ಶಿವಮೊಗ್ಗ:’ಕ್ಷೇತ್ರದ ಅಭಿವೃದ್ಧಿಗೆ ಆಸರೆಯಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಕೊಡುಗೆ ಮರೆಯಕೂಡದು. ಇಲ್ಲಿ ಗೀತಕ್ಕ ಅವರ ಗೆಲುವು ಕ್ಷೇತ್ರದ ಮತದಾರರ ಸ್ವಾಭಿಮಾನದ ಪ್ರಶ್ನೆ’ ಎಂದು ನಟ ದುನಿಯಾ ವಿಜಯ್ ಹೇಳಿದರು.

ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಗ್ರಾಮದಲ್ಲಿ ಅನ್ಯ ಪಕ್ಷಗಳಿಗೆ ಬೆಂಬಲಿಸುವ ಯುವಕ- ಯುವತಿಯರು ಇರಬಹುದು. ನಮಗೆ ನಿಮ್ಮ ಪಕ್ಷದ ಕುರಿತ ಗೌರವ ಇದೆ. ಆದರೆ, ಹೆಚ್ಚಾಗಿ ಇಲ್ಲಿ ರೈತ ಕುಟುಂಬಗಳು ವಾಸವಾಗಿವೆ‌. ೩೦ ವರ್ಷದ ಹಿಂದೆ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದ ಬಂಗಾರಪ್ಪ ಅವರ ಸೇವೆಯನ್ನು ಮರೆಯಕೂಡದು ಎಂದರು.

ತಂದೆಯ ಹಾದಿಯಲ್ಲಿ ಸಾಗಿ, ಜನಸಾಮಾನ್ಯರಿಗೆ ನೆರವಾಗುವ ಉದ್ದೇಶದಿಂದ ಗೀತಕ್ಕ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮತ ನೀಡಿ ಆಶೀರ್ವದಿಸಿ ಎಂದು ಕೋರಿದರು.

ಶಾಸಕ ಗೋಪಾಲ ಕೃಷ್ಣ ಬೇಳೂರು ಮಾತನಾಡಿ, ಕ್ಷೇತ್ರದ ರಕ್ಷಣೆ ಕಾಂಗ್ರೆಸ್ ಪಕ್ಷದ ಜವಬ್ದಾರಿ. ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ನಾನು ಭರವಸೆ ನೀಡುತ್ತೇನೆ. ಈಗಾಗಲೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಎಲ್ಲಾ ಜಾತಿ- ಧರ್ಮವರ ಮನೆಯ ಬಾಗಿಲಿಗೆ ತಲುಪಿವೆ‌. ಇಲ್ಲಿ ಬಿಜೆಪಿ ಪಕ್ಷದವರೂ ಕೂಡ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ‘420 ಗ್ಯಾರಂಟಿ’ ಎಂದು ಬಿಜೆಪಿ ನಾಯಕರು ಜರಿಯುತ್ತಿದ್ದಾರೆ. ಆದರೆ, ಧರ್ಮಸ್ಥಳ ಕ್ಷೇತ್ರದ ವಿರೇಂದ್ರ ಹೆಗ್ಗಡೆ ಅವರು ಗ್ಯಾರಂಟಿ ಯೋಜನೆಗಳಿಂದ ದೇವಾಲಯಗಳು ತುಂಬಿ ತುಳುಕುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಗ್ಯಾರಂಟಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ಇದೆ. ಆದರೆ, ಇಲ್ಲಿ ಬಿಜೆಪಿಯವರ ಮನಸ್ಥಿತಿ ಮಾತ್ರ ಹದಗೆಟ್ಟಿದೆ. ಮತದಾರರು ಎಚ್ಚೆತ್ತುಕೊಳ್ಳಬೇಕು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಚುನಾವಣೆಯಲ್ಲಿ ಒಂದು ಅವಕಾಶ ನೀಡಿ, ಮತದಾರರು ಆಶೀರ್ವದಿಸಬೇಕು. ಅದೇ ರೀತಿ, ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಶಕ್ತಿ ತುಂಬಿ ಎಂದ ಅವರು, ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಮಗಳಾದ ನಾನು ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುವ ಸಾಮಾರ್ಥ್ಯ ನನಗಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ ಕಣ್ಣೂರು ಮಾತನಾಡಿ, ಈ ಭಾಗದಲ್ಲಿ ಮಾಜಿ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಇಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಅದು ಹುಸಿಯಾಗಿದೆ. ಆದ್ದರಿಂದ, ಗೀತಕ್ಕಗೆ ಮತ ನೀಡಿ ಹರಸಿ ಎಂದರು.

ನಟ ಶಿವರಾಜಕುಮಾರ, ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಅನಿತಾ ಕುಮಾರಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ್ ಲಾವಿಗೇರೆ, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಳಸೆ ಚಂದ್ರಪ್ಪ, ಪ್ರಭಾವತಿ ಚಂದ್ರಕಾಂತ, ಸುರೇಶ್ ಬಾಬು ಸೇರಿ ಬೆಂಬಲಿಗರು ಇದ್ದರು.

ವರದಿ ಪ್ರಜಾ ಶಕ್ತಿ