ಜನ ಜೀವನ ಗುಣಮಟ್ಟ ವೃದ್ದಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಸ್ಮಾರ್ಟ್‍ಸಿಟಿ ಯೋಜನೆಯಡಿ ಉತ್ಕøಷ್ಟ ತಂತ್ರಜ್ಞಾನ ಬಳಸಿ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್(ಐಸಿಸಿಸಿ) ಮೂಲಕ ನಗರದ ನಿರ್ವಹಣೆ ಮಾಡುವ ಐಸಿಸಿಸಿ ಕಾರ್ಯ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಜಾರಿಯಾಗಲಿದೆ ಎಂದು ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್.ವಠಾರೆ ಭರವಸೆ ವ್ಯಕ್ತಪಡಿಸಿದರು.
ಭಾರತ ಸ್ವಾತಂತ್ರ್ಯ ಹೊಂದಿದ 75 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಇಂದು ನಗರದ ಸ್ಮಾರ್ಟ್ ಸಿಟಿ ಕಚೇರಿ ಐಸಿಸಿಸಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಂಯೋಜಿತ ಆಜ್ಞಾ ನಿಯಂತ್ರಣ ಕೇಂದ್ರ(ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್)ದ ಬಗ್ಗೆ ಸಂವಹನ ಮತ್ತು ದೃಷ್ಟಿಕೋನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
9 ಅಪ್ಲಿಕೇಷನ್‍ಗಳು : ಐಸಿಸಿಸಿ ವ್ಯವಸ್ಥೆಯಡಿ ಪ್ರಸ್ತುತ ನಗರದ 15 ವಾರ್ಡುಗಳನ್ನು ಒಳಗೊಂಡಂತೆ 9 ಅಪ್ಲಿಕೇಷನ್‍ಗಳಾದ ಇಂಟೆಲಿಜೆಂಟ್ ಪಬ್ಲಿಕ್ ಟ್ರಾನ್ಸ್‍ಪೋರ್ಟ್ ಸಿಸ್ಟಂ, ಎಮೆರ್ಜನ್ಸಿ ರೆಸ್ಪಾನ್ಸ್ ಸಿಸ್ಟಂ, ಇಂಟೆಲಿಜೆಂಟ್ ಸಾಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್, ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‍ಮೆಂಟ್ ಸಿಸ್ಟಂ, ಸ್ಮಾರ್ಟ್ ವಾಟರ್, ಸ್ಮಾರ್ಟ್ ಪಾರ್ಕಿಂಗ್, ಸ್ಮಾರ್ಟ್ ಪೋಲ್ಸ್, ಪೊಲೀಸ್ ಕಿಯಾಸ್ಕ್ ಮತ್ತು ವಿಡಿಯೋ ಮಾನಿಟರಿಂಗ್ ಸಿಸ್ಟಂಗಳನ್ನು ಜಾರಿಗೆ ತರುವ ಕಾರ್ಯ ಪ್ರಗತಿಯಲ್ಲಿದೆ.
ಟ್ರಾಫಿಕ್ ನಿರ್ವಹಣೆ : ಇಂಟೆಲಿಜೆನ್ಸ್ ಟ್ರಾಫಿಕ್ ನಿರ್ವಹಣೆ ಯೋಜನೆಯಡಿ ಪೊಲೀಸ್ ಇಲಾಖೆ ಸೂಚಿಸಿರುವ ನಗರದ 12 ಜಂಕ್ಷನ್‍ಗಳಲ್ಲಿ ಇಂಟೆಲಿಜೆನ್ಸ್ ಟ್ರಾಫಿಕ್ ನಿರ್ವಹಣೆ ಕಾರ್ಯ ಪ್ರಗತಿಯಲ್ಲಿದ್ದು ನಗರದ 9 ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಲೇಸರ್ ಪ್ರೊಫೈಲಿಂಗ್ ಮತ್ತು ರಾಡಾರ್ ಆಧಾರಿತ ಸೆನ್ಸರ್ ಮಾನಿಟರಿಂಗ್ ಟ್ರಾಫಿಕ್ ಬಳಕೆ ಮಾಡಿ ವೇಗ ಪರೀಕ್ಷೆ, ಟ್ರಾಫಿಕ್ ಸಾಂದ್ರತೆ, ವಾಹನಗಳ ವರ್ಗೀಕರಣ ಮತ್ತು ಇ-ಚಾನಲ್ ಸಿಸ್ಟಂ, ರೆಡ್‍ಲೈಟ್ ಉಲ್ಲಂಘನೆ, ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು ಎಲ್ಲ ವ್ಯವಸ್ಥೆಗಳನ್ನು ಐಸಿಸಿಸಿ ಮೂಲಕ ನಿರ್ವಹಿಸಲಾಗುವುದು.
