ರಾಜ್ಯ ಸರ್ಕಾರ ಕೈಗೆತ್ತಿಗೊಳ್ಳುತ್ತಿರುವ ಶರಾವತಿ ಭೂಗತ ವಿದ್ಯುತ್ ಯೋಜನೆಯಿಂದ ಸುಮಾರು ೩೫೦ ಎಕರೆ ಪಶ್ಚಿಮಘಟ್ಟದ ಅರಣ್ಯ ನಾಶ ಆಗಲಿದೆ ಎಂದು ಶಾಸಕ ಡಿ.ಎಸ್.ಅರುಣ್ ಸರ್ಕಾರದ ಗಮನಕ್ಕೆ ತಂದರು.


ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ಥಾಪಿಸಿದ ಅವರು, ಈ ಯೋಜನೆಯಿಂದ ಶರಾವತಿ ಅಭಯಾರಣ್ಯದಲ್ಲಿನ ಸಸ್ಯ ಸಂಪತ್ತು, ವಿವಿಧ ಪ್ರಭೇದಗಳು, ಅಳಿವಿನ ಅಂಚಿನ ಪ್ರಾಣಿಗಳಿಗೂ ಕುತ್ತು ಬರಲಿದೆ ಅಲ್ಲದೇ ಈ ಯೋಜನೆಗೆ ವ್ಯಾಪಕ ವಿರೋಧವೂ ಇದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪಕ್ಕದ ತಮಿಳುನಾಡಿನ ರಾಜ್ಯ ಸರ್ಕಾರ ಬೇಡಿಕೆ ಸಮಯದಲ್ಲಿ ಬೇಕಾಗುವ ವಿದ್ಯುತ್ ಅನ್ನು ಸಂಗ್ರಹಿಸಿಟ್ಟು ಸರಬರಾಜು ಮಾಡಲು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್( ಬಿಇಎಸ್‌ಎಸ್ ) ಯೋಜನೆ ಎಂದನ್ನು ರೂಪಿಸಿದ್ದು, ಕೇಂದ್ರ ಇಂಧನ ಇಲಾಖೆ ಇದಕ್ಕೆ ಶೇ.೩೦ರಷ್ಟು ಧನ ಸಹಾಯ ಮಾಡುತ್ತಿದೆ ಎಂಬ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತಂದರು.


ಈ ಯೋಜನೆಯು ಸೌರಶಕ್ತಿ ಮತ್ತು ಗಾಳಿಯ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ೫೦೦ ರಿಂದ೧೦೦೦ ಮೆಗಾ ವ್ಯಾಟ್ ಸಾಮರ್ಥ್ಯದ ಬ್ಯಾಟರಿಗಳನ್ನು ವಿವಿಧ ಸಂಗ್ರಹ ಘಟಕಗಳಲ್ಲಿ ಶೇಖರಿಸಿ, ಹೆಚ್ಚು ಬೇಡಿಕೆ ಸಮಯದಲ್ಲಿ ಪೂರೈಕೆ ಮಾಡಲಾಗುತ್ತಿದೆ ಹಾಗೂ ಇದರಿಂದ ವಿದ್ಯುತ್ ಖರೀದಿ ವೆಚ್ಚ ಉಳಿತಾಯವಾಗುತ್ತದೆ ಎಂದು ಸರ್ಕಾರಕ್ಕೆ ವಿವರಿಸಿದರು.
ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಕೇಂದ್ರದ ಸಹಾಯ ಧನ ಸಹಾಯದೊಂದಿಗೆ ಮುಂದುವರೆಸಲು ನಿರ್ಲಕ್ಷ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿದ್ದು, ಪರಿಸರ ಹಾಗೂ ವನ್ಯಜೀವಿ ನೆಲೆಯನ್ನು ನಾಶ ಮಾಡದೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಅಳವಡಿಸುವ ಈ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಇಂಧನ ಸಚಿವರನ್ನು ಡಿ.ಎಸ್.ಅರುಣ್ ಒತ್ತಾಯಿಸಿದರು.


ಸರ್ಕಾರದಿಂದ ಶಾಸಕರ ಪ್ರಶ್ನೆಗೆ ಪೂರಕವಾದ ಉತ್ತರ ಒದಗಿಸಲಾಗುವುದು ಎಂದು ಸಭಾನಾಯಕ ಬೋಸರಾಜ್ ತಿಳಿಸಿದರು.