ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಹಾಗೂ 2018ರ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಅಭ್ಯರ್ಥಿ ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ಇವರನ್ನು ಭದ್ರಾವತಿ ವಿಧಾನಸಭಾ ಕ್ಷೇತ್ರದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ನೇಮಿಸಲಾಗಿದೆ.


ಈ ಕುರಿತು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್.ಪ್ರಸನ್ನಕುಮಾರ್ ಇವರು ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದು, ತಕ್ಷಣದಿಂದ ಜವಬ್ದಾರಿ ವಹಿಸಿಕೊಂಡು ಭದ್ರಾವತಿ ಕ್ಷೇತ್ರದ ಶಾಸಕರಾದ ಬಿ.ಕೆ. ಸಂಗಮೇಶ್ ರವರೊಡನೆ ಚರ್ಚಿಸಿ ಪಕ್ಷದ ಸಂಘಟನೆಯಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಹಾಗೂ ಸ್ಥಳೀಯವಾಗಿ ನಡೆಯುವಂತಹ ಎಲ್ಲಾ ವಿವರಗಳನ್ನು ಕಾಲಕಾಲಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ವರದಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.


ಈ ಹಿಂದೆ ರಮೇಶ್ ಇವರು ತೀರ್ಥಹಳ್ಳಿಯ ವಿಧಾನಸಭಾ ಕ್ಷೇತ್ರ ಉಸ್ತುವಾರಿಯನ್ನು ವಹಿಸಿಕೊಂಡು ಕಾಯ ನಿರ್ವಹಿಸುತ್ತಿದ್ದರು. ಈಗಾಗಲೇ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಇವರೊಡನೆ ಒಂದು ಸುತ್ತಿನ ಪ್ರವಾಸ ಯಶಸ್ವಿಯಾಗಿ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಸಂದರ್ಭದಲ್ಲಿ ಗಮನಿಸಬಹುದಾಗಿದೆ.