ಸ್ಮಾರ್ಟ್ ಪಾರ್ಕಿಂಗ್: ನಗರದಲ್ಲಿ 13 ಕಡೆ ಆಫ್‍ಸ್ಟ್ರೀಟ್ ಮತ್ತು 10 ಕಡೆಗಳಲ್ಲಿ ಆನ್‍ಸ್ಟ್ರೀಟ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಆಫ್‍ಸ್ಟ್ರೀಟ್ ಪಾರ್ಕಿಂಗ್ ವ್ಯಸ್ಥೆಯಲ್ಲಿ ಬೂಮ್ ಬ್ಯಾರಿಯರ್‍ಗಳನ್ನು ಅಳವಡಿಸಲಾಗಿದೆ. ಲೇನ್ ಮಾರ್ಕಿಂಗ್ ಮಾಡಲಾಗಿದೆ. ಸಾರ್ವಜನಿಕರು ಸ್ಮಾರ್ಟ್ ಸಿಟಿಯಿಂದ ಅಭಿವೃದ್ದಿಪಡಿಸುತ್ತಿರುವ ‘ಒನ್ ಸಿಟಿ ಒನ್ ಆ್ಯಪ್ ಮೂಲಕ ತಾವು ಮನೆಯಿಂದ ಹೊರಡುವ ಮುನ್ನವೇ ಲಭ್ಯವಿರುವ ಪಾರ್ಕಿಂಗ್ ಸ್ಲಾಟ್ ಮತ್ತು ಇತರೆ ಮಾಹಿತಿಯನ್ನು ಇದರಲ್ಲಿ ನೋಡಬಹುದು.
ಕನ್ಸರ್ವೆನ್ಸಿ ರಸ್ತೆಗಳನ್ನು ಅಭಿವೃದ್ದಿಪಡಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ ಮತ್ತು ಮಕ್ಕಳ ಮನೋರಂಜನೆ ತಾಣಗಳಾಗಿ ಅಭಿವೃದ್ದಿ ಪಡಿಸುವ ಮೂಲಕ ಈ ಜಾಗವನ್ನು ಉಪಯುಕ್ತಗೊಳಿಸುವ ಉದ್ದೆಶ ಹೊಂದಲಾಗಿದೆ.
ಘನ ತ್ಯಾಜ್ಯ ನಿರ್ವಹಣೆ: ನಗರದ 35 ವಾರ್ಡುಗಳ 85,833 ವಸತಿಗಳಿಂದ ಸುಮಾರು 163 ಟನ್ ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು 20 ಆಟೋ ಟಿಪ್ಪರ್‍ಗಳು, 9 ಟಿಪ್ಪರ್ ಟ್ರಕ್ ಸೇರಿದಂತೆ ಒಟ್ಟು 43 ವಾಹನಗಳಲ್ಲಿ ಘನ ತ್ಯಾಜ್ಯ ಸಾಗಣೆ ವ್ಯವಸ್ಥೆ ಇದೆ. ಎಲ್ಲ ವಾಹನಗಳ ಓಡಾಟದ ಮೇಲೆ ಕಣ್ಣಿಡಲು ಜಿಪಿಎಸ್ ಅಳವಡಿಕೆ, ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ ಖಾತ್ರಿಗೆ ಮನೆಗಳಿಗೆ ಹೆಚ್‍ಎಫ್ ಆರ್‍ಎಫ್‍ಐಡಿ ಅಳವಡಿಕೆ, ಸಿಬ್ಬಂದಿಗಳ ಬಯೋಮೆಟ್ರಿಕ್ ಹಾಜರಾತಿ, ಲ್ಯಾಂಡ್‍ಫಿಲ್ ಸೈಟಿನಲ್ಲಿ ಸಿಸಿ ಟಿವಿ ಹಾಗೂ ಬ್ಲ್ಯಾಕ್ ಸ್ಟಾಟ್‍ಗಳಲ್ಲಿ 30 ಸ್ಥಿರ ಬಾಕ್ಸ್ ಸಿಸಿ ಕ್ಯಾಮರಾ ಅಳವಡಿಕೆಯಿಂದ ಪರಿಣಾಮಕಾರಿ ವಿಲೇವಾರಿ ಬಗ್ಗೆ ಖಾತ್ರಿಪಡಿಸುವಿಕೆ.
ಸ್ಮಾರ್ಟ್ ವಾಟರ್ : 24*7 ಕುಡಿಯುವ ನೀರು ಸರಬರಾಜು ಯೋಜನೆಯಡಿ ಒಟ್ಟು 52 ಓಹೆಚ್‍ಟಿಗಳು ಇದ್ದು ಎಎಂಆರ್ ಬಲ್ಕ್ ವಾಟರ್ ಫ್ಲೋ ಮೀಟರ್ ಅಳವಡಿಸಲಾಗಿದೆ. ಹಾಗೂ ನೀರಿನಲ್ಲಿನ ಇತರೆ ಪ್ಯಾರಾಮೀಟರ್ ಪರೀಕ್ಷಿಸಲು ಮೀಟರ್ ಅಳವಡಿಸಲಾಗಿದೆ ಹಾಗೂ ನೀರು ವ್ಯರ್ಥವಾಗಿ ಹೋಗುವುದದನ್ನು ಶೇ.40 ರಿಂದ 20ಕ್ಕೆ ಇಳಿಸುವ ಉದ್ದೇಶದಿಂದ ಕ್ರಮ ವಹಿಸಲಾಗಿದೆ.
