ಶಿವಮೊಗ್ಗ: ರಾಜ್ಯದಲ್ಲಿ ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಹುನ್ನಾರ ಅತ್ಯಂತ ಖಂಡನೀಯ ಎಂದು ಬಜರಂಗದಳದ ವಿಭಾಗ ಸಂಯೋಜಕ ರಾಜೇಶ್ ಗೌಡ ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ಉಲ್ಲೇಖ ಇದ್ದಿದ್ದು ಮತ್ತು ಪಿಎಫ್ಐ ನಂತಹ ದೇಶದ್ರೋಹಿ ಸಂಘಟನೆ ಜೊತೆಗೆ ಹೋಲಿಸಿದ್ದು, ಅತ್ಯಂತ ಖಂಡನೀಯ ಎಂದರು.

ಜಿಹಾದಿ ಸಂಘಟನೆಯ ಭಯೋತ್ಪಾದಕರ ಜೊತೆ ಸಂಪರ್ಕವಿಟ್ಟುಕೊಂಡ ಕಾಂಗ್ರೆಸ್ ಪಕ್ಷ ಹಿಂದೂಗಳ ಮತ್ತು ಗೋಮಾತೆಯ ರಕ್ಷಣೆ ಮಾಡುವ, ಸೇವೆ, ಸುರಕ್ಷೆ, ಸಂಸ್ಕಾರ ದೇಶಪ್ರೇಮದೊಂದಿಗೆ ಕೆಲಸ ಮಾಡುವ ರಾಷ್ಟ್ರೀಯವಾದಿ ಸಂಸ್ಥೆ ಬಜರಂಗದಳವನ್ನು ಹೋಲಿಸಿ ನಿಷೇದಿಸಲು ಹೊರಟು ಜೇನುಗೂಡಿಗೆ ಕಾಂಗ್ರೆಸ್ ಕೈಹಾಕಿದೆ ಎಂದರು.

ಇಂದಿನಿಂದಲೇ ಬಜರಂಗದಳದ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಅಭಿಯಾನ ಕೈಗೊಳ್ಳಲಿದ್ದಾರೆ. ದೇಶದ ಮಾತೆಯರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತಾರೆ. ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸದಾ ಕಾಮಾಲೆ ಕಣ್ಣಿನಿಂದ ಬಜರಂಗದಳನ್ನು ಟೀಕಿಸುತ್ತಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಇವರು ಯಾವ ಮಟ್ಟಕ್ಕೂ ಇಳಿಯಲು ಸಿದ್ಧರಿದ್ದಾರೆ. ತಾಕತ್ತಿದ್ದರೆ ಬಜರಂಗದಳ ನಿಷೇಧಕ್ಕೆ ಕೈಹಾಕಲಿ ಎಂದರು.

ರಾಮನ ಅಸ್ಮಿತೆಗಾಗಿ ಆಂಜನೇಯ ಇದ್ದಂತೆ ದೇಶದ ಹಿತರಕ್ಷಣೆಗೆ ಬಜರಂಗದಳ ಕೆಲಸ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಸಂಬಂಧಿಕರೇ ಶವ ಸಂಸ್ಕಾರಕ್ಕೆ ಬಾರದೇ ಇದ್ದಾಗ ಸಾವಿರಾರು ಶವ ಸಂಸ್ಕಾರ ಮಾಡಿದ್ದಲ್ಲದೇ ಕೋವಿಡ್ ಸಂತ್ರಸ್ಥರ ಮನೆಗೆ ಔಷಧಿ ಆಹಾರ ಪೂರೈಸಿದೆ. ರಾಮ ಮಂದಿರ ಹೋರಾಟದಲ್ಲಿ ಭಾಗವಹಿಸಿ ರಾಷ್ಟ್ರ ಭಕ್ತಿಯನ್ನು ಮತ್ತು ಹಿಂದುತ್ವದ ಜಾಗೃತಿ ಮೂಡಿಸಿದೆ. ಬಜರಂಗದಳದ ಇತಿಹಾಸ ಗೊತ್ತಿಲ್ಲದ ಸ್ವಾರ್ಥ ರಾಜಕಾರಣಿಗಳು ಟೀಕೆ ಮಾಡುತ್ತಿದ್ದಾರೆ. ಭಯೋತ್ಪಾದಕ ಸಂಘಟನೆಯೊಂದಿಗೆ ಹೋಲಿಸುತ್ತಿದ್ದಾರೆ ಎಂದರು.

56 ದೇಶಗಳಲ್ಲಿ ಹಿಂದೂಗಳ ರಕ್ಷಣೆಗೆ ಬಜರಂಗದಳ ಕೆಲಸ ಮಾಡುತ್ತಿದೆ. ನಾವು ಯಾವುದೇ ರಾಜಕೀಯ ಉದ್ದೇಶದಿಂದ ಕೆಲಸ ಮಾಡುತ್ತಿಲ್ಲ. ಹಿಂದುತ್ವದ ಪರವಾಗಿರುವ ರಾಷ್ಟ್ರೀಯವಾದಿ ಪಕ್ಷ ಬಿಜೆಪಿ ಬೆಂಬಲಿಸಲು ವಿನಂತಿಸುತ್ತೇವೆ. ಯಾವತ್ತೂ ನಾವು ಯಾವುದೇ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ. ಆದರೆ, ಹಿಂದುತ್ವದ ಪರವಾಗಿರುವ ಪಕ್ಷಗಳಿಗೆ ಬೆಂಬಲಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗೇಶ್, ಅಂಕುಶ್, ವೇಣು, ಅರ್ಜುನ್, ಲಿಖಿತ್, ಆನಂದ್ ಮೊದಲಾದವರಿದ್ದರು.

ವರದಿ ಪ್ರಜಾ ಶಕ್ತಿ…