ಕೈಗಾರಿಕೆಗಳಿಗೆ ಅಗತ್ಯವಿರುವ ಸಿದ್ದ ತರಬೇತಿಯನ್ನು ನೀಡುತ್ತಿರುವ ಪಠ್ಯಕ್ರಮ ಹೊಂದಿರುವ ದೇಶದ ಪ್ರಮುಖ ರಾಜ್ಯ ಎನ್ನುವ ಹೆಗ್ಗಳಿಕೆ ನಮ್ಮದು. ರಾಜ್ಯದಲ್ಲಿ ಯುವ ಜನಾಂಗಕ್ಕೆ ಉದ್ಯೋಗಾವಕಾಶ ಪಡೆದುಕೊಳ್ಳಲು ವಿಫುಲ ಅವಕಾಶಗಳನ್ನು ಕಲ್ಪಿಸಿದ್ದು, ಅದರ ಉಪಯೋಗ ಪಡೆದುಕೊಳ್ಳುವಂತೆ ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವರಾದ ಡಾ ಸಿ.ಎನ್‌ ಅಶ್ವಥ್‌ನಾರಾಯಣ ಕರೆ ನೀಡಿದರು.

ಇಂದು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂಬೆಸಿ ಗಾಲ್ಫ್‌ ಲಿಂಕ್ಸ್‌ ಬಿಸಿನೆಸ್‌ ಪಾರ್ಕ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸಚಿವ ಕೆ ಜೆ ಜಾರ್ಜ್‌ ಅವರು ಸಿಎಸ್‌ಆರ್‌ ನಿಧಿಯನ್ನು ಬಳಸಿಕೊಂಡು ನಿರ್ಮಿಸಿರುವ ಎರಡನೇ ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಕಾಲ ಬದಲಾದಂತೆ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ದೇಶದ ಯುವ ಜನಾಂಗಕ್ಕೆ ಈ ಬಗ್ಗೆ ಸೂಕ್ತ ಅವಕಾಶ ದೊರಕಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೌಶಲ್ಯಾಭಿವೃದ್ದಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಬೆಂಗಳೂರು ನಗರದಲ್ಲಿ ಪ್ರತಿ ವರ್ಷ 20 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳ ನಿರ್ಮಾಣವಾಗುತ್ತಿದೆ ಎಂದರು.

ನಮ್ಮ ರಾಜ್ಯದ ಅದರಲ್ಲೂ ನಗರದ ಯುವಜನಾಂಗ ಇದರ ಉಪಯೋಗವನ್ನು ಹೆಚ್ಚು ಪಡೆದುಕೊಳ್ಳಬೇಕು. ರಾಜ್ಯ ಸರಕಾರ ರಾಜ್ಯದ 150 ಐಟಿಐ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳನ್ನು ಅಭಿವೃದ್ದಿಗೊಳಿಸಿದೆ. ಈ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ 41 ನೂತನ ಕೋರ್ಸ್‌ಗಳನ್ನು ಅಳವಡಿಸಲಾಗುತ್ತಿದೆ. ಈ ತರಬೇತಿಯ ಪಠ್ಯಕ್ರಮ ಕೈಗಾರಿಕಾ ಸಿದ್ದವಾದಂತಹದ್ದಾಗಿದ್ದು, ಇಂತಹ ಪಠ್ಯಕ್ರಮ ಅಳವಡಿಸಿಕೊಂಡಿರುವ ಪ್ರಮುಖ ರಾಜ್ಯ ಎನ್ನುವುದು ನಮ್ಮ ಹೆಗ್ಗಳಿಕೆಯಾಗಿದೆ. ಈ ಶೈಕ್ಷಣಿಕ ಸಂಸ್ಥೆಗಳಲ್ಲಿ ಶುಲ್ಕ ಬಹಳ ಕಡಿಮೆಯಿದ್ದು, ಸರಕಾರದ ವತಿಯಿಂದ ಪ್ರತಿವರ್ಷ ಪ್ರತಿಯೊಬ್ಬ ವಿದ್ಯಾರ್ಥಿ ಮೇಲೆ ಸುಮಾರು 3 ಲಕ್ಷರೂಪಾಯಿಗಳ ವೆಚ್ಚವನ್ನು ಮಾಡಲಾಗುತ್ತದೆ. ಸರ್ವಜ್ಞ ನಗರದಲ್ಲಿ ಆರಂಭವಾಗಿರುವಂತಹ ಕೌಶಲ್ಯಾಭಿವೃದ್ದಿ ಕೇಂದ್ರಗಳು ಪ್ರಸ್ತುತ ಸನ್ನಿವೇಶದಲ್ಲಿ ಉದ್ಯೋಗ ಪಡೆಯಲು ಹಾಗೂ ಉದ್ಯೋಗದಲ್ಲಿ ಅಭಿವೃದ್ದಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯೋಜನವಾಗಲಿವೆ ಎಂದು ಹೇಳಿದರು.

