ನಿನ್ನ ಬಟ್ಟೆ ಅಷ್ಟೇ ಅಲ್ಲ ಬದಲು
ನೀ ನಡೆದ ಬಟ್ಟೆಯೂ ಬದಲು
ದಬ್ಬಾಳಿಕೆ ಮಾಡಿದವರಿಗೆ ಶಾಂತಿಮಂತ್ರ
ಮಸೆದವರಿಗೂ ಅಹಿಂಸಾಮಂತ್ರ

ನಿನ್ನ ಮೆಚ್ಚುವವರಿಗೆ ಮುಗುಳ್ನಗೆ
ದ್ವೇಷಿಸುವವರಿಗೂ ಅದೇ ಮಂದಹಾಸ
ಎಲ್ಲ ದಾರಿಗಳೂ ಸಾಗಿ ಸವೆದರೂ
ಸವೆಯದು ನಿನ್ನ ಸತ್ಯ ಶಾಂತಿ ಪಥ

ಅರೆನಗ್ನ ಫಕೀರನೆಂದರೂ
ತನ್ನ ತಾನು ನಿಗ್ರಹಿಸಿ
ಬದುಕನ್ನು ಪ್ರಯೋಗದ ಕುಲುಮೆಯಾಗಿಸಿ
ಸತ್ಯಾನ್ವೇಷಣೆಯಲಿ ನಿತ್ಯ ಸೂರ್ಯ

ಹೇ ರಾಮ್ ಎಂಬ ನಾಮವ ಜಪಿಸುತಾ
ರಾಮ್ ರಹೀಮರ ಒಗ್ಗೂಡಿಸಲು ಹೋರಾಡಿದವ
ನಿನ್ನಷ್ಟು ಹೊಗಳಿಸಿಕೊಂಡವರಿಲ್ಲ
ನಿನ್ನನ್ನು ತೆಗಳಿದವರು ಈ ಮಣ್ಣಲಿಹರು
ರಾಷ್ಟ್ರಕ್ಕೆ ಪಿತನೊಬ್ಬನೇ ಬಾಪು

ತಂದಿಟ್ಟ ಸ್ವಾತಂತ್ರ್ಯದಲ್ಲಿ ನೀ ಅಮರ
ಮಹಾತ್ಮನಂತೆ ಬದುಕಿದ ಬದುಕು
ಜಗಕ್ಕೆ ಆದರ್ಶಪ್ರಾಯ
ಗುಂಡಿಕ್ಕಿದವನ ಆಗಲೇ ಕ್ಷಮಿಸಿದವ

ಗಾಂಧೀಗೆ ಗಾಂಧೀಯೇ ಸರಿಸಾಟಿ
ಅವರಂತೆ ಮತ್ತೊಬ್ಬರು ಹುಟ್ಟುವುದಿಲ್ಲ
ಅವರಂತೆ ಬದುಕಲು ಸಾಧ್ಯವಿಲ್ಲ
ಗಾಂಧಿ….. ಮತ್ತೆ ಹುಟ್ಟುವುದಿಲ್ಲ
ಯಾಕೆಂದರೆ ಸತ್ತಿಲ್ಲ.

*ಶ್ರೀಮತಿ.ಅನಿತಕೃಷ್ಣ* *ಶಿಕ್ಷಕಿ.ತೀರ್ಥಹಳ್ಳಿ*