಗದವರಿಗೆ ಆಹಾರ ಧಾನ್ಯ ಒದಗಿಸುವುದು ಮತ್ತು ದೇಶದಲ್ಲಿ ಎಂತಹದೇ ತುರ್ತು ಪರಿಸ್ಥಿತಿ ಬಂದರೂ ಆಹಾರ ಭದ್ರತೆ ಸಾಧಿಸುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು ಕಳೆದ ಸಾಲಿನಲ್ಲೇ ಸರ್ಕಾರ ಆಹಾರ ಭದ್ರತೆಯೊಂದಿಗೆ ಪೊಷಣೆಯ ಭದ್ರತೆಯನ್ನೂ ನೀಡುವ ನಿರ್ಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಈಗ ಪೈಲಟ್ ಕಾರ್ಯಕ್ರಮದಡಿ ಸಾರವರ್ಧಿತ ಅಕ್ಕಿ ವಿತರಣೆ ಆಗುತ್ತಿದೆ ಎಂದು ತಿಳಿಸಿದರು.

ವಿಭಾಗೀಯ ಕಚೇರಿಯ ಗುಣಮಟ್ಟ ನಿಯಂತ್ರಣದ ಮ್ಯಾನೇಜರ್ ಶಿವಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ಶೇ.70 ರಷ್ಟು ಜನರು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇದನ್ನು ನೀಗಿಸಲು ಜನರು ತಮ್ಮ ಮುಖ್ಯ ಆಹಾರವಾಗಿ ಹೆಚ್ಚಾಗಿ ಬಳಸುವ ಅಕ್ಕಿಯನ್ನು ಸಾರವರ್ಧಿತಗೊಳಿಸಿ ನೀಡಲು ಸರ್ಕಾರ ನಿರ್ಧರಿಸಿ ಕ್ರಮ ಕೈಗೊಂಡಿದೆ. ಅವಶ್ಯಕ ವಿಟಮಿನ್, ಮಿನರಲ್ ಮತ್ತು ಇತರೆ ಪೋಷಕಾಂಶಗಳನ್ನು ಮಿಶ್ರಣ ಮಾಡಿ ಮಷೀನ್‍ನಲ್ಲಿ ಎಫ್‍ಆರ್‍ಕೆ(ಫಾರ್ಟಿಫೈಡ್ ರೈಸ್ ಕರ್ನಲ್ಸ್) ಅಕ್ಕಿ ತಯಾರಿಸಿ ಪಡಿತರದಲ್ಲಿ ನೀಡುವ ಅಕ್ಕಿಯೊಂದಿಗೆ ಮಿಶ್ರಣಮಾಡಿ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಈ ಅಕ್ಕಿಯನ್ನು ಸುಲಭವಾಗಿ ಗುರುತಿಸಲು ಅಕ್ಕಿಚೀಲದ ಮೇಲೆ +ಎಫ್ ಎಂಬ ನೀಲಿ ಬಣ್ಣದ ಚಿಹ್ನೆ ಇರುತ್ತದೆ. ಈ ಅಕ್ಕಿಯು ಎನ್‍ಎಬಿಎಲ್ ಮಾನ್ಯತೆ, ಎಫ್‍ಎಸ್‍ಎಸ್‍ಎಐ ಪರವಾನಿಗಿ ಸೇರಿದಂತೆ ಎಲ್ಲ ರೀತಿಯ ನಿಯಮಾವಳಿಗಳನ್ನು ಅನುಸರಿಸಿ ತಯಾರಿಸಲಾಗಿದ್ದು ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಅನೇಕರು ಇದು ಪ್ಲಾಸ್ಟಿಕ್ ಅಕ್ಕಿ ಎಂದು ಗೊಂದಲಕ್ಕೀಡಾಗಿದ್ದು ಇದೆ. ಆದರೆ ಇದು ಸಾರವರ್ಧಿತ ಅಕ್ಕಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಬೇಕೆಂದರು.
