ಮಂಜುನಾಥ ಶೆಟ್ಟಿ…
ಬಿಜೆಪಿ ಮುಖಂಡ ಸಿ.ಟಿ. ರವಿ ಅವರು “ಮುಲ್ಲಾಗಳಿಗೂ ನೀಟ್ಗೂ ಏನು ಸಂಬಂಧ?” ಎಂದು ನೀಡಿರುವ ಹೇಳಿಕೆ ಸಮಾಜದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಿದ್ದು, ಅವರನ್ನು ತಕ್ಷಣವೇ ವಿಧಾನ ಪರಿಷತ್ (ಎಂಎಲ್ಸಿ) ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಮುಖ್ಯಸ್ಥ ರಿಯಾಜ್ ಅಹಮದ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಟಿ. ರವಿ ಅವರ ಹೇಳಿಕೆ ಸಂಪೂರ್ಣವಾಗಿ ಆಧಾರರಹಿತವಾಗಿದೆ. “ಮುಲ್ಲಾ” ಎಂಬ ಪದಕ್ಕೆ ಇಸ್ಲಾಂ ಧರ್ಮದಲ್ಲಿ ವಿಶೇಷ ಅರ್ಥವಿದ್ದು, ಧರ್ಮದ ಕುರಿತು ಅಧ್ಯಯನ ಮಾಡಿದ ಧಾರ್ಮಿಕ ಪಂಡಿತರು, ಇಮಾಮರು ಹಾಗೂ ಮದರಸಾ ಶಿಕ್ಷಕರನ್ನು ಮುಲ್ಲಾ ಎಂದು ಕರೆಯಲಾಗುತ್ತದೆ. ಆದರೆ, “ಮುಲ್ಲಾ ಎಂದರೆ ಮುಸ್ಲಿಮರೇ ಅಲ್ಲ” ಎಂದು ಹೇಳಿರುವುದು ತಪ್ಪು ಮಾಹಿತಿ ಹರಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದ್ದರೂ, ಪ್ರಕರಣದಲ್ಲಿ ಯಾವುದೇ ಪರಿಣಾಮಕಾರಿ ಕ್ರಮ ನಡೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಿಯಾಜ್ ಅಹಮದ್ ಅವರು, ದೇಶದಲ್ಲಿ ವಿವಿಧ ವಿಚಾರಗಳಲ್ಲಿ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂಬ ಆರೋಪ ಮಾಡಿದರು. ಪ್ರತಿಭಟನೆಗಳಲ್ಲಿ ಭಾಗವಹಿಸುವುದು, ಆಹಾರ ಮತ್ತು ನೀರು ವಿತರಿಸುವಂತಹ ಮಾನವೀಯ ಕಾರ್ಯಗಳನ್ನು ಸಹ ಅಪರಾಧದಂತೆ ಬಿಂಬಿಸಲಾಗುತ್ತಿದೆ ಎಂದು ದೂರಿದರು.