ಇಂಟೆಲಿಜೆಂಟ್ ಸಾರಿಗೆ ನಿರ್ವಹಣೆ ವ್ಯವಸ್ಥೆ: ಎಲ್ಲ ಕೆಎಸ್‍ಆರ್‍ಟಿಸಿ ಬಸ್‍ಗಳ ಕಾರ್ಯಾಚರಣೆ ಟ್ರ್ಯಾಕ್ ಮಾಡಲು ವಿಟಿಯು(ವೆಹಿಕಲ್ ಟ್ರ್ಯಾಕಿಂಗ್ ಯುನಿಟ್) ಅಳವಡಿಕೆಗೆ ಹಾಗೂ ಟ್ರಿಪ್‍ಗಳ ಯೋಜನೆ ಮತ್ತು ವೇಳಾಪಟ್ಟಿಗಾಗಿ ಮೊಬೈಲ್ ಆಪ್ ಬಳಕೆಗೆ ಪ್ರಸ್ತಾಪಿಸಲಾಗಿದೆ. ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಲ್ಲಿ ಇದನ್ನು ಅಳವಡಿಸಲು ಪ್ರಸ್ತಾಪಿಸಲಾಗಿದೆ.
ಸ್ಮಾರ್ಟ್ ಪೋಲ್ಸ್: ನಗರದಲ್ಲಿ ಡಿಜಿಟಲ್ ಬಿಲ್‍ಬೋರ್ಡ್ ಹೊಂದಿರುವ, ಎನ್‍ವೈರ್ನಮೆಂಟಲ್ ಸೆನ್ಸರ್ಸ್, ಎಲ್‍ಇಡಿ ಬೀದಿದೀಪಗಳನ್ನು ಹೊಂದಿರುವ ಹಾಗೂ ನಗರ ಸರ್ವೇಕ್ಷಣೆಗೆ ಡ್ರೋನ್, ಅಪಾಯ ಪರಿಸ್ಥಿತಿಯಲ್ಲಿ ಪ್ಯಾನಿಕ್ ಕಾಲ್ ಮತ್ತು ಸಾರ್ವಜನಿಕರನ್ನು ಉದ್ದೇಶಿಸುವ ಮೈಕ್, ನೆಟ್‍ವರ್ಕ್ ಕ್ಯಾಮೆರಾ, ಸೋಲಾರ್ ವ್ಯವಸ್ಥ ಹೊಂದಿರುವ ಸ್ಮಾರ್ಟ್‍ಪೋಲ್ಸ್ ಗಳನ್ನು ನಗರದ 9 ಭಾಗಗಳಲ್ಲಿ ಮೊದಲನೇ ಹಂತದಲ್ಲಿ ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸ್ಮಾರ್ಟ್‍ಸಿಟಿ ಲಿ.ಯೋಜನೆಯ ಅಧಿಕಾರಿ ಪ್ರದೀಪ್ ಕುಮಾರ್ ಇಂಟಿಗ್ರೇಟೆಡ್ ಕಮ್ಯಾಂಡ್ & ಕಂಟ್ರೋಲ್ ಸೆಂಟರ್ ಬಗ್ಗೆ ಪಿಪಿಟಿ ಪ್ರದರ್ಶನ ಮೂಲಕ ವಿಶದವಾಗಿ ವಿವರಿಸಿದರು.
ಕಾರ್ಯಾಗಾರದಲ್ಲಿ ಶ್ರೀಕುಮಾರ್ ಮತ್ತು ಇತರೆ ಪ್ರತಿಷ್ಟಿತ ನಾಗರೀಕರು ಮಾತನಾಡಿ, ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಇತರೆ ಇಲಾಖೆ, ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಬೇಕು. ಸಹಕಾರ ಕೊರತೆಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಯಾವುದೇ ಯೋಜನೆ ಜಾರಿಗೂ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು. ಜೊತೆಗೆ ಸ್ಮಾರ್ಟ್ ಸಿಟಿ ಯೋಜನೆಗಳು ಜನಸ್ನೇಹಿಯಾಗಿ ಅವರ ಪರವಾಗಿರಬೇಕು ಹಾಗೂ ಈ ಯೋಜನೆ ಎಂದಿಗೆ ಮುಗಿಯುತ್ತದೆ ಎಂದು ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು.
ಕಾರ್ಯಾಗಾರವನ್ನು ಪ್ರತಿಷ್ಟಿತ ನಾಗರೀಕರು, ರೋಟರಿ, ಲಯನ್ಸ್, ಇತ್ಯಾದಿ ಪ್ರಮುಖ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪೊಲೀಸ್, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ತರು, ಅಗ್ನಿಶಾಮಕ ದಳ ಹಾಗೂ ಪತ್ರಕರ್ತರೊಂದಿಗೆ ಸಂವಹಿಸುವ ಉದ್ದೇಶದಿಂದ ಏರ್ಪಡಿಸಲಾಗಿದ್ದು, ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ವಿವಿಧ ಸಂಘ ಸಂಸ್ಥೆಗಳು, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