ಶಿವಮೊಗ್ಗ: ಎನ್.ಯು. ಆಸ್ಪತ್ರೆ ಸಮೂಹವು ಮಲೆನಾಡು ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ (ಕಸಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಈ ಭಾಗದ ರೋಗಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ಆಸ್ಪತ್ರೆಯ ಕಿಡ್ನಿ ಟ್ರಾನ್ಸ್ ಪ್ಲಾಂಟ್ ತಜ್ಞ ವೈದ್ಯ ಹಾಗೂ ಸಹಾಯಕ ವೈದ್ಯಕೀಯ ನಿರ್ದೇಶಕ ಡಾ. ಪ್ರವೀಣ್ ಮಾಳವಧೆ ಹೇಳಿದರು.

ಅವರು ಇಂದು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎನ್.ಯು. ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸೆಯ ವಿವರಣೆ ನೀಡಿ ಎನ್.ಯು. ಆಸ್ಪತ್ರೆ ಮೂತ್ರ ರೋಗಕ್ಕೆ ಸಂಬಂಧಿಸಿದಂತೆ ವಿವಿಧ ಅತ್ಯಾಧುನಿಕ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ನೀಡುತ್ತಾ ಬಂದಿದ್ದು, ಈಗ ಮೊದಲ ಬಾರಿ ಮೂತ್ರ ಪಿಂಡ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿ ಇತಿಹಾಸ ನಿರ್ಮಾಣ ಮಾಡಿದೆ ಎಂದರು.

ಈ ಶಸ್ತ್ರ ಚಿಕಿತ್ಸೆಗೆ ಒಳಗಾದವರು ಭದ್ರಾವತಿ ಮೂಲದ 23 ವರ್ಷದ ಯುವತಿಯಾಗಿದ್ದಾರೆ, ನಮ್ಮ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮೂತ್ರ ವೈಫಲ್ಯವಾಗಿರುವುದು ಕಂಡು ಬಂದಿತು, ಯುವತಿಯ ಕುಟುಂಬಕ್ಕೆ ಮೂತ್ರಪಿಂಡ ದಾನ ಮಾಡಿದರೆ ಟ್ರಾನ್ಸ್ ಪ್ಲಾಂಟ್ ಶಸ್ತ್ರ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಎಂದು ಹೇಳಿದೆವು. ಅದರಂತೆ ಅವರ ತಂದೆಯೇ ತಮ್ಮ ಮೂತ್ರಪಿಂಡ ದಾನ ಮಾಡಿದ್ದಾರೆ ಎಂದು ಡಾ. ಪ್ರವೀಣ್ ಮಾಳವಧೆ ತಿಳಿಸಿದರು.

ಏ. 26 ನಮಗೆ ಮಹತ್ವದ ದಿನ. ಆ ದಿನ ಅತ್ಯಾಧುನಿಕ ರೀತಿಯಲ್ಲಿ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಶಸ್ತ್ರ ಚಿಕಿತ್ಸೆಗೆ ನಮ್ಮ ಇಡೀ ಆಸ್ಪತ್ರೆಯ ವೈದ್ಯರು ಸಿದ್ಧರಾದರು. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಿದೆವು. ಈಗ ದಾನ ಮಾಡಿದ ತಂದೆ, ದಾನ ಪಡೆದ ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ. ಕೆಲವೇ ದಿನಗಳಲ್ಲಿ ಮೊದಲ ಸ್ಥಿತಿಗೆ ತಲುಪಿದ್ದಾರೆ. ಇದು ನಮ್ಮ ಆಸ್ಪತ್ರೆಯ ಹೆಮ್ಮೆ ಎಂದರು.

ಮತ್ತೋರ್ವ ತಜ್ಞ ಹಾಗೂ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರದೀಪ್ ಮಾತನಾಡಿ, ನಮ್ಮ ಆಸ್ಪತ್ರೆ ಮೂತ್ರ ಶಾಸ್ತ್ರದ ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಇದೇ ಮೊದಲ ಬಾರಿಗೆ ಮಲೆನಾಡು ಭಾಗದಲ್ಲಿ ಮೂತ್ರಪಿಂಡ ಟ್ರಾನ್ಸ್ ಪ್ಲಾಂಟ್ ಮಾಡಿ ಯಶಸ್ವಿಯಾಗಿದ್ದೇವೆ. ಇದರಿಂದ ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಚಿಕಿತ್ಸೆ ಪಡೆಯುವುದು ತಪ್ಪಿದಂತಾಗುತ್ತದೆ. ಆರ್ಥಿಕವಾಗಿಯೂ ಇದು ಉಳಿತಾಯವಾಗುತ್ತದೆ. ಮತ್ತು ದೂರದ ಊರುಗಳಿಗೆ ಹೋಗುವುದು ತಪ್ಪುತ್ತದೆ ಎಂದರು.

ಮೊದಲು ಮೂತ್ರ ಪಿಂಡ ಟ್ರಾನ್ಸ್ ಪ್ಲಾಂಟ್ ಎಂದರೆ ಅತ್ಯಂತ ಕಷ್ಟಕರವಾಗಿತ್ತು. ಯಶಸ್ವ ರೇಟ್ ಕೂಡ ಕಡಿಮೆ ಇತ್ತು. ಆದರೆ ಈಗ ಹೊಸ ತಂತ್ರಜ್ಞಾನಗಳು ವೈದ್ಯಕೀಯ ಕ್ಷೇತ್ರಕ್ಕೆ ಬಂದಿವೆ. ಲ್ಯಾಪರೋಸ್ಕೋಪಿಕ್ ವಿಧಾನದ ಮೂಲಕ ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ನಮ್ಮ ತಂಡದಲ್ಲಿ ಡಾ. ಕಿರಣ್ ಚಂದ್ರ ಪಾತ್ರೋ, ಡಾ. ಪ್ರಸನ್ನ, ಡಾ. ವೆಂಕಟೇಶ್, ಡಾ, ಕೃಷ್ಣಪ್ರಸಾದ್, ಡಾ. ಪ್ರಮೋದ್ ಕೃಷ್ಣಪ್ಪ, ಡಾ. ಆಲ್ಕಾಡಿಯೋ, ಡಾ. ಕಾರ್ತಿಕ್ ಇದ್ದರು. ಇವರಿಗೆ ಮತ್ತು ನಮ್ಮ ಆಸ್ಪತ್ರೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡಿದ ಭದ್ರಾವತಿಯ ನಿರ್ಮಲಾ ಆಸ್ಪತ್ರೆ ವೈದ್ಯರನ್ನು ನಾವು ಶ್ಲಾಘಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಕಾರ್ತಿಕ್, ಪಿ.ಆರ್.ಒ. ಶ್ರುತಿ ವಿ. ಇದ್ದರು.

ವರದಿ ಪ್ರಜಾ ಶಕ್ತಿ…