ಇಡೀ ಸ್ತ್ರೀ ಕುಲಕ್ಕೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಾದರಿಯಾಗಿದ್ದು, ಶ್ರದ್ದೆ ಮತ್ತು ನಂಬಿಕೆಯಿಂದ ಏನನ್ನಾದರೂ ಸಾಧಿಸಬಹುದೆಂದು ಅವರು ತೋರಿಸಿದ್ದಾರೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಸ್ಮರಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರೆಡ್ಡಿ ಸಮಾಜ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಕ್ತಿ ಮತ್ತು ನಂಬಿಕೆಗೆ ಇನ್ನೊಂದು ಹೆಸರೇ ಮಲ್ಲಮ್ಮ .ಮಲ್ಲಮ್ಮ ತಮ್ಮ ಕುಟುಂಬದಲ್ಲಿ ಎದುರಾದ ನೋವುಗಳನ್ನೆಲ್ಲಾ ಸಹಿಸಿಕೊಂಡು ಮೇಲೆ ಬಂದರು. ಇಂತಹ ಕಷ್ಟ ಕಾರ್ಪಣ್ಯದ ನಡುವೆಯೂ ಅವರ ತಾಳ್ಮೆ ಬದುಕಿಗೆ ಶಕ್ತಿ ತಂದು ಕೊಟ್ಟಿತ್ತು ಎಂದರು.


ಮಲ್ಲಮ್ಮನಿಗೆ ಬುದ್ದಿ ಕಲಿಸಲು ಅವರ ಅತ್ತೆ ಭಿಕ್ಷುಕನಿಗೆ ನಿಗಿ ನಿಗಿ‌ ಕೆಂಡ ಭಿಕ್ಷೆ ನೀಡುವಂತೆ ಹೇಳಿದಾಗ ಮಲ್ಲಮ್ಮ ಶ್ರೀಶೈಲ‌ಮಲ್ಲಿಕಾರ್ಜುನನ್ನು ಮನದಲ್ಲಿ‌ ನೆನೆದು ಭಕ್ತಿಯಿಂದ ಅದನ್ನೇ ಭಿಕ್ಷೆ ನೀಡಿದಾಗ ಅದು ಧಾನ್ಯವಾಗುತ್ತದೆ. ಆಗಿನಿಂದ ಅವರನ್ನು ಕೆಂಡದ ಮಲ್ಲಮ್ಮ ಎಂದು ಕರೆಯಲಾಗುತ್ತದೆ.
ಆಕೆಯ ಭಕ್ತಿ‌ ಮತ್ತು ನಂಬಿಕೆಯಿಂದ ಇಂತಹ ಹಲವು ಪವಾಡ ನಡೆಯುವ ಕಾರಣ ಪವಾಡ ಪುರುಷಳೆಂದು ಸಹ ಕರೆಯಲಾಗುತ್ತದೆ. ಮಲ್ಲಮ್ಮ ಸದಾ ಶ್ರೀ ಶೈಲ ಮಲ್ಲಿಕಾರ್ಜುನನ್ನು ಜಪಿಸುತ್ತಿದ್ದಳು. ನನ್ನ ಜೊತೆ ಸದಾ ಮಲ್ಲಿಕಾರ್ಜುನನು ಇರುತ್ತಾನೆ ಎಂಬ ನಂಬಿಕೆಯಿಂದ
ಮಲ್ಲಮ್ಮ ಎಲ್ಲ ಕಷ್ಟಗಳನ್ನು ಸಹಜವಾದ ರೀತಿಯಲ್ಲಿ ಸ್ವೀಕರಿಸಿದಳು, ಈ ಮೂಲಕ ಸಮಾಜಕ್ಕೆ ತಾಳ್ಮೆಯ ಶಕ್ತಿಯನ್ನು ತಿಳಿಸುತ್ತಾ ಹೋದಳು.
ಇಂತಹ ಸಾಧ್ವಿಗಳು ಮತ್ತು ದಾರ್ಶನಿಕರಿಂದ ಈ ದೇಶದ ಸಂಸ್ಕೃತಿ, ಪರಂಪರೆ, ನಂಬಿಕೆಗಳ ನೆಲೆಗಟ್ಟು ಗಟ್ಟಿಯಾಗಿ ಉಳಿದಿದೆ. ನಂಬಿಕೆಯೊಂದಿದ್ದರೆ ಸಮಾಜದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಮಲ್ಲಮ್ಮ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಮಲ್ಲಮ್ಮರಂತಹ ಶರಣೆಯರ ಬದುಕು ಆದರ್ಶ ಪ್ರಾಯ. ಇಂತಹ
ಭಕ್ತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಉತ್ತಮವಾಗಿರುತ್ತದೆ ಎಂದರು.
ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಾ ಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಹಸೀನಾ ಹೆಚ್.ಕೆ. ಮಾತನಾಡಿ, ಸಾಧ್ವಿತನಕ್ಕೆ ದೊಡ್ಡ ಉದಾಹರಣೆ ಮಲ್ಲಮ್ಮ. ನಮ್ಮ ಕನ್ನಡ ನಾಡಿನ ಉದ್ದಗಲಕ್ಕೆ ಆದರ್ಶ ವ್ಯಕ್ತಿಗಳು ಇದ್ದಾರೆ. 14-15 ನೇ ಶತಮಾನದಲ್ಲಿದ್ದ ಮಲ್ಲಮ್ಮನವರು ನೀಡಿರುವ ಕೌಟುಂಬಿಕ ಮೌಲ್ಯಗಳು, ಗುರು ಹಿರಿಯರ ಅಂಶಗಳನ್ನು ನಾವು ಪ್ರಸ್ತುತದಲ್ಲಿ ಅಳವಡಿಸಿಕೊಳ್ಳಬೇಕಿದೆ.
ಜಾನಪದ ಮಾತುಗಳಲ್ಲಿ ಮಲ್ಲಮ್ಮನವರ ಪವಾಡ, ಬದುಕು, ಚರಿತ್ರೆಯನ್ನು ಕಾಣುತ್ತೇವೆ. ಇಡೀ ಬದುಕನ್ನು ಶಿವಭಕ್ತಿಗೆ ಮೀಸಲಿಟ್ಟ ಅವರು
ಕೌಟುಂಬಿಕ ಮೌಲ್ಯಕ್ಕೆ ಮಾದರಿ. ಅವರ ವಿಚಾರಧಾರೆಯನ್ನು ದಿನನಿತ್ಯದ ಬದುಕಿನಲ್ಲಿ ನಾವೆಲ್ಲ ಅಳವಡಿಸಿಕೊಳ್ಳಬೇಕಿದೆ.


