ಶಿವಮೊಗ್ಗ: ಮನುಷ್ಯ ಹುಟ್ಟಿದ ಮೇಲೆ ಸಾವು ಸಾಮಾನ್ಯ. ಆದರೆ ಈ ಸಾವು ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮನುಷ್ಯ ತಾನು ಸತ್ತ ಮೇಲೂ ಬದುಕಲು ಹಲವು ಮಾರ್ಗಗಳಿವೆ. ಅದರಲ್ಲಿ ಈ ನೇತ್ರದಾನವೂ ಒಂದು. ಕಣ್ಣು ಸೇರಿದಂತೆ ಅಂಗ ಹಾಗೂ ಅಂಗಾಂಗ ದಾನದ ಮಹತ್ವವನ್ನು ಅರಿತಾಗ ಮಾತ್ರ ಮನುಷ್ಯ ತನ್ನ ಸಾವನ್ನೂ ಸಾರ್ಥಕಗೊಳಿಸಿಕೊಳ್ಳಬಹುದು ಎಂದು ಡಾ|| ಧನಂಜಯ ಸರ್ಜಿ ಹೇಳಿದರು.

ಸ್ವಚ್ಛ ಸುಂದರ ಸ್ವಸ್ಥ್ಯ ಶಿಕಾರಿಪುರಕ್ಕಾಗಿ, ಪರಸ್ಪರ ಸಹಕಾರಕ್ಕಾಗಿ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪರೋಪಕಾರಂ ತಂಡದ ವತಿಯಿಂದ ೧೯-೦೩-೨೦೨೩ರ ಭಾನುವಾರ ಸಂಜೆ ೬ ಗಂಟೆಗೆ ಶಿಕಾರಿಪುರದ ಮೈತ್ರಿ ಶಾಲೆಯಲ್ಲಿ ೨೦೦ನೇ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ನೇತ್ರದಾನ ನೋಂದಣಿ ಅಭಿಯಾನ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ದುಡಿಯುತ್ತಿರುವವರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹುಟ್ಟಿನಿಂದಲೋ, ಅಪಘಾತದಿಂದಲೋ ಆಕಸ್ಮಿಕವಾಗಿ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಜಗತ್ತನ್ನೇ ಕತ್ತಲಾಗಿಸಿಕೊಂಡವರಿಗೆ ಸತ್ತ ನಂತರ ಮನುಷ್ಯ ಮಾಡುವ ನೇತ್ರದಾನ ದೃಷ್ಟಿಯ ಭಾಗ್ಯ ಒದಗಿಸುತ್ತದೆ. ಅವರ ಬದುಕಿಗೆ ಬೆಳಕು ನೀಡುತ್ತದೆ. ಮನುಷ್ಯನ ಕಣ್ಣು, ಕಿಡ್ನಿ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಹೃದಯ, ಶ್ವಾಸಕೋಶ, ಕರುಳು, ಚರ್ಮ ಸೇರಿದಂತೆ ೮ ಅಂಗಗಳನ್ನು ಹಾಗೂ ೭೫ ಅಂಗಾಂಶಗಳನ್ನು ದಾನ ಮಾಡಬಹುದಾಗಿದೆ. ಅಂಗ ಮತ್ತು ಅಂಗಾಂಗದ ದಾನದಿಂದ ರೋಗಿಯ ಜೀವ ಹಾಗೂ ಜೀವನ ರಕ್ಷಿಸಬಹುದಾಗಿದೆ ಎಂದರು.

