ಶಿವಮೊಗ್ಗ: ಸಾಹಿತ್ಯ, ಸಂಸ್ಕೃತಿ ಹಾಗೂ ಸುಸಂಸ್ಕೃತರ ತವರೂರಾದ ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಅಶಾಂತಿಯ ವಾತಾವರಣ ಮೂಡಿದ್ದು, ಈ ಹಿನ್ನೆಲೆಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವ ಸಲುವಾಗಿ ಸೆಪ್ಟೆಂಬರ್ ೩ ರಂದು ಬೆಳಗ್ಗೆ ೧೦ ಗಂಟೆಗೆ ನಗರದಲ್ಲಿ “ನಮ್ಮ ನಡಿಗೆ ಶಾಂತಿಯ ಕಡೆಗೆ” ಘೋಷವಾಕ್ಯದಡಿ ಬೃಹತ್ ಶಾಂತಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದಲ್ಲಿ ಹಮ್ಮಿಕೊಂಡಿರುವ ಬೃಹತ್ ಶಾಂತಿ ನಡಿಗೆಯು ಯಾರ ವಿರುದ್ಧವೂ ಅಲ್ಲ, ಅಲ್ಲದೇ ಯಾವುದೇ ಒಂದು ಸಂಘಟನೆ / ಸಂಘಟನೆಗಳು ಆಯೋಜಿಸದೆ ಸಾರ್ವಜನಿಕರೇ ಮುಂದಾಳತ್ವ ವಹಿಸಿಕೊಂಡು ನಡೆಸುತ್ತಿರುವ ಅತ್ಯಂತ ದೊಡ್ಡ ರ‍್ಯಾಲಿಯಾಗಿದ್ದು, ಶಾಂತಿ ಬಯಸುವ ಎಲ್ಲ ಒಮ್ಮನಸುಗಳ ನಡಿಗೆಯಾಗಿದೆ. ಯಾವುದೇ ಜಾತಿ, ಮತ, ಪಂಥ, ಭೇದವಿಲ್ಲದೇ ಹಾಗೂ ರಾಜಕೀಯ ಪಕ್ಷಗಳಿಂದ ಹೊರತಾದ ಶಾಂತಿ ನಡಿಗೆ ಕರ‍್ಯಕ್ರಮವಿದು. ಶಾಂತಿ ನಡಿಗೆಗೆ ಜಿಲ್ಲಾಡಳಿತ, ಜಿಲ್ಲಾ ರಕ್ಷಣಾ ಇಲಾಖೆ ಕೂಡ ಕೈ ಜೋಡಿಸಿ ಬೆಂಬಲ ವ್ಯಕ್ತಪಡಿಸಿ, ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಕೂಡ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಶಾಂತಿ ನಡಿಗೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮ ಗುರುಗಳು, ೨೭ ಕ್ಕೂ ಹೆಚ್ಚು ಶಾಲೆಯ ೬ರಿಂದÀ ೭ ಸಾವಿರ ಮಕ್ಕಳು, ರೈತ ಹೋರಾಟಗಾರರು, ೨ ಸಾವಿರಕ್ಕೂ ಹೆಚ್ಚು ಮಹಿಳೆಯರು, ನಾಗರಿಕರು, ಸಮಾನ ಮನಸ್ಕರು, ಪ್ರಜ್ಞಾವಂತರು, ಪ್ರಗತಿಪರ ಚಿಂತಕರು, ವ್ಯಾಪಾರಸ್ಥರು, ಪ್ರಗತಿಪರ ಚಿಂತಕರು, ಸಂಘ, ಸಂಸ್ಥೆಗಳು, ಸಂಘಟನೆಗಳು, ಹಾಗೂ ನೂರಾರು ಸ್ವಯಂ ಸೇವಕರು, ವರ್ತಕರು, ಉದ್ಯಮಿಗಳು, ವ್ಯಾಪಾರಿಗಳು ಸೇರಿದಂತೆ ೫೦ ಕ್ಕೂ ಹೆಚ್ಚು ಸಂಘ, ಸಂಸ್ಥೆಗಳ ೧೦ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಶಾಂತಿ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಶಾಂತಿ ಸಂದೇಶ ಸಾರುವ ಪ್ಲೇಕಾರ್ಡ್ಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗುವರು. ಶಾಂತಿ ನಡಿಗೆ ಸಂದರ್ಭ ಶಾಲಾ ಮಕ್ಕಳಿಗೆ ಬಿಸ್ಕತ್ತು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವ ಶಾಲಾ ಮಕ್ಕಳನ್ನು ಆಯಾ ಶಾಲೆಗಳೇ ತಮ್ಮ ವಾಹನಗಳಲ್ಲಿ ಕರೆ ತಂದು ವಾಪಾಸು ಕರೆದುಕೊಂಡು ಹೋಗಲಿವೆ. ನಡಿಗೆಯುದ್ದಕ್ಕೂ ಖಾಲಿ ಬಾಟಲಿ ಸೇರಿದಂತೆ ಇತರೆ ತ್ಯಾಜ್ಯವನ್ನು ಸಂಗ್ರಹಿಸುವ ವಾಹನ ಸಾಗಿ ಬರಲಿದ್ದು, ಸ್ವಯಂ ಸೇವಕರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದ್ದಾರೆ. ಅಲ್ಲದೇ ಆಂಬ್ಯುಲೆನ್ಸ್ ಸೇವೆ ಕೂಡ ಲಭ್ಯ ಇರುತ್ತದೆ.

ಶಾಂತಿ ನಡಿಗೆ ಸಾಗುವ ಮಾರ್ಗ…

ಅಂದು ಶಾಂತಿ ನಡಿಗೆಯು ನಗರದ ಮೂರು ಪ್ರಮುಖ ಮಾರ್ಗಗಳಿಂದ ಶುರುವಾಗಲಿದೆ. ಡಿಎಆರ್ ಮೈದಾನದಿಂದ ನಗರದ ಮುಖ್ಯ ಬಸ್ ನಿಲ್ದಾಣ ಮಾರ್ಗವಾಗಿ ಎಎ ಸರ್ಕಲ್, ಅಂಬೇಡ್ಕರ್ ಭವನದ ಬಳಿಯಿಂದ ಗೋಪಿ ಸರ್ಕಲ್ ಮಾರ್ಗವಾಗಿ ಎಎ ಸರ್ಕಲ್ ಹಾಗೂ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಶಿವಪ್ಪನಾಯಕ ವೃತ್ತದ ಮೂಲಕ ಹಾದು ಬರುವ ಶಾಂತಿ ನಡಿಗೆಯು ಧರ್ಮ ಗುರುಗಳ ನೇತೃತ್ವದಲ್ಲಿ ಅಮೀರ್ ಅಹಮದ್ ವೃತ್ತ, ಶಿವಪ್ಪನಾಯಕ ವೃತ್ತದ ಮೂಲಕ ಬಿ.ಎಚ್.ರಸ್ತೆಯಯಲ್ಲಿ ಸಾಗಿ ಸೈನ್ಸ್ ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ.

ಈ ಸಂದರ್ಭ ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಜಡೆಮಠದ ಡಾ.ಶ್ರೀ ಮಹಾಂತ ಸ್ವಾಮೀಜಿ, ಕ್ರೈಸ್ತ ಧರ್ಮಗುರು ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ., ಸೇಕ್ರೆಡ್ ಹಾರ್ಟ್ ಚರ್ಚ್ನ ಫಾದರ್ ಸ್ಕ್ಯಾನಿ, ಎಸ್‌ಎಂಎಸ್‌ಎಸ್‌ಎಸ್ ನಿರ್ದೇಶಕರಾದ ಡಾ.ಕ್ಲಿಫರ್ಡ್ ರೋಷನ್ ಪಿಂಟೊ, ಮುಸ್ಲಿಂ ಮೌಲ್ವಿಗಳಾದ ಅವರುಗಳು ಶಾಂತಿ ಸಂದೇಶ ನೀಡುವರು. ಸೈನ್ಸ್ ಮೈದಾನದಲ್ಲಿ ಎಲ್‌ಇಡಿ ವಾಲ್‌ಗಳನ್ನು ಅಳವಡಿಸಲಾಗುತ್ತದೆ. ಅಲ್ಲದೇ ಫೇಸ್ ಬುಕ್ ನೇರ ಪ್ರಸಾರ ಮಾಡಲಾಗುವುದು.

ಪತ್ರಿಕಾಗೋಷ್ಟಿಯಲ್ಲಿ ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಕಿರಣ್‌ಕುಮಾರ್, ರಾಜ್ಯ ರೈತ ಸಂಘದ ಅಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ, ವಕೀಲರಾದ ಕೆ.ಪಿ.ಶ್ರೀಪಾಲ್, ರೈತ ಮುಖಂಡ ಕೆ.ಟಿ.ಗಂಗಾಧರ್, ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ, ಹಾಲೇಶಪ್ಪ, ಪರ್ವೇಜ್ ಅಹಮದ್, ಡಾ.ಕ್ಲಿಫರ್ಡ್ ರೋಷನ್ ಪಿಂಟೊ, ನಾಗರಿಕ ಹಿತ ರಕ್ಷಣಾ ವೇದಿಕೆಯ ಪ್ರಮುಖರಾದ ಕೆ.ವಿ.ವಸಂತ ಕುಮಾರ್, ನಿವೃತ್ತ ಪ್ರಾಂಶುಪಾಲರಾದ ಕೃಷ್ಣಮೂರ್ತಿ, ಜೆಸಿಐನ ಪುಷ್ಪಾ, ಡಾ.ಭರತ್ ಮತ್ತಿತರರು ಹಾಜರಿದ್ದರು.

ವರದಿ ಪ್ರಜಾಶಕ್ತಿ…