ಮಾಜಿ ಸಚಿವ ಮತ್ತು ಸರ್ವಜ್ಞ ನಗರ ಶಾಸಕರಾಗಿರುವ ಕೆ.ಜೆ ಜಾರ್ಜ್‌ ಮಾತನಾಡಿ, ಯುವಕರು ಹಾಗೂ ನಮ್ಮ ನಗರದ ಕಾರ್ಮಿಕ ವರ್ಗದವರಿಗೆ ಅಗತ್ಯ ಕೌಶಲ್ಯಗಳನ್ನು ಹೆಚ್ಚಿಸುವುದರಿಂದ ಅವರ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಅಲ್ಲದೆ, ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅನುಕೂಲವಾಗುತ್ತವೆ. ಕರೋನಾ ನಂತರದ ಬದಲಾವಣೆಗಳಲ್ಲಿ ಹಲವಾರು ಜನರು ಪ್ರಾಥಮಿಕವಾಗಿ ತಮ್ಮ ಜೀವನಕ್ಕೆ ಅವಲಂಬಿತರಾಗಿದ್ದ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಹಾಗೆಯೇ, ಹೊಸ ಉದ್ಯೋಗಕ್ಕೆ ಅವರಿಗಿದ್ದ ಕೌಶಲ್ಯಗಳಲ್ಲಿ ಕೊರತೆ ಉಂಟಾಗುವುದನ್ನು ನಾವು ಗಮನಿಸಿದೆವು. ಇದಕ್ಕೆ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಿ ಅದರಲ್ಲಿ ಸಫಲರಾಗಿದ್ದೇವೆ ಎಂದರು.

ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಜೀವನಹಳ್ಳಿಯಲ್ಲಿ ಇಂದು ಉದ್ಘಾಟನೆಯಾಗಿರುವುದು ಎರಡನೇ ಕೌಶಲ್ಯಾಭಿದ್ದಿ ಕೇಂದ್ರವಾಗಿದೆ. ಕೌಶಲ್ಯಾಭಿವೃದ್ದಿ ತರಬೇತಿ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಡಾನ್‌ ಬಾಸ್ಕೋ ಟೆಕ್‌ ಸೋಸೈಟಿ ಸಂಯುಕ್ತಾಶ್ರಯದಲ್ಲಿ, ಈ ಕೌಶಲ್ಯಾಭಿವೃದ್ದಿ ಕೇಂದ್ರದಲ್ಲಿ ರೆಫ್ರೆಜರೇಶನ್‌ ಮತ್ತು ಏರ್‌ ಕಂಡೀಷನರ್‌ ತಾಂತ್ರಿಕ ತರಬೇತಿ, ಎಲೆಕ್ಟ್ರಕಿಕ್‌ ಟೆಕ್ನೀಶಿಯನ್‌ ತರಬೇತಿ ಹಾಗೂ ಕಂಪ್ಯೂಟರ್‌ ತರಬೇತಿಯ ಕೋರ್ಸ್‌ಗಳನ್ನು ಪ್ರಾರಂಭಿಸಿದ್ದೇವೆ. ತರಬೇತಿಯ ನಂತರ ಅವರಿಗೆ ಉದ್ಯೋಗಾವಕಾಶ ದೊರಕಿಸಿಕೊಡುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ ಎಂದು ಕೆ.ಜೆ. ಜಾರ್ಜ್‌ ಹೇಳಿದರು.

ಕಾರ್ಯಕ್ರಮದಲ್ಲಿ ಸರ್ವಜ್ಞ ನಗರ ಶಾಸಕ ಹಾಗೂ ಮಾಜಿ ಸಚಿವರಾದ ಕೆ ಜೆ ಜಾರ್ಜ್‌, ಸಂಸದ ಪಿ ಸಿ ಮೋಹನ್‌, ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ಗೌರವ್‌ ಗುಪ್ತಾ, ಕರ್ನಾಟಕ ಓಲಂಪಿಕ್‌ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗೋವಿಂದರಾಜ್‌, ಪರಿಷತ್‌ ಸದಸ್ಯರಾದ ರಮೇಶ್‌ ಗೌಡ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