ಶಿವಮೊಗ್ಗ: ಮಹಿಳೆಯರು ಕೈಗಾರಿಕೆ ಮತ್ತು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಜತೆಯಲ್ಲಿ ಕುಟುಂಬದ ಆರ್ಥಿಕ ವ್ಯವಸ್ಥೆಯು ಸದೃಢವಾಗಿರುವಂತೆ ನೋಡಿಕೊಳ್ಳಬಹುದು ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ ಹಿರೇಮಠ ಹೇಳಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಶುಭಂ ಸಭಾಂಗಣದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿ ರೇಷ್ಮಾ ವಿಜಯ್‌ಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ವಿಜ್ಞಾನ, ಶಿಕ್ಷಣ, ಕೈಗಾರಿಕೆ, ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯು ಮಹಿಳೆಯರು ಯಶಸ್ಸು ಸಾಧಿಸುತ್ತಿದ್ದು, ಯುವ ಉದ್ಯಮಿಗಳ ಯಶಸ್ಸಿನ ಬಗ್ಗೆ ಅರಿತುಕೊಳ್ಳುವುದರಿಂದ ನಮ್ಮ ವೃತ್ತಿ ಜೀವನದಲ್ಲಿ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಗೆಲುವು ಸಾಧಿಸಬಹುದಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಉದ್ಯಮಿ ರೇಷ್ಮಾ ವಿಜಯ್‌ಕುಮಾರ್, ಮಹಿಳೆಯರು ಯಶಸ್ವಿಯಾಗಲು ಕುಟುಂಬದ ಸಹಕಾರ, ಸಲಹೆ ಹಾಗೂ ಸೂಕ್ತ ಮಾರ್ಗದರ್ಶನ ಅತ್ಯಂತ ಅವಶ್ಯಕ. ಧನಾತ್ಮಕ ಬೆಂಬಲ ನೀಡುವುದರಿಂದ ಕೌಶಲ್ಯಯುತ ಮಹಿಳೆಯರು ಯಶಸ್ವಿಯಾಗಿ ಮುನ್ನಡೆಯುತ್ತಾರೆ ಎಂದು ಹೇಳಿದರು.
ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕು. ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಇತರರಿಗೂ ಸ್ಫೂರ್ತಿ, ಪ್ರೇರಣೆ ಸಿಗುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತದೆ. ಎಲ್ಲರ ಸಹಕಾರ ಹಾಗೂ ಬೆಂಬಲ ಅಗತ್ಯ ಎಂದು ತಿಳಿಸಿದರು.

ಮಹಿಳಾ ಜೆಸಿ ಅಧ್ಯಕ್ಷೆ ಡಾ. ಅಕಿಲಾ ಮಾತನಾಡಿ, ಮಹಿಳೆಯರಿಗೆ ಸೂಕ್ತ ಸ್ಥಾನಮಾನಗಳ ಜತೆಯಲ್ಲಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು. ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಕಾರ್ಯದರ್ಶಿ ಡಾ. ಲಲಿತಾ ಭರತ್, ಸ್ವಪ್ನಾ, ಶ್ವೇತಾ, ಡಾ. ತೇಜಸ್ವಿನಿ, ಹರ್ಷ, ಶೇಷಗಿರಿ ಕೋಟ್ಯಾನ್, ಮಲ್ಲಿಕಾರ್ಜುನ್, ಜಿ.ವಿಜಯ್‌ಕುಮಾರ್, ಸಂತೋಷ್, ಸತೀಶ್‌ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…