ಗುರುವಿನ ಶಕ್ತಿಯಿಂದ ಏನಾನ್ನಾದ್ರೂ ಸಾಧನೆ ಮಾಡಬಹುದೆಂದು ಅವರಿಂದ ತಿಳಿಯುತ್ತದೆ. ಜಾನಪದ ಕಥೆಗಳಲ್ಲಿ ಅವರ ಶೌರ್ಯ, ಸಾಹಸಗಳನ್ನು ನೋಡಬಹುದು. ಸಂತ ಶಿಶುನಾಳ ಷರೀಫರು ಸಹ ಮಲ್ಲಮ್ಮನನ್ನು ಹಾಡಿ ಹೊಗಳಿ ಬರೆದಿದ್ದಾರೆ. ಮಹಾನ್ ದಾರ್ಶನಿಕರು ಸಮಾಜಕ್ಕೆ ಅಗತ್ಯವಾಗಿ ಬೇಕು.
ನಮ್ಮ ದೇಶ ಆರ್ಥಿಕ ಸಂಕಷ್ಟಕ್ಕೀಡಾಗುವುದಿಲ್ಲ. ಇದಕ್ಕೆ ನಮ್ಮ‌ ಹೆಣ್ಣುಮಕ್ಕಳ ಆರ್ಥಿಕ ಪ್ರಜ್ಞೆಯೂ ಕಾರಣ. ಶರಣರ ಬದುಕನ್ನು ಅಳವಡಿಸಿಕೊಂಡಲ್ಲಿ ದೇಶಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಬಸವಾದಿ ಶರಣರ ವಚನಗಳನ್ನು ಓದಿ ತಿಳಿದು ಬದುಕಬೇಕು.
ತೆಲುಗು ಭಾಷೆ ಯಲ್ಲಿ ಮಲ್ಲಮ್ಮನವರ ಅಗಾಧ ಸಾಹಿತ್ಯ ಸಂಪತ್ತಿದೆ. ಸಮಾಜ ಬಾಂಧವರು ಈ ಮಾಹಿತಿಯನ್ನು ಕಲೆ ಹಾಕಿ, ಮುಂದಿನ ತಲೆಮಾರಿನವರಿಗೆ ನೀಡಬೇಕಿದೆ. ಮಲ್ಲಮ್ಮ ಕುಟುಂಬ ಸ್ವಾಸ್ಥ್ಯ, ಭಕ್ತಿ ಮತ್ತು ಶಕ್ತಿಯ ಪ್ರತೀಕ ಎಂದ ಅವರು ಪ್ರಸ್ತುತ ದಿನಮಾನದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚುತ್ತಿದ್ದು ಇದು ಸಮಾಜದ
ಅಧಪತನಕ್ಕೆ ಕಾರಣ.‌
ಸಮಾಜ ಸರಿಯಾದ ಮಾರ್ಗದಲ್ಲಿ ಸಾಗಬೇಕೆಂದರೆ
ಮಲ್ಲಮ್ಮನಂತಹ ದಾರ್ಶನಿಕರ ಬದುಕನ್ನು ಓದಬೇಕು, ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಕೌಟುಂಬಿಕ ಮೌಲ್ಯಗಳನ್ನು ಮರಿಯಬಾರದು. ಮೌಲ್ಯಗಳನ್ನು‌ ಹರಡಬೇಕು. ಮನಸ್ಸುಗಳನ್ನು‌ ಕಟ್ಟುವ ಕೆಲಸ ಆಗಬೇಕು ಎಂದರು.


ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷ ಜಿ.ಕುಮಾರಸ್ವಾಮಿ ಮಾತನಾಡಿ, ಅಕ್ಮಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ಕಿತ್ತೂರು ರಾಣಿ ಚೆನ್ನಮ್ಮ ಇವರೆಲ್ಲ ಮಾದರಿ ಸ್ತ್ರೀಯರು. ಮಲ್ಲಮ್ಮ ಸಂಸಾರದ ಕೋಟಲೆಯನ್ನು ತಾಳ್ಮೆ ಯಿಂದ ಸಹಿಸಿ, ಬೆಟ್ಟದಂತಹ ಕಷ್ಟವನ್ನು ಹೂವಾಗಿ ಅರಳಿಸಿದವರು. ಪುರುಷರಿಗೂ ಮಾದರಿ ಇವರು. ಅವರ ಬದುಕಿನ ಸಾರವನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ ಕಾರ್ಯದರ್ಶಿ‌ಜಿ.ಎಸ್.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್ ಉಮೇಶ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *