ಮಂಜುನಾಥ್ ಶೆಟ್ಟಿ…
ವಾಹನವನ್ನು ದೂರುದಾರರ ಹೆಸರಿಗೆ ವರ್ಗಾಯಿಸಿಕೊಡದೆ ಮತ್ತು ಸೂಕ್ತ ಮಾಹಿತಿ ನೀಡದೆ ವಾಹನವನ್ನು ವಶಕ್ಕೆ ಪಡೆದುಕೊಂಡು ಸೇವಾ ನ್ಯೂನತೆ ಎಸಗಿದ ಬ್ಯಾಂಕ್ಗೆ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ರೂ.1.10 ಲಕ್ಷ ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ.
ಶಿವಮೊಗ್ಗ ತಾಲೂಕಿನ ಕುಸ್ಕೂರಿನ ನಿಖಿಲ್ ಆರ್. ಅವರು ಶಿವಮೊಗ್ಗದ ಶಂಕರ ಮಠ ರಸ್ತೆಯಲ್ಲಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವಿರುದ್ಧ ವಕೀಲರ ಮೂಲಕ ದೂರು ಸಲ್ಲಿಸಿದ್ದರು. ದೂರುದಾರರು ಫಯಾಜ್ ಬಿನ್ ಬಾಬು ಎಂಬುವರ ಹೆಸರಿನಲ್ಲಿದ್ದ ಐಷರ್ ಪ್ರೊ 3015 (ಸಂಖ್ಯೆ: KA-51-AF-9323) ಸರಕು ಸಾಗಣೆ ವಾಹನವನ್ನು ಖರೀದಿಸಿದ್ದು, ಎದುರುದಾರ ಬ್ಯಾಂಕ್ನಿಂದ ರೂ.13,50,000 ಸಾಲವನ್ನು 48 ಕಂತುಗಳಲ್ಲಿ ಪಾವತಿಸಲು ಮಂಜೂರು ಮಾಡಿಸಿಕೊಂಡಿದ್ದರು.
ವಾಹನವನ್ನು ದೂರುದಾರರ ಹೆಸರಿಗೆ ಆರ್ಟಿಒ ಮೂಲಕ ವರ್ಗಾಯಿಸಿಕೊಡಲು ತಗಲುವ ವೆಚ್ಚವನ್ನು ಬ್ಯಾಂಕ್ ಪಡೆದಿದ್ದರೂ, ಹೆಸರು ವರ್ಗಾವಣೆ ಮಾಡದೆ ವಿಳಂಬ ಧೋರಣೆ ಅನುಸರಿಸಿತ್ತು. ದೂರುದಾರರು ವಾಹನವನ್ನು ಉಪಯೋಗಿಸದೆಯೇ ₹90,000 ಇಎಮ್ಐ ಪಾವತಿಸಿದ್ದರು. ಆದರೆ, ಎದುರುದಾರ ಬ್ಯಾಂಕ್ನವರು ಸಾಲದ ಕಂತು ಪಾವತಿಯಾಗಿಲ್ಲವೆಂದು ನೆಪ ಒಡ್ಡಿ, ದಿನಾಂಕ 27/01/2026 ರಂದು ದೂರುದಾರರ ಮನೆಯ ಬಳಿ ನಿಲ್ಲಿಸಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ನಿಖಿಲ್ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ಆಯೋಗದ ತೀರ್ಪು…
ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಬ್ಯಾಂಕ್ನಿಂದ ಸೇವಾ ನ್ಯೂನತೆಯಾಗಿರುವುದನ್ನು ಎತ್ತಿಹಿಡಿದು ಆದೇಶಿಸಿದೆ.
ವಾಹನವನ್ನು ವಶಕ್ಕೆ ಪಡೆಯದೇ ದೂರುದಾರರ ಹೆಸರಿಗೆ ದಾಖಲೆಗಳನ್ನು ವರ್ಗಾಯಿಸಿ, ದೂರುದಾರರ ವಶಕ್ಕೆ ನೀಡಬೇಕು.
ಹೆಸರು ವರ್ಗಾವಣೆಯಾದ ನಂತರ ಸಾಲದ ಇಎಂಐ ಅನ್ನು ಆರ್ಬಿಐ ಸುತ್ತೋಲೆ ಮತ್ತು ನಿಯಮಾವಳಿಗಳಂತೆ ಮರುನಿಗದಿಪಡಿಸಬೇಕು.
ಮಾನಸಿಕ ಕಿರುಕುಳ ಮತ್ತು ಪರಿಹಾರವಾಗಿ ರೂ.1,00,000 ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ ರೂ.10,000 ಸೇರಿದಂತೆ ಒಟ್ಟು ರೂ.1,10,000 ಗಳನ್ನು 45 ದಿನಗಳ ಒಳಗಾಗಿ ಪಾವತಿಸಬೇಕು.
ತಪ್ಪಿದ್ದಲ್ಲಿ ವಾರ್ಷಿಕ ಶೇಕಡಾ 10 ರಷ್ಟು ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡತಕ್ಕದ್ದು ಎಂದು ಆಯೋಗವು ಸೆ. 08 ರಂದು ಆದೇಶಿಸಿದೆ.