ಶಿವಮೊಗ್ಗ ವಿಭಾಗೀಯ ಕಚೇರಿಯು 8 ಕಂದಾಯ ಜಿಲ್ಲೆ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ್‍ನ ಆಹಾರಧಾನ್ಯದ ಅವಶ್ಯಕತೆಯನ್ನು ಪೂರೈಸುತ್ತಿದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಮಾಸಿಕ 45 ಸಾವಿರ ಮೆ.ಟನ್ ಆಹಾರ ಧಾನ್ಯವನ್ನು ಜಿಲ್ಲೆಯಿಂದ ನೀಡಲಾಗುತ್ತಿದೆ ಎಂದರು.

ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಡಿಪೋಗಳಲ್ಲಿನ ಎಲ್ಲ ಕಾರ್ಯಾಚರಣೆಗಳನ್ನು ಡಿಓಎಸ್ ಮೂಲಕ ನಡೆಸಲಾಗುತ್ತಿದ್ದು, ಹೆಚ್ಚುವರಿ ಆಹಾರಧಾನ್ಯ ಹೊಂದಿರವ ರಾಜ್ಯಗಳಿಂದ ಆಹಾರಧಾನ್ಯಗಳನ್ನು ರೇಕ್ ಮೂಲಕ ಸ್ವೀಕರಿಸಿ ಗೋಡಾನ್‍ನಲ್ಲಿ ಸಂಗ್ರಹಿಸಲಾಗುತ್ತಿದೆ. ಆಹಾರ ಧಾನ್ಯಗಳ ಸಂರಕ್ಷಣೆ ಸಮಯ ಮತ್ತು ವಿತರಣೆಗೂ ಮುನ್ನ ಅಗತ್ಯ ಗುಣಮಟ್ಟದ ತಪಾಸಣೆ ಮತ್ತು ಗುಣಮಟ್ಟ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಪಡಿತರ ಅಂಗಡಿಗಳಲ್ಲಿ ಮೇ ಮಾಹೆಯಿಂದ ಜುಲೈವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 18,316 ಮೆಟ್ರಿಕ್ ಟನ್, ದಾವಣಗೆರೆಯಲ್ಲಿ 5,500 ಮೆ.ಟನ್ ಮತ್ತು ಉತ್ತರ ಕನ್ನಡದಲ್ಲಿ 8,026 ಮೆ.ಟನ್ ಸಾರವರ್ಧಿತ ಅಕ್ಕಿಯನ್ನು ವಿತರಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಕಳೆದ ಆಗಸ್ಟ್‍ನಿಂದ ಶಿವಮೊಗ್ಗದಲ್ಲಿ 3,577 ಮೆ.ಟನ್, ದಾವಣಗೆರೆಯಲ್ಲಿ 3,532 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 1494 ಮೆ.ಟನ್ ಸಾರವರ್ಧಿತ ಅಕ್ಕಿ ನೀಡಲಾಗಿದೆ. ಶಿವಮೊಗ್ಗ ವ್ಯಾಪ್ತಿಗೊಳಪಡುವ 8 ಕಂದಾಯ ಜಿಲ್ಲೆಗಳಿಗೆ ಇದುವರೆಗೆ 23,183 ಮೆಟ್ರಿಕ್ ಟನ್ ಸಾರವರ್ಧಿತ ಅಕ್ಕಿ ವಿತರಿಸಲಾಗಿದೆ. -ಶಿವಕುಮಾರ್, ಮ್ಯಾನೇಜರ್, ಗುಣಮಟ್ಟ ನಿಯಂತ್ರಣ ಪತ್ರಿಕಾಗೋಷ್ಟಿಯಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್‍ಫಾರ್ಮೇಷನ್‍ನ ಫೀಲ್ಡ್ ಪಬ್ಲಿಸಿಟಿ ಆಫೀಸರ್ ಅಕ್ಷತಾ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…