ಬೆಳಗಾವಿ : ಗೌರವಧನ ಹೆಚ್ಚಳ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಮಂಗಳವಾರ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಆಗ್ರಹಿಸಿ ಸುವರ್ಣ ವಿಧಾನಸೌಧದ ಎದುರು ಧರಣಿ ನಿರತರಿಗೆ ಮೂಲ ಸೌಕರ್ಯ ಒದಗಿಸದ ರಾಜ್ಯ ಸರ್ಕಾರದ ವಿರುದ್ಧ ಶಾಸಕ ಡಾ. ಧನಂಜಯ ಸರ್ಜಿ ಅವರು ಹರಿಹಾಯ್ದರು.
ಚಳಿಗಾಲದ ವಿಧಾನ ಪರಿಷತ್ 154 ನೇ ಅಧಿವೇಶನದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಅತಿಥಿ ಉಪನ್ಯಾಸಕ ರಿಂದ ಅಹವಾಲು ಸ್ವಿಕರಿಸಿ ಅವರ ಜೊತೆ ಮಾತನಾಡುತ್ತಿರುವ ವೇಳೆ ಅತಿಥಿ ಉಪನ್ಯಾನಕಿಯೊಬ್ಬರು ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬಿದ್ದರು. ವೈದ್ಯಾನಾಗಿ ಅವರಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಆಬ್ಯೂಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತುರ್ತು ಸೇವೆಯ 108 ಆಬ್ಯೂಲೆನ್ಸ್ ನಲ್ಲಿ ಯಾವುದೇ ಜೀವರಕ್ಷಕ ಸೌಲಭ್ಯಗಳು ಇರದಿರುವುದು, ಸಕ್ಕರೆ ಖಾಯಿಲೆ ಪರೀಕ್ಷೆ ಮಾಡುವ ಯಂತ್ರ ಹಾಳಾಗಿರುವುದು, ಡ್ರಿಪ್ ಹಾಕುವ ವ್ಯಸ್ಥೆಯೂ ಇರದಿರುವುದು ಹಾಗೂ ರೋಗಿಗೆ ಸೀಟ್ ಬೆಲ್ಟ್ ಇಲ್ಲದಿರುವುದನ್ನು ಕಂಡು ಅಘಾತವಾಯಿತು.
ನಂತರ ಚಾಲಕನಿಗೆ ಸೈರನ್ ಹಾಕಿಕೊಂಡು ತುರ್ತಾಗಿ ಹೋಗುವಂತೆ ಸೂಚಿಸಿದರೆ, ಸೈರನ್ ಹಾಕಬಾರದೆಂದು ಪೊಲೀಸ್ ಸಿಬ್ಬಂದಿ ಹೇಳಿದ್ದಾರೆಂಬ ಉತ್ತರ ಬಂತು. ತುರ್ತಾಗಿ ಹೋಗಬೇಕಿದ್ದ ಸನ್ನಿವೇಶದಲ್ಲಿ ನಿಧಾನವಾಗಿ ಆಸ್ಪತ್ರೆಗೆ ತಲುಪಿಸಿದ್ದು ದುರದೃಷ್ಟಕರ. ಈ ಕುರಿತು ಚಾಲಕನನ್ನು ವಿಚಾರಿಸಿದಾಗ ಕಳೆದ 6 ತಿಂಗಳಿನಿಂದ ಸಂಬಳ ನೀಡಿರುವುದಿಲ್ಲ, ಈ ಹಿಂದೆ ನೀಡುತ್ತಿದ್ದ 30,000 ರೂ.ತಡೆದು ಈಗ ಕೇವಲ 12.000 ರೂ. ಸಂಬಳ ನೀಡುತ್ತಿದ್ದಾರೆ ಎಂಬ ಮಾಹಿತಿ ದೊರೆಯಿತು. ಇದು ನಿಜಕ್ಕೂ ಸರ್ಕಾರದ “ವ್ಯವಸ್ಥೆಯ ಅವ್ಯವಸ್ಥೆ”ಗೆ ಹಿಡಿದ ಕೈಗನ್ನಡಿಯಾಗಿದೆ. ಮತ್ತೊಂದೆಡೆ ವಿಕಲಚೇತನರ ಧರಣಿಗೆ ಅವಕಾಶ ನೀಡಿ, ವಿಕಲಚೇತನರು ಶೌಚಾಲಯಕ್ಕೆ ಮೆಟ್ಟಿಲು ಹತ್ತಿಕೊಂಡು ಹೋಗಲು ಆಗದೇ ಇರುವಂತೆ ವಿವೇಚನ ರಹಿತ ಶೌಚಾಲಯಗಳನ್ನು ನಿರ್ಮಿಸಲಾಗಿದೆ, ವಿಕಲಚೇತನರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸದಿರುವುದಕ್ಕೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸುವರ್ಣ ವಿಧಾನಸೌಧ ಅಧಿವೇಶನದ ಸಮಯದಲ್ಲಿ ಪ್ರತಿದಿನ ವಿವಿಧ ಸಂಘಟನೆಗಳಿಂದ ಧರಣಿ, ಮುಷ್ಕರ ನಡೆಯುವುದು ಸಾಮಾನ್ಯ., ಆದರೂ ಅಗತ್ಯ ಸೌಕರ್ಯ ಒದಗಿಲ್ಲ. ಅಲ್ಲದೇ ಜೀವರಕ್ಷಕ ಸೌಲಭ್ಯಗಳಿಲ್ಲದ ಆಂಬ್ಯೂಲೆನ್ಸ್ ಸೇವೆಗೆ ನಿಯೋಜಿಸಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ಆಡುತ್ತಿರುವುದು ಅಕ್ಷಮ್ಯ. ಧರಣಿ, ಪ್ರತಿಭಟನೆ ನಡೆಸುವವರ ಭಾವನೆಗಳನ್ನು ಅರ್ಥಮಾಡಿಕೊಂಡು ಧರಣಿ ನಡೆಯುವ ಸ್ಥಳಗಳಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಮಾಸಿಕ ಗೌರವ ಧನ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಚಳಿಗಾಲದ 154 ನೇ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧದ ಎದುರು ಬುಧವಾರ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರಿಂದ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಅವರು ಅಹವಾಲು ಸ್ವೀಕರಿಸಿ, ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳಯುವುದಾಗಿ ಭರವಸೆ ನೀಡಿದರು, ನೂರಾರು ಅತಿಥಿ ಶಿಕ್ಷಕರು ಹಾಜರಿದ್ದರು.