ಮರಣಾನಂತರ ಅಂಗ ದಾನದಿಂದ ಮುಂದಿನ ಜನ್ಮದಲ್ಲಿ ಅಂಗವಿಕಲತೆ ಉಂಟಾಗುತ್ತದೆ, ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ ಎಂಬ ಭಾವನೆ ಇದೆ. ಅಲ್ಲದೆ ಜನಮಾನಸದಲ್ಲಿ ವಿವಿಧ ಮೂಢನಂಬಿಕೆಗಳೂ ಬಲವಾಗಿ ಬೇರೂರಿವೆ. ಇದರಿಂದಾಗಿ ಬಹುತೇಕರು ಅಂಗ ದಾನಕ್ಕೆ ಹಿಂದೇಟು ಹಾಕುತ್ತಾರೆ. ಆದ್ದರಿಂದ ಅಂಗಾಂಗ ದಾನಕ್ಕೆ ವಯಸ್ಸು, ಲಿಂಗ, ಜನಾಂಗ ಅಥವಾ ಧರ್ಮದ ಅಪ್ರಸ್ತುತತೆ ಬಗ್ಗೆ ಜನರ ಭಾವನೆಯನ್ನು ಬದಲಾಯಿಸಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಶಿವಮೊಗ್ಗ ಪರೋಪಕಾರಂನ ಶ್ರೀಧರ್ ಎನ್.ಎಂ. ಮಾತನಾಡಿ ಪಾಪ- ಪುಣ್ಯ ಎರಡೂ ನಮ್ಮ ಅಂತರಂಗದಲ್ಲಿವೆ. ಪ್ರತಿಯೊಬ್ಬರೂ ಪುಣ್ಯ ಕಾರ್ಯದ ಫಲ ಬಯಸುತ್ತಾರೆ. ಆದರೆ ಪಾಪಗಳನ್ನು ಮಾಡುತ್ತಲೇ ಇರುತ್ತಾರೆ. ಸುಖ ಪುಣ್ಯದ ಹಾಗೂ ಪಾಪ ದುಖಃದ ಫಲವಾಗಿದೆ. ಸಾತ್ವಿಕ ಗುಣಗಳಿಂದ ಮನಸ್ಸು ಪರಿಶುದ್ಧವಾಗಿರುತ್ತದೆ ಮತ್ತು ನಿಯಂತ್ರಣದಲ್ಲಿರುತ್ತದೆ. ಸತ್ಸಂಗದ ಮೂಲಕ ಶುದ್ಧ ಮನಸ್ಸು ಹಾಗೂ ಅತ್ಮ ಸಾಕ್ಷಾತ್ಕಾರವನ್ನು ಹೊಂದಬಹುದೆಂದರು.
ನಿಕಟಪೂರ್ವ ತಹಸೀಲ್ದಾರ್ ಕವಿರಾಜ್, ಇನ್ಸ್‌ಪೆಕ್ಟರ್ ಬಸವರಾಜ್, ಶಿಕಾರಿಪುರ ಪರೋಪಕಾರಂ ತಂಡದ ಕೆ.ಹೆಚ್. ಲಕ್ಷ್ಮಣ್, ಮಧುಕೇಶ್ವರ, ಲಯನ್ಸ್ ಪ್ರಶಾಂತ್, ಮಹೇಶ್ವರ ಸ್ವಾಮಿ, ಆನಂದ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆ ನೇತ್ರಾವತಿ, ಮಾಜಿ ಸೈನಿಕ ರೇವಣಸಿದ್ದಪ್ಪ, ವಿಕಲಚೇತನ ಗುಡದಯ್ಯ, ಅಗ್ನಿಶಮಕ ದಳದ ಹೆಚ್.ಮಹಮದ್ ನೂರುಲ್ಲಾ, ಆರೋಗ್ಯ ಇಲಾಖೆಯ ಎಸ್.ಪ್ರವೀಣ್ ಕುಮಾರ್, ಮೇಸ್ತ್ರಿ ಪರಶುರಾಂ, ಪೊಲೀಸ್ ಇಲಾಖೆಯ ಕೊಟ್ರೇಶ್, ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ ಮತ್ತಿತರರನ್ನು ಸನ್ಮಾನಿಸಲಾಯಿತು.
ನೇತ್ರದಾನ ನೋಂದಣಿ ಅಭಿಯಾನದಲ್ಲಿ ೧೯೮ ಮಂದಿ ನೇತ್ರ ದಾನಕ್ಕೆ ಹೆಸರು ನೋಂದಾಯಿಸಿದರು.
ಕಾಶಿಬಾಯಿ ಸ್ವಾಗತಿಸಿ, ದೈಹಿಕ ಶಿಕ್ಷಕ ಮಂಜುನಾಥ್ ಸ್ವಾಗತಿಸಿ, ಡಿ.ಡಿ.ಶಿವಕುಮಾರ್ ವಂದಿಸಿದರು.

ವರದಿ ಪ್ರಜಾ ಶಕ್ತಿ…